ಮಂಗಳೂರು: ಪೊಲೀಸರಿಂದ ಅನಗತ್ಯ ತಿರುಗಾಟದ ವಾಹನಗಳ ತಪಾಸಣೆ

ಮಂಗಳೂರು, ಮೇ 6: ಕೊರೋನ ಸೋಂಕು ತಡೆಗಟ್ಟಲು ಸರಕಾರ ಹೊರಡಿಸಿದ ಮಾರ್ಗಸೂಚಿಯನ್ನು ಜನರು ಸರಿಯಾಗಿ ಪಾಲಿಸದ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗುರುವಾರ ತುರ್ತು ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ ಮೇರೆಗೆ ಗುರುವಾರ ರಾತ್ರಿಯಿಂದಲೇ ಪೊಲೀಸರು ವಾಹನಗಳ ತಪಾಸಣೆ ಆರಂಭಿಸಿದ್ದಾರೆ. ಅಲ್ಲದೆ ಅನಗತ್ಯ ವಾಹನಗಳ ಓಡಾಟಕ್ಕೆ ತಡೆಯೊಡ್ಡುತ್ತಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಗುರುವಾರ ರಾತ್ರಿ ನಗರದ ಕೆಪಿಟಿ ಬಳಿ ಖುದ್ದು ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ. ಅನಗತ್ಯವಾಗಿ ಪಾಸ್ ತೋರಿಸಿ ಓಡಾಡುವವರ ಮೇಲೆ ಕಠಿಣ ಕ್ರಮ ಕೈಗೊಂಡಿದ್ದಾರೆ. ಬಹುತೇಕ ಮಂದಿ ಒಂದಲ್ಲೊಂದು ಗುರುತಿನ ಚೀಟಿ ತೋರಿಸಿ ಅನಗತ್ಯವಾಗಿ ಓಡಾಡುತ್ತಿದ್ದಾರೆ ಎಂದು ತುರ್ತು ಸಭೆಯಲ್ಲಿ ಜನಪ್ರತಿನಿಧಿಗಳಿಂದ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರ ಸೂಚನೆಯ ಮೇರೆಗೆ ಪೊಲೀಸರು ಕಾರ್ಯಾಚರಣೆ ಬಿಗುಗೊಳಿಸಿದ್ದಾರೆ.
ಗುರುವಾರ ರಾತ್ರಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 54 ಚೆಕ್ಪೋಸ್ಟ್ಗಳಲ್ಲೂ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಆರಂಭಿಸಿದ್ದು, ಎಲ್ಲಾ ವಾಹನಗಳನ್ನು ಸಮರ್ಪಕವಾಗಿ ಪರಿಶೀಲನೆ ನಡೆಸಿದ್ದಾರೆ. ಪ್ರತಿಯೊಂದು ವಾಹನಗಳ ವೀಡಿಯೋ ಮಾಡತೊಡಗಿದ್ದಾರೆ. ತುರ್ತು ಹೊರತುಪಡಿಸಿ ಅನಗತ್ಯ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಮೇ 7ರಿಂದ ಮುಂದಿನದ ಆದೇಶದವರೆಗೆ ಪ್ರತೀ ದಿನವೂ ಬೆಳಗ್ಗೆ 10ರ ಬಳಿಕ ಈ ಕಾರ್ಯಾಚರಣೆ ಮುಂದುವರಿಯಲಿದೆ. ವಾಹನಗಳಲ್ಲದೆ ಅವಧಿ ಮೀರಿ ತೆರೆದಿಡುವ ಅಂಗಡಿಮುಂಗಟ್ಟುಗಳ ಮೇಲೂ ಕಾರ್ಯಾಚರಣೆ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.






.jpeg)


