"ಚುನಾವಣಾ ಆಯೋಗದ ಈಗಿನ ಕಾರ್ಯವೈಖರಿ ತನ್ನ ಮೌಲ್ಯಗಳಿಗೆ ಹೊಂದಾಣಿಕೆಯಾಗುತ್ತಿಲ್ಲ"
ಸುಪ್ರೀಂ ಕೋರ್ಟ್ ನಲ್ಲಿ ಆಯೋಗದ ಪರ ವಕೀಲರ ರಾಜೀನಾಮೆ
ಹೊಸದಿಲ್ಲಿ,ಮೇ 7: ಸರ್ವೋಚ್ಚ ನ್ಯಾಯಾಲಯದಲ್ಲಿ ಚುನಾವಣಾ ಆಯೋಗವನ್ನು ಪ್ರತಿನಿಧಿಸುವ ವಕೀಲರ ತಂಡದ ಸದಸ್ಯ ಮೋಹಿತ ಡಿ.ರಾಮ್ ಅವರು ಶುಕ್ರವಾರ ತನ್ನ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿದ್ದು,ಆಯೋಗದ ಈಗಿನ ಕಾರ್ಯವೈಖರಿ ತನ್ನ ಮೌಲ್ಯಗಳಿಗೆ ಹೊಂದಾಣಿಕೆಯಾಗುತ್ತಿಲ್ಲ ಎಂದು ಹೇಳಿದ್ದಾರೆ.
‘ಚುನಾವಣಾ ಆಯೋಗವನ್ನು ಪ್ರತಿನಿಧಿಸುವುದು ಗೌರವದ ವಿಷಯವಾಗಿದೆ. ನನ್ನ ವೃತ್ತಿಜೀವನದಲ್ಲಿ ಮೈಲಿಗಲ್ಲನ್ನು ನಾನು ದಾಟಿದ್ದೇನೆ ಮತ್ತು ಆಯೋಗದ ಸ್ಥಾಯಿ ವಕೀಲನ ಹುದ್ದೆಯಿಂದ ಆರಂಭಗೊಂಡಿದ್ದ ನನ್ನ ಪಯಣದಲ್ಲಿ 2013ರಿಂದ ವಕೀಲರ ತಂಡದ ಸದಸ್ಯನಾಗಿ ಪದೋನ್ನತಿಗೊಂಡಿದ್ದೇನೆ. ಆದರೆ ಆಯೋಗದ ಹಾಲಿ ಕಾರ್ಯವೈಖರಿಯು ನನ್ನ ವೌಲ್ಯಗಳಿಗೆ ಅನುರೂಪವಾಗಿಲ್ಲ,ಆದ್ದರಿಂದ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ’ಎಂದು ಆಯೋಗದ ನಿರ್ದೇಶಕ (ಕಾನೂನು)ರಿಗೆ ಸಲ್ಲಿಸಿರುವ ಪತ್ರದಲ್ಲಿ ರಾಮ್ ತಿಳಿಸಿದ್ದಾರೆ.
ಬಾಕಿಯುಳಿದಿರುವ ಎಲ್ಲ ಪ್ರಕರಣಗಳಲ್ಲಿ ಕಡತಗಳು, ಎನ್ಒಸಿಗಳು ಮತ್ತು ವಕಾಲತ್ ನಾಮಾಗಳನ್ನು ಸುಗಮವಾಗಿ ಹಸ್ತಾಂತರಿಸುವುದಾಗಿಯೂ ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.