ದಿಲ್ಲಿಯಲ್ಲಿ ಆಮ್ಲಜನಕ ಭೀತಿ ಇಲ್ಲ ಎಂದು ಖಚಿತಪಡಿಸಿಕೊಳ್ಳಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್
ಕೊರೋನದ ಮೂರನೇ ಅಲೆ ಬರಲಿದೆ ಎಂಬ ವೈಜ್ಞಾನಿಕ ಸಲಹೆಗಾರರ ಎಚ್ಚರಿಕೆ ಹಿನ್ನೆಲೆ

ಹೊಸದಿಲ್ಲಿ,ಮೇ 6: ರಾಜಧಾನಿಯಲ್ಲಿಯ ಕೋವಿಡ್-19 ರೋಗಿಗಳ ಅಗತ್ಯಗಳನ್ನು ಪೂರೈಸಲು ದಿಲ್ಲಿ ಸರಕಾರವು ಕೋರಿರುವಂತೆ ಅದಕ್ಕೆ ಪ್ರತಿ ದಿನ 700 ಟನ್ ಆಮ್ಲಜನಕವನ್ನು ಪೂರೈಸಲೇಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ಕೇಂದ್ರಕ್ಕೆ ತಾಕೀತು ಮಾಡಿದೆ.
ದಿಲ್ಲಿಗೆ ಅಧಿಕೃತವಾಗಿ ಹಂಚಿಕೆಯಾಗಿರುವ ಆಮ್ಲಜನಕದ ಅರ್ಧದಷ್ಟು ಮಾತ್ರ ಪೂರೈಕೆಯಾಗುತ್ತಿದೆ ಮತ್ತು ಇದೇ ವೇಳೆ ಉತ್ತರ ಪ್ರದೇಶ ಮತ್ತು ಹರ್ಯಾಣಗಳಂತಹ ಬಿಜೆಪಿ ಆಡಳಿತದ ನೆರೆಯ ರಾಜ್ಯಗಳಿಗೆ ಆಮ್ಲಜನಕ ಪೂರೈಕೆಯಲ್ಲಿ ಆದ್ಯತೆಯನ್ನು ನೀಡಲಾಗುತ್ತಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.
ಕೋವಿಡ್ ಸಾವುಗಳು ಮುಂದುವರಿದಿರುವ,ಆಸ್ಪತ್ರೆಗಳು ಆಮ್ಲಜನಕ ಪೂರೈಕೆಗಾಗಿ ಪ್ರತಿ ಕೆಲವು ಗಂಟೆಗಳಿಗೆ ತುರ್ತು ಸಂದೇಶಗಳನ್ನು ರವಾನಿಸುತ್ತಿರುವ ದಿಲ್ಲಿಗೆ ಪ್ರತಿ ದಿನ 700 ಟನ್ ಆಮ್ಲಜನಕದ ಅಗತ್ಯವಿದೆ ಎಂದರು.
ನೀವು (ಕೇಂದ್ರ) ದಿಲ್ಲಿಗೆ ಪ್ರತಿ ದಿನ 700 ಟನ್ ಆಮ್ಲಜನಕ ನೀಡಲೇಬೇಕು ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು,ಯಾವುದನ್ನೂ ಮುಚ್ಚಿಡಲು ನೀವು ಬಯಸುತ್ತಿಲ್ಲವಾದರೆ ಆಮ್ಲಜನಕವನ್ನು ಪಾರದರ್ಶಕವಾಗಿ ಹೇಗೆ ಹಂಚಿಕೆ ಮಾಡಲಾಗುತ್ತಿದೆ ಮತ್ತು ವಿತರಿಸಲಾಗುತ್ತಿದೆ ಎನ್ನುವುದನ್ನು ದೇಶದ ಮುಂದಿಡಿ ಎಂದು ಹೇಳಿತು. ದಿಲ್ಲಿಗೆ 700 ಟನ್ ಆಮ್ಲಜನಕ ಪೂರೈಸದೆ ಕೇಂದ್ರವು ನ್ಯಾಯಾಂಗ ನಿಂದನೆಯನ್ನು ಮುಂದುವರಿಸುತ್ತಿದೆ ಎಂದಿತು.
ದಿಲ್ಲಿ ಸರಕಾರವು ಸರ್ವೋಚ್ಚ ನ್ಯಾಯಾಲಯವನ್ನು ಕೇಂದ್ರ ಸರಕಾರದ ವಿರುದ್ಧ ಮಾತನಾಡಲು ಬಳಸಿಕೊಳ್ಳುತ್ತಿದೆ ಎಂದು ಹೇಳಿದ ಕೇಂದ್ರ ಸರಕಾರದ ಪರ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,ವ್ಯವಸ್ಥೆಯಲ್ಲಿ ವೈಫಲ್ಯವಿರುವುದರಿಂದ ಲೆಕ್ಕ ಪರಿಶೋಧನೆ ನಡೆಯಬೇಕಿದೆ,ಆದರೆ ಅದು ರಾಜಕೀಯ ನಾಯಕತ್ವ ಅಥವಾ ಅಧಿಕಾರಿಗಳ ವಿರುದ್ಧವಲ್ಲ. ಈ ದೇಶದ ಜನರು ಕೇಂದ್ರಕ್ಕೆ ಎರಡು ಬಾರಿ ಅಧಿಕಾರ ನೀಡಿದ್ದಾರೆ ಮತ್ತು ನಾವು ದೇಶದ ಬಗ್ಗೆ ತುಂಬ ಕಾಳಜಿಯನ್ನು ಹೊಂದಿದ್ದೇವೆ. ನಾವು ದಿಲ್ಲಿ ಕೇಂದ್ರಿತರಾಗಿರಲು ಸಾಧ್ಯವಿಲ್ಲ ಎಂದು ಹೇಳಿದರು.ರಾಜಧಾನಿಯಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯ ಸಮಸ್ಯೆಗೆ ದಿಲ್ಲಿ ಸರಕಾರವೇ ಕಾರಣವಾಗಿದೆ. ದಿಲ್ಲಿಯ ಸಮಸ್ಯೆಗೆ ಕಡಿಮೆ ಪೂರೈಕೆ ಕಾರಣವಲ್ಲ,ವಿತರಣೆ ವ್ಯವಸ್ಥೆಯಲ್ಲಿನ ಗಂಭೀರ ವೈಫಲ್ಯ ಕಾರಣವಾಗಿದೆ ಎಂದು ಕೇಂದ್ರವು ಹೇಳಿತು.
ಯಾರನ್ನೂ ಸಾಯಲು ಬಿಡುವುದಿಲ್ಲ:
ಕೇಂದ್ರ ಸರಕಾರದಿಂದ ಹಂಚಿಕೆಯಾಗಿರುವ 700 ಟನ್ ಆಮ್ಲಜನಕ ಪ್ರತಿದಿನ ಪೂರೈಕೆಯಾದರೆ ತನ್ನ ಸರಕಾರವು ಆಮ್ಲಜನಕ ಕೊರತೆಯಿಂದ ಸಾಯಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ ಕೇಜ್ರಿವಾಲ್,‘ನಮಗೆ ಸಾಕಷ್ಟು,700 ಟನ್ ಆಮ್ಲಜನಕ ಪೂರೈಕೆಯಾದರೆ ದಿಲ್ಲಿಯಲ್ಲಿ 9,000-9,500 ಹಾಸಿಗೆಗಳನ್ನು ನಾವು ಅಳವಡಿಸಬಲ್ಲೆವು. ಹೆಚ್ಚಿನ ಆಮ್ಲಜನಕ ಹಾಸಿಗೆಗಳನ್ನು ಹೊಂದಲು ನಮಗೆ ಸಾಧ್ಯವಾಗುತ್ತದೆ. ದಿಲ್ಲಿಯಲ್ಲಿ ಆಮ್ಲಜನಕ ಕೊರತೆಯಿಂದ ಯಾರನ್ನೂ ಸಾಯಲು ನಾವು ಬಿಡುವುದಿಲ್ಲ ’ಎಂದರು.