ದೇಶವಾಸಿಗಳಿಗೆ ಆಕ್ಸಿಜನ್ ಕೊಡಲಾಗದ ಪಿಎಂ ಕೇರ್ಸ್ ಫಂಡ್ ಊಟಕ್ಕಿಲ್ಲದ ಉಪ್ಪಿನಕಾಯಿ: ಕಾಂಗ್ರೆಸ್ ಟೀಕೆ

ಬೆಂಗಳೂರು, ಎ.21: ದೇಶದ ಆರೋಗ್ಯ ಕ್ಷೇತ್ರ ಹಾಗೂ ಕೊರೋನ ಸೋಂಕನ್ನು ಬಿಜೆಪಿ ಸರಕಾರ ನಿರ್ಲಕ್ಷಿಸಿದ್ದರ ಪರಿಣಾಮವೇ ದೇಶದಲ್ಲಿ ಲಸಿಕೆ ಕೊರತೆ, ಬೆಡ್ ಕೊರತೆ, ರೆಮ್ಡೆಸಿವಿರ್ ಕೊರತೆ, ಆಕ್ಸಿಜನ್ ಕೊರತೆ. ನಯಾಪೈಸೆ ಉಪಯೋಗಿಸದ, ದೇಶವಾಸಿಗಳಿಗೆ ಆಕ್ಸಿಜನ್ ಕೊಡಲಾಗದ ಪಿಎಂ ಕೇರ್ಸ್ ಫಂಡ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಎಂದು ಕಾಂಗ್ರೆಸ್ ಕಿಡಿಗಾರಿದೆ.
ಈ ಸಂಬಂಧ ಟ್ವೀಟ್ಗಳನ್ನು ಮಾಡಿರುವ ಕಾಂಗ್ರೆಸ್, ಕೊರೋನದಿಂದ ಕಿಂಚಿತ್ತೂ ಪಾಠ ಕಲಿಯದ ರಾಜ್ಯ ಬಿಜೆಪಿ ಸರಕಾರಕ್ಕೆ ತಜ್ಞರ ಸಲಹೆಗಳು ‘ಗೋರ್ಕಲ್ಲ ಮೇಲೆ ಮಳೆ ಸುರಿದಂತೆ’ ಅಷ್ಟೇ. ಟೆಸ್ಟಿಂಗ್ನಲ್ಲೂ ಫೇಲ್, ಟ್ರಾಕಿಂಗ್ನಲ್ಲೂ ಫೆಲ್, ಟ್ರೀಟಿಂಗ್ನಲ್ಲೂ ಫೆಲ್, ಬೌದ್ಧಿಕವಾಗಿ ದಿವಾಳಿಯಾದ ಈ ಸೋಂಕಿತ ಸರಕಾರಕ್ಕೆ ಕೊರೋನ ನಿರ್ವಹಿಸುವ ಕನಿಷ್ಠ ಇಚ್ಛಾಶಕ್ತಿಯೂ ಇಲ್ಲ. ಕಾರ್ಯಸೂಚಿಯೂ ಇಲ್ಲ ಎಂದು ಆರೋಪಿಸಿದೆ.
ಸೀರಂ ಸಂಸ್ಥೆ ತನ್ನ ಕೋವಿಶೀಲ್ಡ್ ಲಸಿಕೆಗೆ ನಿಗದಿಪಡಿಸಿದ ಬೆಲೆ ರಾಜ್ಯ ಸರಕಾರಗಳಿಗೆ- ರೂ.400/ಡೋಸ್, ಖಾಸಗಿ ಆಸ್ಪತ್ರೆಗಳಿಗೆ-ರೂ.600/ಡೋಸ್. ಇದೇ ಸಂಸ್ಥೆ ಹಿಂದೆ ಕೇಂದ್ರ ಸರಕಾರಕ್ಕೆ ರೂ.157.50 ಕ್ಕೆ ನೀಡಿತ್ತು. ಲಸಿಕೆ ಖರೀದಿಯ ಹೊರೆ ರಾಜ್ಯಗಳ ತಲೆ ಮೇಲೆ. ರಾಜ್ಯ ಬಿಜೆಪಿ ಲಸಿಕೆ ಖರೀದಿಗೆ ಎಷ್ಟು ಹಣ ಮೀಸಲಿರಿಸಿದ್ದೀರಿ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರೇ, ವೈದ್ಯಕೀಯ ವ್ಯವಸ್ಥೆ ಹಾಗೂ ಸೋಂಕು ನಿಯಂತ್ರಣದ ಬಗ್ಗೆ ಕೇವಲ ಬೆಂಗಳೂರು ಕೇಂದ್ರಿತವಾಗಿ ಮಾತ್ರ ಚಿಂತಿಸದೆ ರಾಜ್ಯಾದ್ಯಂತ ಜಿಲ್ಲೆ, ತಾಲೂಕುಗಳನ್ನೂ ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುವುದು ಅಗತ್ಯ. ಜಿಲ್ಲಾ ಕೇಂದ್ರಗಳಲ್ಲಿಯೂ ಕನಿಷ್ಠ ವೈದ್ಯಕೀಯ ಸೌಲಭ್ಯಗಳು ಇಲ್ಲದೆ ಜನ ಪರದಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯ ಬಿಜೆಪಿ, ಗಂಟೆ ಅಲ್ಲಾಡಿಸಿ ಎನ್ನುವ ನಿಮ್ಮ ಟೆಲಿಪ್ರಾಂಪ್ಟರ್ ಪ್ರಧಾನಿ ನರೇಂದ್ರ ಮೋದಿ ಅವರಂತೆ ಅವರ ಸಂಪುಟವೂ ಗಾಂಪರ ಗುಂಪು. ನಿನ್ನೆ ರಾತ್ರಿ ಟೆಲಿಪ್ರಾಂಪ್ಟರ್ ನಲ್ಲಿ ಏನು ಓದಿದರು ಎಂದು ಸ್ವತಃ ಅವರಿಗೇ ಅರಿವಿಲ್ಲ. ಮಾನ ಮುಚ್ಚಿಕೊಳ್ಳಲು ನೀವೇನೆ ಹೇಳಿದರೂ ರಾಹುಲ್ ಗಾಂಧಿ ಅವರ ಸಲಹೆಗಳನ್ನು ಜಾರಿಗೊಳಿಸುತ್ತಿರುವುದು ಅಭಿನಂದನೀಯ ಎಂದು ಕಾಂಗ್ರೆಸ್ ಹೇಳಿದೆ.
ಸುಳ್ಳುಗಳು ನಿಮ್ಮ ಪೇಟೆಂಟ್ ಅಲ್ಲವೇ ರಾಜ್ಯ ಬಿಜೆಪಿ. ವಿಸ್ತರಿಸುತ್ತಿದ್ದೇವೆ ಎನ್ನುತ್ತಿದ್ದಿರಿ, ಸ್ಥಗಿತಗೊಂಡಿತ್ತು ಎನ್ನುವುದನ್ನ ಪರೋಕ್ಷವಾಗಿ ಒಪ್ಪಿಕೊಂಡಿದ್ದಿರಲ್ಲವೇ. ಇದುವರೆಗೂ ಎಷ್ಟು ಮಂದಿಗೆ ಆ ವಿಮೆ ಸೌಲಭ್ಯ ದೊರಕಿದೆ? ರಾಜ್ಯದಲ್ಲಿ ಎಷ್ಟು ಕುಟುಂಬಗಳು ಸೌಲಭ್ಯ ಪಡೆದಿವೆ? ಹೇಳಲು ಸಾಧ್ಯವೇ? ಉತ್ತರಿಸಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಅತ್ಯಾಚಾರ ಆರೋಪಿ ತಲೆ ಮರೆಸಿಕೊಂಡಿದ್ದಾರೆಯೇ? ಬಂಧನವೂ ಆಗಿಲ್ಲ, ವಿಚಾರಣೆಗೂ ಬಂದಿಲ್ಲ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ, ಎಸ್ಐಟಿ ರಚಿಸಿದ್ದು ಆರೋಪಿಯ ರಕ್ಷಣೆಗಾಗಿ ಎಂದು ಬಹಿರಂಗವಾಗಿ ಒಪ್ಪಿಕೊಂಡುಬಿಡಿ, ಇಲ್ಲವೇ ಆರೋಪಿಯನ್ನು ಕೂಡಲೇ ಬಂಧಿಸಿ. ಕೊರೋನ ಸಂಕಟದ ನಡುವೆ ಗಂಭೀರ ಪ್ರಕರಣವೊಂದನ್ನು ಮುಚ್ಚಿ ಹಾಕುವ ನಿಮ್ಮ ಹುನ್ನಾರ ಜನತೆಗೆ ತಿಳಿದಿದೆ ಎಂದು ಕಾಂಗ್ರೆಸ್ ಟೀಕಿಸಿದೆ.







