ಮಂಗಳೂರು: ಕೆಎಸ್ಸಾರ್ಟಿಸಿ ಸಂಚಾರ ಸುಗಮ
file photo
ಮಂಗಳೂರು, ಎ.18: ಆರನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕೆಎಸ್ಸಾರ್ಟಿಸಿ ಬಸ್ ನೌಕರರು ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಮುಷ್ಕರ ದ.ಕ. ಜಿಲ್ಲೆಯಲ್ಲಿ ಕ್ಷೀಣಿಸುತ್ತಾ ಬಂದಿದ್ದು, ಬಸ್ ಸಂಚಾರ ಸುಗಮಗೊಳ್ಳುತ್ತಿವೆ.
ರವಿವಾರ ಜಿಲ್ಲೆಯಲ್ಲಿ ಸುಮಾರು 590 ರಷ್ಟು ಕೆಎಸ್ಸಾರ್ಟಿಸಿ ಬಸ್ಗಳು ರಸ್ತೆಗಿಳಿದಿವೆ. ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಲ್ಲಿ 360 ರೂಟ್ಗಳಲ್ಲಿ ಬಸ್ ಕಾರ್ಯಾಚರಣೆ ನಡೆಸಿದೆ. ಪುತ್ತೂರು ವಿಭಾಗದಿಂದ ವಿವಿಧ ಕಡೆಗಳಲ್ಲಿ ಸುಮಾರು 230ಕ್ಕೂ ಹೆಚ್ಚಿನ ಬಸ್ ಸಂಚರಿಸಿದೆ.
ಆದರೆ ನಗರದಲ್ಲಿ ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿರುವುದರಿಂದ ಮತ್ತು ಕೋವಿಡ್ ಎರಡನೇ ಅಲೆಯ ಪರಿಣಾಮ ನರ್ಮ್ ಬಸ್ ಸಂಚರಿಸಲಿಲ್ಲ. ಉಳಿದಂತೆ ವಿವಿಧ ರೂಟ್ಗಳಲ್ಲಿ ಖಾಸಗಿ ಮತ್ತು ಸಿಟಿ ಬಸ್ ಸಂಚಾರ ಎಂದಿನಂತೆ ಸಂಚರಿಸಿತ್ತು.
ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ 25 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ. ಸುಮಾರು 100 ಮಂದಿ ಬೇರೆ ವಿಭಾಗದಿಂದ ಮಂಗಳೂರು ವಿಭಾಗಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಪುತ್ತೂರು ವಿಭಾಗದಿಂದ 47 ಮಂದಿಯನ್ನು ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದ್ದು, 130 ಮಂದಿ ಬೇರೆ ವಿಭಾಗದಿಂದ ಪುತ್ತೂರಿಗೆ ವರ್ಗಾವಣೆಯಾಗಿ ಬರುವ ಸಾಧ್ಯತೆ ಇದೆ. ಒಟ್ಟಾರೆ ದ.ಕ.ಜಿಲ್ಲೆಯಲ್ಲಿ ಮುಷ್ಕರಿಂದ ಸುಮಾರು 4 ಕೋ.ರೂ.ಗೂ ಅಧಿಕ ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.