ಆಮ್ಲಜನಕ ಕೊರತೆಯಿಂದ ಕೋವಿಡ್ ರೋಗಿಗಳು ಮೃತ್ಯು: ಕೇಂದ್ರ ಜವಾಬ್ದಾರಿ ತೆಗೆದುಕೊಳ್ಳಬೇಕೆಂದ ರಾಹುಲ್ ಗಾಂಧಿ

ಹೊಸದಿಲ್ಲಿ,ಎ.23: ಕೊರೋನವೈರಸ್ ಪಿಡುಗು ವ್ಯಾಪಕವಾಗಿ ಹಬ್ಬುತ್ತಿರುವ ನಡುವೆ ದೇಶದಲ್ಲಿ ಆಮ್ಲಜನಕದ ತೀವ್ರ ಕೊರತೆಗೆ ಕೇಂದ್ರದ ನರೇಂದ್ರ ಮೋದಿ ಸರಕಾರವೇ ಹೊಣೆಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಆರೋಪಿಸಿದರು.
ಕೊರೋನ ಶರೀರದಲ್ಲಿ ಆಮ್ಲಜನಕ ಮಟ್ಟ ಕುಸಿಯುವಂತೆ ಮಾಡುತ್ತದೆ,ಆದರೆ ಆಮ್ಲಜನಕದ ಮತ್ತು ಐಸಿಯು ಹಾಸಿಗೆಗಳ ಕೊರತೆ ಹಲವಾರು ಸಾವುಗಳಿಗೆ ಕಾರಣವಾಗುತ್ತಿದೆ. ಇದಕ್ಕೆ ಕೇಂದ್ರ ಸರಕಾರವೇ ನೇರ ಹೊಣೆಯಾಗಿದೆ ಎಂದು ರಾಹುಲ್ ಟ್ವೀಟಿಸಿದ್ದಾರೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 25 ಕೊರೋನವೈರಸ್ ರೋಗಿಗಳು ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ್ದಾರೆ. ತನ್ನಲ್ಲಿ ಇನ್ನು ಎರಡು ಗಂಟೆ ಮಾತ್ರ ಸಾಲುವಷ್ಟು ಆಮ್ಲಜನಕವಿದ್ದು,60 ರೋಗಿಗಳ ಜೀವಗಳು ಅಪಾಯದಲ್ಲಿವೆ ಎಂದು ದಿಲ್ಲಿಯ ಸರ್ ಗಂಗಾರಾಮ ಆಸ್ಪತ್ರೆಯು ಶುಕ್ರವಾರ ಬೆಳಿಗ್ಗೆ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಆಮ್ಲಜನಕ ಪೂರೈಕೆಯಾಗಿದೆಯಾದರೂ ಅದು ಅಗತ್ಯ ಪ್ರಮಾಣದಲ್ಲಿಲ್ಲ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ತನ್ಮಧ್ಯೆ ಶುಕ್ರವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 3,32,730 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು,ಇದು ವಿಶ್ವದಲ್ಲಿಯೇ ಸಾರ್ವಕಾಲಿಕ ದೈನಂದಿನ ದಾಖಲೆಯಾಗಿದೆ. ಇದೇ ವೇಳೆ 2,263 ಸಾವುಗಳು ವರದಿಯಾಗಿದ್ದು,ಇದೂ ಹೊಸ ದಾಖಲೆಯಾಗಿದೆ.
Corona can cause a fall in oxygen level but it’s #OxygenShortage & lack of ICU beds which is causing many deaths.
— Rahul Gandhi (@RahulGandhi) April 23, 2021
GOI, this is on you.