ಬೆಂಗಳೂರು: ಗುಂಡಿಕ್ಕಿ ರೌಡಿಯ ಬಂಧನ

ಬೆಂಗಳೂರು, ಎ.25: ಗಂಭೀರ ಅಪರಾಧ ಆರೋಪ ಸಂಬಂಧ ಆರೋಪಿ ರೌಡಿಯೋರ್ವನನ್ನು ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಇಲ್ಲಿನ ಅಶೋಕನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ರೌಡಿ ದಿನೇಶ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಪೊಲೀಸರ ಗುಂಡೇಟು ತಗುಲಿ ಕಾಲಿಗೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಎ.20 ರಂದು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ರೌಡಿ ಅಪ್ಪು ಎಂಬಾತನನ್ನು ರೌಡಿ ದಿನೇಶ್ ಸೇರಿ ಈತನ ಸಹಚರರು ಕೊಲೆ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿದ ಆಶೋಕನಗರ ಪೊಲೀಸರು ಕಾರ್ಯಾಚರಣೆ ಕೈಗೊಂಡು ರೌಡಿ ದಿನೇಶ್ ನನ್ನು ಬಂಧಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ ರವಿವಾರ ಮಧ್ಯಾಹ್ನ ಮಾರಕಾಸ್ತ್ರ ಜಪ್ತಿಗೆ ಲಾಂಗ್ ಫೋರ್ಡ್ ರಸ್ತೆಯ ಕ್ರಿಶ್ಚಿಯನ್ ಸೆಮೆಟ್ರಿ ಬಳಿ ತೆರಳಿದ್ದ ವೇಳೆ ದಿನೇಶ್ ಮಾರಕಾಸ್ತ್ರದಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್ಪೆಕ್ಟರ್ ಭರತ್ ರೌಡಿಶೀಟರ್ ದಿನೇಶ್ ಮೇಲೆ ಗುಂಡು ಹಾರಿಸಿ, ಬಂಧಿಸಿದ್ದಾರೆ.
ಹಲ್ಲೆ ಮಾಡಲು ಪ್ರಯತ್ನಿಸಿದ್ದರಿಂದ ಕಾನ್ಸ್ಟೇಬಲ್ ವಸಂತ್ ಎಂಬುವವರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.







