ಭಟ್ಕಳದಲ್ಲಿ ಕೋವಿಡ್ ಕರ್ಫ್ಯೂ : ಜನರಿಂದ ಹಿಡಿಶಾಪ
ಬೆಳಿಗ್ಗೆ 6-10ರ ಬದಲು ಮಧ್ಯಾಹ್ನ 2-6ಗಂಟೆವರೆಗೆ ಬಿಡುವು ನೀಡಲು ಆಗ್ರಹ

ಭಟ್ಕಳ: ಭಟ್ಕಳ ನಗರದಲ್ಲಿ ಚಿಕ್ಕ ಪುಟ್ಟ ಅಂಗಡಿಕಾರರು, ಹಣ್ಣು ಮಾರುವವರು, ಮೀನು ಮಾರಾಟ, ಬೀದಿ ಬದಿ ತರಕಾರಿ ಮಾರಾಟ, ಆಟೋ ಚಾಲಕರು ಹೀಗೆ ದುಡಿದು ತಿನ್ನುವವರ ಒಂದು ದೊಡ್ಡ ವರ್ಗವೇ ಇದ್ದು ಇವರೆಲ್ಲರೂ ಈ 14 ದಿನಗಳ ಕರ್ಫ್ಯೂ ಗೆ ಹಿಡಿ ಶಾಪ ಹಾಕುತ್ತಿದ್ದು ಬದುಕು ದಿನೆ ದಿನೆ ದುಸ್ತರವಾಗುತ್ತಿದೆ ಎಂಬ ಗೋಳನ್ನು ತೋಡಿಕೊಂಡರು.
ವಾರ್ತಾಭಾರತಿ ಗುರುವಾರ ಗ್ರೌಂಡ್ ರಿಪೋರ್ಟ್ ಗೆ ತೆರಳಿದ್ದು ಹಲವು ಮನಕಲುಕುವ ದೃಶ್ಯಾವಳಿಗೆ ಸಾಕ್ಷಿಯಾಗಬೇಕಾಯಿತು.
ಬೆಳಗ್ಗೆ ಆರು ಗಂಟೆಯಿಂದ ಹತ್ತು ಗಂಟೆವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆಂದು ಸಮಯ ನಿಗದಿ ಪಡಿಲಾಗಿದ್ದು ಮಾರಾಟಗಾರರು ತಮ್ಮ ವಸ್ತುಗಳೊಂದಿಗೆ ಮಾರುಕಟ್ಟೆಗೆ ಬಂದರೆ ಮಾರುಕಟ್ಟೆಯಲ್ಲಿ ಜನರೇ ಇಲ್ಲ. ಅಲ್ಲಿಲ್ಲಿ ಸಾಲ ಮಾಡಿಕೊಂಡು ಮೀನು, ತರಕಾರಿ, ಹಣ್ಣು ಮಾರಾಟ ಮಾಡುವ ನಮಗೆ ಹತ್ತುಗಂಟೆಯಾದರೂ ಜನರ ಮಾರುಕಟ್ಟೆಗೆ ಸುಳಿಯುವುದಿಲ್ಲ. ಇತ್ತ ಹತ್ತುಗಂಟೆಯಾದ ನಂತರ ಪೊಲೀಸರು ಲಾಠಿ ಹಿಡಿದು ಕಾಟಕೊಡಲು ಆರಂಭಿಸುತ್ತಾರೆ. ಅವರನ್ನು ಹೆದರಿಕೊಂಡು ಕೂಡಲೆ ವ್ಯಾಪಾರ ಸ್ಥಗಿತಗೊಳಿಸಿ ತಂದ ಸಾಲಕ್ಕೆ ಹಣ ಹೊಂದಾಣಿಕೆ ಮಾಡುವುದು ಕಷ್ಟವಾಗುತ್ತಿದ್ದು ಸ್ವಲ್ಪವು ತಡವಾದರೆ ಪೊಲೀಸರ ಲಾಠಿಯ ಜೊತೆಗೆ ದಂಡನೂ ಕಟ್ಟಬೇಕಾಗುತ್ತದೆ ಎನ್ನುತ್ತಾರೆ ವ್ಯಾಪಾರಸ್ಥರು.
ಬೀದಿ ಬದಿ ತರಕಾರಿ ಮಾರಾಟ ಮಾಡುವವರಿಗಾಗಿ ಸರ್ಕಾರದಿಂದ 10 ಸಾವಿರ ನೀಡಿದ್ದು ಅದನ್ನು ತುಂಬಲು ಕಷ್ಟಪಡುವಂತಾಗಿದೆ. ತಂದ ಸಾಲಕ್ಕೆ ಬಡ್ಡಿ ಕಟ್ಟುತ್ತ ಹೋದರೆ ಮುಂದೆ ನಮ್ಮ ಗತಿ ಏನು ಎಂದು ಕೇಳುತ್ತಾರೋ ಮತ್ತೋರ್ವ ತರಕಾರಿ ಮಾರಾಟ ಮಾಹಿಳೆ.
ಮೀನು ಮಾರಾಟ ಮಾಡುತ್ತಿದ್ದ ಲಚ್ಚಮ್ಮ (ಹೆಸರು ಬದಲಾಯಿಸಲಾಗಿದೆ) ಮೋದಿ ಸರ್ಕಾರಕ್ಕೆ ಶಾಪ ನೀಡುತ್ತಿದ್ದು ಇಂದಿರಾಗಾಂದಿ ನಮಗೆ ಅಕ್ಕಿ ಕೊಡ್ತಿದ್ಲು, ಮನೆ ಕೊಡ್ತಿದ್ಲು, ಬಟ್ಟೆ ಕೊಡ್ತಿದ್ಲು, ಆದರೆ ಈ ಮೋದಿ ಬಂದು ನಮಗೇನು ಕೊಟ್ಟಿದ್ದಾನೆ ? ಬಡವರ ಜೀವನ ನರಕವನ್ನಾಗಿ ಮಾಡಿದ್ದಾನೆ ಎಂದು ಮಣ್ಣು ತೂರುತ್ತಾರೆ. ಕ್ಯಾನ್ಸರ್ ಗೆ ಮದ್ದಿದೆ. ಎಲ್ಲ ರೋಗಗಳಿಗೆ ಮದ್ದಿದೆ. ಆದರೆ ಈ ಸರ್ಕಾರ ಕೊರೋನಕ್ಕೆ ಮದ್ದನ್ನು ಏಕೆ ಸಿದ್ದಪಡಿಸಿಲ್ಲ ಎಂಬುದು ಮತ್ತೋರ್ವ ಮಹಿಳೆಯ ಪ್ರಶ್ನೆಯಾಗಿದೆ.
ಬೆಳಗಿನ ಜಾವ 6 ಗಂಟೆಗೆ ಜನ ಏಳುವುದು ಕಷ್ಟ. ಅಲ್ಲದೇ ಈ ರಮಝಾನ ಮಾಸದಲ್ಲಿ ಜನರು ರಾತ್ರಿ ಜಾಗರಣೆ ಮಾಡಿ ಬೆಳಗೆ ನಮಾಝ್ ಬಳಿಕ ಮಲಗಿಕೊಳ್ಳುತ್ತಾರೆ. ಆದ್ದರಿಂದ ಮಾರುಕಟ್ಟೆಯಲ್ಲಿ ಜನರ ಓಡಾಟ ಇಲ್ಲಿ ತಾಲೂಕಾಡಳಿತ ಭಟ್ಕಳದಲ್ಲಿ ಮಧ್ಯಾಹ್ನದ ಅವಧಿ ಅಂದರೆ 2 ಗಂಟೆ ಸಂಜೆ 6ಗಂಟೆ ವರೆಗೆ ಅಂಗಡಿಗಳನ್ನು ಅನುಮತಿ ನೀಡಬೇಕೆಂದು ಮದೀನಾ ಕಾಲನಿಯ ತರಕಾರಿ ವ್ಯಾಪರಸ್ಥ ರಫೀಖ್ ಎಂಬುವವರು ಮನವಿ ಮಾಡಿಕೊಳ್ಳುತ್ತಾರೆ.
ಆಟೋ ಚಾಲಕರ ಗೋಳು ಹೇಳತೀರದು. ತಾಲೂಕಿನಲ್ಲಿ ಭಟ್ಕಳ, ಶಿರಾಲಿ, ಮುರುಡೇಶ್ವರ ಸೇರಿದಂತೆ ಒಟ್ಟೂ 1300 ಪ್ರಯಾಣಿಕರ ಆಟೋಗಳಿವೆ. ತಾಲೂಕಿನಲ್ಲಿ ಓಡಾಡಿಕೊಳ್ಳುವ ಸರಿಸುಮಾರು 100ರಷ್ಟು ಸರಕು ಸಾಗಾಟದ ಗೂಡ್ಸ್ ರಿಕ್ಷಾಗಳೂ ಇವೆ. ಕೆಲವು ಆಟೋಗಳಿಗೆ ಮಾಲಕರೇ ಚಾಲಕರಾಗಿದ್ದರೆ, ಉಳಿದ ಆಟೋಗಳನ್ನು ಹೊಟ್ಟೆಪಾಡಿಗಾಗಿ ಬಾಡಿಗೆಗೆ ಪಡೆದುಕೊಂಡು ಚಲಾಯಿಸಲಾಗುತ್ತದೆ. 18-20 ವರ್ಷದ ವಯಸ್ಸಿನವರಿಂದ ಹಿಡಿದು 60 ದಾಟಿದ ವಯೋವೃದ್ಧರೂ ಆಟೋರಿಕ್ಷಾಗಳೊಂದಿಗೆ ಬದುಕುಕಟ್ಟಿಕೊಳ್ಳುತ್ತಿದ್ದಾರೆ. ಆದರೆ ಈ ಕರ್ಫ್ಯೂನಿಂದಾಗಿ ದಿನಕ್ಕೆ 50 ರೂ ಕೂಡ ಗತಿಸುತ್ತಿಲ್ಲ. ಸಿಕ್ಕ ಹಣ ಗ್ಯಾಸ್ ಪೆಟ್ರೋಲ್ ಗೆ ಖರ್ಚಾಗುತ್ತೇ. ಹೀಗಾದರೆ ನಮ್ಮ ಬದುಕು ಹೇಗೆ? ಎಂದು ಪ್ರಶ್ನಿಸುತ್ತಾರೆ ಆಟೋಚಾಲಕರು.
ಕೊರೋನ ರೂಲ್ಸ್ ನಿಂದಾಗಿ ಆಟೋ ಚಾಲಕರು ಮತ್ತೆ ಸಂಕಷ್ಟಕ್ಕೆ ಬಿದ್ದಿದ್ದೇವೆ. ಆಟೋ ಖರೀದಿ, ಇನ್ಸೂರೆನ್ಸ್, ಪಾಸಿಂಗ್ನಿಂದ ಹಿಡಿದು ಇಂಧನದವರೆಗೆ ನಾವು ಸಾವಿರಾರು ರೂ. ತೆರಿಗೆ ರೂಪದಲ್ಲಿ ಸರಕಾರಕ್ಕೆ ಪಾವತಿಸು ತ್ತೇವೆ. ಆದರೆ ನಾವು ಕಷ್ಟದಲ್ಲಿರುವಾಗ ಸರಕಾರ ನಮ್ಮನ್ನು ಕೈ ಬಿಟ್ಟಿದೆ.
- ಸತೀಶ ನಾಯ್ಕ, ಮುರುಡೇಶ್ವರ ಆಟೋ ಚಾಲಕರ ಸಂಘದ ಅಧ್ಯಕ್ಷರು
ಇತ್ತ ಕಟ್ಟಡ ಕಾರ್ಮಿಕರ ಗೋಳು ಬೇರೆಯದು. ಬೆಳಗ್ಗೆ 6ಗಂಟೆ ಮದೀನಾ ಕಾಲೋನಿಯಲ್ಲಿ ಕೆಲಸವನ್ನು ಅರಸಿ ಬಂದು ಕುಳಿಕೊಂಡಿರುವ ಐದಾರು ಮಹಿಳೆಯರು ತಮ್ಮ ಗೋಳನ್ನು ತೋಡಿಕೊಂಡಿದ್ದು, ನಾವು ಇಲ್ಲಿ ಸುಮಾರು 3ಗಂಟೆಯಿಂದ ಮೇಸ್ತ್ರಿಗಾಗಿ ಕಾಯುತ್ತ ಕುಳಿತ್ತಿದ್ದೇವೆ. ಕೆಲಸವಿದ್ದರೆ ಮೇಸ್ತ್ರಿ ಬಂದು ಕರೆದುಕೊಂಡು ಹೋಗು ತ್ತಾನೆ. ಇಲ್ಲ ಎಂದರೆ ನಾವು ಕಾದು ಕಾದು ಬೇರೆ ಗತಿ ಕಾಣದೆ ಮನೆಗೆ ಹೋಗಬೇಕು. ಹೀಗೆ ಕಳೆದ ಐದಾರು ದಿನಗಳಿಂದ ಯಾವುದೇ ಕೆಲಸವಿಲ್ಲದೆ ಮನೆಯಲ್ಲಿ ಗಂಜಿಗೂ ಗತಿಯಿಲ್ಲವಾಗಿದೆ ಎಂದು ಹೇಳುತ್ತಿದ್ದಾರೆ.
ಭಟ್ಕಳಕ್ಕ ರಮಝಾನ ಸಮಯದಲ್ಲಿ ಬಹಳಷ್ಟು ಮಂದಿ ಭಿಕ್ಷುಕರು, ಚಂದಾವಸೂಲು ಮಾಡುವವರು ಬರುತ್ತಾರೆ. ಆದರೆ ಈ ಸಲ ಕರ್ಫ್ಯೂನಿಂದಾಗಿ ಇಲ್ಲಿನ ಭಿಕ್ಷುಕರಿಗೆ ಹಣದೊಂದಿಗೆ ಅನ್ನ ನೀರು ಕೂಡ ಸಿಗುತ್ತಿಲ್ಲ. ಇದರಿಂದ ತುಂಬಾ ತೊಂದರೆಯಲ್ಲಿರುವ ಭಿಕ್ಷುಕರಿಗೆ ಸ್ವತಃ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ಕೆಲವೊಮ್ಮೆ ಪತ್ರಕರ್ತರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ.
''ಇದು ಭಟ್ಕಳದಲ್ಲಿ ದುಡಿದು ತಿನ್ನುವವರ ಬದುಕಿನ ಕಥೆಯ ವ್ಯೆಥೆ. ಬೆಳಗಿನ 6ರಿಂದ 10 ರ ಬದಲು ಮಧ್ಯಾಹ್ನದ ವೇಳೆ ಸಡಿಲು ಬಿಟ್ಟರೆ ಎಲ್ಲರಿಗೂ ಅನುಕೂಲವಾಗಲಿದ್ದು ಗ್ರಾಹಕರು ಮತ್ತು ಮಾರಾಟಗಾರರು ಎರಡು ವರ್ಗವೂ ಖುಷಿಯಾಗಿರಲು ಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ''.
- ಎಂ.ಆರ್.ಮಾನ್ವಿ.











