ರೋಲ್ ಮಾಡೆಲ್ ಜಿಲ್ಲಾಧಿಕಾರಿ ಬೇಕೇ ಹೊರತು ಮಾಡೆಲ್ ಅಧಿಕಾರಿಯಲ್ಲ: ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ

ಮೈಸೂರು,ಮೇ.2: ಮೈಸೂರು ಜಿಲ್ಲೆಗೆ ರೋಲ್ ಮಾಡೆಲ್ ಜಿಲ್ಲಾಧಿಕಾರಿಗಳು ಬೇಕು ಹೊರತು ಮಾಡೆಲ್ ಜಿಲ್ಲಾಧಿಕಾರಿಗಳಲ್ಲ ಎಂದು ಪರೋಕ್ಷವಾಗಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ.ಮಹೇಶ್ ಮತ್ತೊಮ್ಮೆ ಹರಿಹಾಯ್ದರು.
ನಗರದ ಶಾಸಕರ ಕಚೇರಿಯಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿ ಈ ಹಿಂದೆ ಅಭಿರಾಮ್ ಜಿ.ಶಂಕರ್, ಶಿಖಾ, ತಾ.ಮ.ವಿಜಯ ಭಾಸ್ಕರ್ ಅಂತಹ ಅಧಿಕಾರಿಗಳು ಬಂದು ಹೋಗಿದ್ದಾರೆ. ಅವರಂತೆ ಜನರ ಬಗ್ಗೆ ಕಾಳಜಿ ಇರುವ ಅಧಿಕಾರಿಗಳು ಬೇಕು ಹೊರತು ಮಾಡೆಲ್ ಅಧಿಕಾರಿಗಳಲ್ಲ ಎಂದು ಕಿಡಿಕಾರಿದರು.
ಜಿಲ್ಲಾ ಉಸ್ತುವಾರಿ ಸಚಿವರು ಬದುಕಿದ್ದಾರಾ ಎಂದು ಕೇಳಿದ್ದಕ್ಕೆ ಸಚಿವರಿಗೆ ಬಹಳ ಸಿಟ್ಟು ಬಂದಿದೆ. ಇನ್ನು ಕೊರೋನ ನಿರ್ಲಕ್ಷ್ಯದಿಂದ ತಮ್ಮ ಮನೆಯವರ ಜೀವ ಕಳೆದುಕೊಂಡವರಿಗೆ ಇನ್ನೆಷ್ಟು ಸಿಟ್ಟು ಬರುವುದಿಲ್ಲ. ಜಿಲ್ಲಾಡಳಿತ ಕೊರೋನ ನಿಯಂತ್ರಣ ಸಂಬಂಧ ಸರಿಯಾದ ಕ್ರಮ ತೆಗೆದುಕೊಂಡಿದ್ದರೆ ಯಾಕಿಷ್ಟು ಸಾವು ನೋವುಗಳು ಸಂಭವಿಸುತ್ತಿದ್ದವು ಎಂದು ಪ್ರಶ್ನಿಸಿದರು.
ಕೆ.ಆರ್.ನಗರದ ಮಹಿಳೆ ದಾಕ್ಷಾಯಿಣಿ ಮೊನ್ನೆ ಸತ್ತು ಹೋದರು. ಜಿಲ್ಲಾಡಳಿತ ಕೋವಿಡ್ ಪರೀಕ್ಷೆ ಬರುವುದರೊಳಗೆ ಶವವನ್ನು ಮನೆಯವರಿಗೆ ಹಸ್ತಾಂತರ ಮಾಡಿದರು. ಅವರು ಶವ ತೆಗೆದುಕೊಂಡು ಹೋಗಿ ಮನೆಯಲ್ಲಿಟ್ಟು ನಂತರ ಅಂತ್ಯಕ್ರಿಯೆ ಮಾಡಿದ್ದರು. ಮರುದಿನ ಮೃತ ಮಹಿಳೆಯ ಕೋವಿಡ್ ರಿಪೋರ್ಟ್ ಬಂದಿದ್ದು, ಕೋವಿಡ್ ಪಾಸಿಟಿವ್ ಬಂದಿದೆ. ಈಗ ಆ ಮನೆಯಲ್ಲಿ 25 ಜನಕ್ಕೆ ಕೊರೋನ ಪಾಸಿಟಿವ್ ಆಗಿದೆ. ಇದು ಜಿಲ್ಲಾಡಳಿತದ ನಿರ್ಲಕ್ಷ್ಯ ಅಲ್ಲವೇ ? ಇದನ್ನು ಪ್ರಶ್ನೆ ಮಾಡುವುದು ತಪ್ಪಾ? ಕೋವಿಡ್ ರಿಪೋರ್ಟ್ ಬರುವವರೆಗೂ ಶವ ಕೊಡಬೇಡಿ. ಮನೆಯವರು ಒತ್ತಾಯ ಮಾಡಿದರೆ ಕೋವಿಡ್ ನಿಯಮದಂತೆ ಶವಸಂಸ್ಕಾರ ಮಾಡಿಸಿ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಕೆ.ಆರ್.ನಗರದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೆ.ಆರ್.ನಗರದಲ್ಲೂ ವೆಂಟಿಲೇಟರ್ ಇದೆ. ಆದರೆ ಆಪರೇಟರ್ಸ್ ಇಲ್ಲ, ಇನ್ನೊಂದೆಡೆ ವೈದ್ಯರು, ನರ್ಸ್ ಕೊರತೆ ಬಹಳಷ್ಟಿದೆ. ಇಡೀ ಜಿಲ್ಲೆಯಲ್ಲಿರುವ ಸರ್ಕಾರಿ, ಖಾಸಗಿ ವೈದ್ಯರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಜನರಿಗೆ ಕಷ್ಟವಾಗಿದೆ. ಇಡೀ ಜಿಲ್ಲೆಯಲ್ಲಿ ಚಿಕಿತ್ಸೆ ಸಿಗದೆ ಜನ ನರಳುತ್ತಿದ್ದಾರೆ ಎಂದು ಹೇಳಿದರು.
ಕೆ.ಆರ್.ನಗರದಲ್ಲಿ ಕೋವಿಡ್ ಸೆಂಟರ್ ಮಾಡಿದ್ದೇವೆ. ಆ ಸೆಂಟರ್ ಗೆ ಈ ಮೂವರು ವೈದ್ಯರನ್ನು ನಿಯೋಜನೆ ಮಾಡಿದ್ದೇವೆ. ಪ್ರತಿಯೊಬ್ಬರ ಸಂಬಳ ತಲಾ ಒಂದು ಲಕ್ಷ ರೂಪಾಯಿ. ಸಾ.ರಾ.ಸ್ನೇಹ ಬಳಗದಿಂದ ಈ ಸಂಬಳ ನೀಡುತ್ತೇವೆ. ಮುಂದಿನ ವಾರ 200 ಬೆಡ್ಗಳ ಸುಸಜ್ಜಿತ ಕೋವಿಡ್ ಸೆಂಟರ್ ಅನ್ನು ಸಾರಾ ಸ್ನೇಹ ಬಳಗದಿಂದ ಆರಂಭಿಸುತ್ತೇವೆ. ಅದನ್ನು ತಾಲೂಕು ಆಡಳಿತಕ್ಕೆ ಹಸ್ತಾಂತರಿಸುತ್ತೇವೆ. ವಿಶ್ವಾಸದಿಂದ ಕೆಲಸ ಮಾಡಿ. ದರ್ಪದಿಂದ ಅಲ್ಲ ಅಂತ ನಿಮ್ಮ ಅಧಿಕಾರಿಗೆ ಹೇಳಿ ಎಂದು ಸಚಿವ ಎಸ್.ಟಿ.ಸೋಮಶೇಖರ್ ಗೆ ಶಾಸಕ ಸಾ.ರಾ.ಮಹೇಶ್ ಸಲಹೆ ನೀಡಿದರು.
ಅಭಿರಾಮ್ ಜಿ.ಶಂಕರ್ ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಡಿ.ಗ್ರೂಪ್ ನೌಕರರಿಗೂ ಗೌರವ ಕೊಡುತ್ತಿದ್ದರು. ಆದರೆ, ಇವತ್ತಿನ ಜಿಲ್ಲಾಧಿಕಾರಿಗೆ ಆ ಸೌಜನ್ಯ ಇಲ್ಲ. ಈ ಜಿಲ್ಲಾಧಿಕಾರಿಗೆ ಇಚ್ಛಾಶಕ್ತಿ ಕೊರತೆ ಇದೆ. ಕೋವಿಡ್ ನಿರ್ವಹಣೆಯ ಉಸ್ತುವಾರಿಗೆ ಒಬ್ಬ ಹಿರಿಯ ಅಧಿಕಾರಿಯನ್ನು ನಿಯೋಜಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದರು.







