ಉಡುಪಿ ಜಿಲ್ಲೆಯಲ್ಲಿ 36 ಗಂಟೆಗಳಿಗೆ ಬೇಕಾಗುವಷ್ಟು ಮಾತ್ರ ಆಕ್ಸಿಜನ್ ಲಭ್ಯ : ಜಿಲ್ಲಾಧಿಕಾರಿ ಜಿ.ಜಗದೀಶ್

ಉಡುಪಿ, ಮೇ 3: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಗಿದ್ದು, ಇದರಿಂದ ಜಿಲ್ಲೆಯ ಚಿತ್ರವೇ ಬದಲಾಗಿದೆ. ಸದ್ಯ ನಮ್ಮಲ್ಲಿ ಮುಂದಿನ 36 ಗಂಟೆಗಳಿಗೆ ಬೇಕಾಗುವಷ್ಟು ಆಕ್ಸಿಜನ್ ಲಭ್ಯ ಇದ್ದು, ಹೆಚ್ಚಿನ ಆಕ್ಸಿಜನ್ ಪೂರೈಸುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಸದ್ಯ ಜಿಲ್ಲೆಯಲ್ಲಿರುವ ಬೆಡ್ಗಳಿಗೆ ಬೇಕಾದ ಆಕ್ಸಿಜನ್ಗೆ ಯಾವುದೇ ಕೊರತೆ ಇಲ್ಲ. ನಾಳೆ ಸಂಜೆ ಅಥವಾ ಮೇ 5 ಬೆಳಗ್ಗೆವರೆಗೆ ಬೇಕಾಗುವಷ್ಟು ಆಕ್ಸಿಜನ್ ನಮ್ಮಲ್ಲಿ ಲಭ್ಯವಿದೆ. ನಮ್ಮ ಜಿಲ್ಲೆಗೆ ಹೆಚ್ಚುವರಿ ಆಕ್ಸಿಜನ್ ಪೂರೈಕೆಯಾಗದಿದ್ದರೆ ಸಮಸ್ಯೆಯಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಜಿಲ್ಲೆಯ ಜನಪ್ರತಿನಿಧಿಗಳು ಕೂಡ ಸರಕಾರಕ್ಕೆ ಮನವಿ ಮಾಡಿದ್ದಾರೆ. ಈ ವರೆಗೆ ಮಂಗಳೂರಿನಿಂದ ಪೂರೈಕೆಯಾಗುವ ಆಕ್ಸಿಜನ್ ನಂಬಿಕೊಂಡಿದ್ದೇವು. ಈಗ ಅಲ್ಲಿನ ಪೂರೈಕೆಯಲ್ಲಿ ವ್ಯತ್ಯಾಸವಾಗಿರುವುದರಿಂದ ಸಮಸ್ಯೆಯಾಗಿದೆ. ಸದ್ಯದ ಸ್ಥಿತಿಯಲ್ಲಿ ಹೆಚ್ಚುವರಿ ಬೆಡ್ನ ವ್ಯವಸ್ಥೆಯನ್ನು ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಬೆಳಪುವಿನಲ್ಲಿ ಆಕ್ಸಿಜನ್ ಘಟಕ ಇರುವುದರಿಂದ ಸದ್ಯಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜತೆಗೂ ಮಾತನಾಡಿದ್ದೇವೆ. ಪೂರೈಕೆಯನ್ನು ಹೆಚ್ಚಿಸುವಂತೆ ಕೇಳಿಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.







