ಕೋವಿಡ್-19 ದತ್ತಾಂಶದಲ್ಲಿ ಪಾರದರ್ಶಕತೆ ಆಗ್ರಹಿಸಿ 300ಕ್ಕೂ ಅಧಿಕ ಭಾರತೀಯ ವಿಜ್ಞಾನಿಗಳಿಂದ ಪ್ರಧಾನಿ ಮೋದಿಗೆ ಪತ್ರ

ಹೊಸದಿಲ್ಲಿ: ಪ್ರೊ.ಎಲ್.ಎಸ್.ಶಶಿಧರ(ಜೀವಶಾಸ್ತ್ರ ಪ್ರಾಧ್ಯಾಪಕ, ಐಐಎಸ್ ಇ ಆರ್ ಪುಣೆ ಹಾಗೂ ಅಶೋಕ ವಿಶ್ವವಿದ್ಯಾಲಯ) ಹಾಗೂ ಪ್ರೊಫೆಸರ್ ಪಾರ್ಥ ಮಜುಂದಾರ್ (ಭಾರತ ಸರಕಾರದ ನ್ಯಾಶನಲ್ ಸೈನ್ಸ್ ಚೇರ್)ಸೇರಿದಂತೆ ಭಾರತದಾದ್ಯಂತ 300ಕ್ಕೂ ಅಧಿಕ ಖ್ಯಾತ ವಿಜ್ಞಾನಿಗಳು ಕೋವಿಡ್-19 ನಿರ್ವಹಣೆಯಲ್ಲಿ ಪಾರದರ್ಶಕತೆಗಾಗಿ ಹಾಗೂ ರೋಗದ ಹರಡುವಿಕೆಯನ್ನು ಅಧ್ಯಯನ ನಡೆಸಲು, ಉತ್ತಮ ಮಾದರಿಯಲ್ಲಿ ಕೆಲಸ ಮಾಡಲು ಅವರಿಗೆ ಅನುವು ಮಾಡಿಕೊಡಲು ವಿವಿಧ ಡೇಟಾಗಳ ಆರಂಭಕ್ಕೆ ಹೆಜ್ಜೆಗಳನ್ನು ಇಡುವಂತೆ ವಿನಂತಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ.
ಕೋವಿಡ್-19ನಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆಯನ್ನು ಕಡಿಮೆ ವರದಿ ಮಾಡುತ್ತಿರುವುದು ಸೇರಿದಂತೆ ದೇಶವು ಹಲವು ಆರೋಪಗಳನ್ನು ಎದುರಿಸುತ್ತಿರುವಾಗ ವಿಜ್ಞಾನಿಗಳು ಈ ಮನವಿ ಮಾಡಿದ್ದಾರೆ.
ಭಾರತದಾದ್ಯಂತ ಹಲವಾರು ಸಂಶೋಧನ ಹಾಗೂ ಬೋಧನಾ ಸಂಸ್ಥೆಗಳ ವಿಜ್ಞಾನಿಗಳು ತಮ್ಮನ್ನು ತಾವು ವಿಜ್ಞಾನಿಗಳೆಂದು ಗುರುತಿಸಿಕೊಳ್ಳುತ್ತಾರೆ. ಸಾಂಕ್ರಾಮಿಕ ರೋಗಗಳ ದತ್ತಾಂಶವನ್ನು ವ್ಯವಸ್ಥಿತವಾಗಿ ಸಂಗ್ರಹಿಸುವಲ್ಲಿನ ಕೊರತೆಯು ಸೋಂಕಿನ ಹರಡುವಿಕೆಯನ್ನು ಸಮರ್ಪಕವಾಗಿ ನಿರ್ವಹಿಸಲು ನಮ್ಮ ಅಸಮರ್ಥಕತೆಗೆ ಒಂದು ಪ್ರಮುಖ ಕಾರಣವಾಗಿದೆ. ಸೋಂಕುಗಳ ಹರಡುವಿಕೆಯನ್ನು ಸಮರ್ಪಕವಾಗಿ ತಡೆಗಟ್ಟಲು ಹಾಗು ನಮ್ಮ ನಾಗರಿಕರ ಜೀವವನ್ನು ಉಳಿಸಲು ವೈಜ್ಞಾನಿಕ ಮಾಹಿತಿಯ ಆಧಾರದ ಮೇಲೆ ಕ್ರಿಯಾತ್ಮಕ ಸಾರ್ವಜನಿಕ ಆರೋಗ್ಯ ಯೋಜನೆಗಳನ್ನು ಜಾರಿಗೆ ತರುವುದು ಹಿಂದೆಂದಿಗಿಂತಲೂ ಈಗ ಅಗತ್ಯವಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಕೊರೋನ ವೈರಸ್ ನ ಹೊಸ ರೂಪಾಂತರಗಳ ವ್ಯವಸ್ಥಿತ ಕಣ್ಗಾವಲು ಅನುಷ್ಠಾನಕ್ಕೆ ತಮಗೆ ಭಾಗಶಃ ಧನ ಸಹಾಯ ಹಾಗೂ ಅನುಮತಿ ದೊರೆತಿದೆ ಎಂದು ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ.
ರೋಗಿಗಳ ಗೌಪ್ಯತೆಗೆ ಸೂಕ್ತವಾದ ಸುರಕ್ಷತೆಯೊಂದಿಗೆ ಕ್ಲಿನಿಕಲ್ ದತ್ತಾಂಶಕ್ಕೆ ಪ್ರವೇಶವನ್ನು ನೀಡುವಂತೆ ವಿಜ್ಞಾನಿಗಳು ಸರಕಾರವನ್ನು ವಿನಂತಿಸಿದರು. ಕ್ಲಿನಿಕಲ್ ದತ್ತಾಂಶವು ವಿಶ್ಲೇಷಣೆ ನಡೆಸಲು, ಆಮ್ಲಜನಕ, ವೆಂಟಿಲೇಟರ್ ಗಳು, ಐಸಿಯು ಹಾಸಿಗೆಗಳು ಹಾಗೂ ಇಷ್ಟದ ಅಗತ್ಯಗಳನ್ನು ಅಂದಾಜಿಸಲು ಸಹಾಯ ಮಾಡುತ್ತದೆ.
ವೈಜ್ಞಾನಿಕ ಉಪಕರಣಗಳ ಆಮದಿಗೆ ಅಡ್ಡಿಯನ್ನುಂಟು ಮಾಡಿರುವ ಕೇಂದ್ರ ಸರಕಾರದ ಆತ್ಮ ನಿರ್ಭರ ಭಾರತ್ ನೀತಿಯನ್ನು ವಿಜ್ಞಾನಿಗಳು ತಮ್ಮ ಪತ್ರದಲ್ಲಿ ಖಂಡಿಸಿದ್ದಾರೆ.
ಆತ್ಮ ನಿರ್ಭರ ಭಾರತ ನೀತಿಯು ವೈಜ್ಞಾನಿಕ ಉಪಕರಣಗಳನ್ನು ಆಮದು ಮಾಡಿಕೊಳ್ಳುವುದನ್ನು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯನ್ನಾಗಿ ಮಾಡಿದೆ. ಇದಕ್ಕೆ ಸಚಿವಾಲಯಗಳ ಅಥವಾ ಇಲಾಖೆಗಳ ಕಾರ್ಯದರ್ಶಿಗಳ ಮಟ್ಟದಲ್ಲಿ ಅನುಮೋದನೆ ಅಗತ್ಯ. ಇದು ಹೊಸ ಪರೀಕ್ಷಾ ವೇದಿಕೆಗಳನ್ನು ಅಭಿವೃದ್ದಿಪಡಿಸುವ ಮೂಲಕ ಪರೀಕ್ಷೆಗಳನ್ನು ಹೆಚ್ಚಿಸುವ ನಮ್ಮ ಸಾಮಥ್ರ್ಯವನ್ನು ಕಡಿಮೆ ಮಾಡಿದೆ. ಭವಿಷ್ಯದಲ್ಲಿ ನಮ್ಮ ದೇಶವು ಸ್ವಾವಲಂಬಿಯಾಗಲು ಸರಕಾರದಿಂದ ಸಾಕಷ್ಟು ಪ್ರೋತ್ಸಾಹ ಹಾಗೂ ಬೆಂಬಲ ಅತ್ಯಗತ್ಯ. ಅಂತಹ ನಿರ್ಬಂಧಗಳು ಈ ಸಮಯದಲ್ಲಿ ಕೋವಿಡ್-19 ಅನ್ನು ಎದುರಿಸುವ ನಮ್ಮ ಸಾಮಥ್ರ್ಯಕ್ಕೆ ಅಡ್ಡಿಯುಂಟು ಮಾಡುತ್ತದೆ. ಈ ನಿರ್ಬಂಧವನ್ನು ಹಿಂಪಡೆಯಲು ನಾವು ವಿನಂತಿಸುತ್ತೇವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.







