ನೂತನ ಕೋವಿಡ್ ಕೇರ್ ಕೇಂದ್ರ ಶೀಘ್ರ ಆರಂಭ: ಸುರೇಶ್ ಕುಮಾರ್

ಬೆಂಗಳೂರು: ಕೋವಿಡ್ ಸೋಂಕು ಹೆಚ್ಚಾದ ಹಿನ್ನೆಲೆ ದಕ್ಷಿಣ ಭಾಗದಲ್ಲಿ ಶೀಘ್ರದಲ್ಲಿಯೇ ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ರವಿವಾರ ಜಿಗಣಿಯ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಿಜಯಶ್ರೀ ಖಾಸಗಿ ಆಸ್ಪತ್ರೆಯ ಸಹಯೋಗದಲ್ಲಿ ನಿರ್ಮಿಸಲಾಗುತ್ತಿರುವ ಕೋವಿಡ್ ಕೇಂದ್ರ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿ ಬಳಿಕ ಅವರು ಮಾತನಾಡಿದರು.
ಬೊಮ್ಮನಹಳ್ಳಿ ವಲಯಕ್ಕೆ ಸೇರಿದ ಉತ್ತರಹಳ್ಳಿ, ಜಿಗಣಿ ಹಾಗೂ ಅಂಜನಾಪುರ ವಾರ್ಡ್ಗಳಲ್ಲಿ ಒಟ್ಟಾರೆ 150 ಹಾಸಿಗೆಗಳ ಕೋವಿಡ್ ಕೇರ್ ಕೇಂದ್ರಗಳನ್ನು ಮುಂದಿನ ಎರಡು ದಿನಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಉತ್ತರಹಳ್ಳಿ ವಾರ್ಡಿನ ಬಿಬಿಎಂಪಿ ಪದವಿಪೂರ್ವ ಕಾಲೇಜು ಹಾಗೂ ಅಂಜನಾಪುರ ವಾರ್ಡಿನ ಬಿಹೈಂಡ್ ವುಡ್ಸ್ ರೆಸಾರ್ಟಿನಲ್ಲಿ ಸಿದ್ಧಗೊಳಿಸುತ್ತಿರುವ ಕೋವಿಡ್ ಕೇಂದ್ರಗಳನ್ನೂ ಪರಿಶೀಲನೆ ಮಾಡಿದ್ದೇನೆ. ಸೋಂಕಿತರ ಆರೈಕೆಗೆ ಅವಶ್ಯಕವಿರುವ ಮೂಲಸೌಕರ್ಯಗಳ ಕುರಿತಂತೆ ಕೆಲವು ಸಲಹೆ-ಸೂಚನೆಗಳನ್ನು ಸಹ ಅಧಿಕಾರಿಗಳಿಗೆ ನೀಡಿದ್ದೇನೆ ಎಂದರು.
ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಕೃಷ್ಣಪ್ಪ ಅವರು ಈ ಕೋವಿಡ್ ಕೇಂದ್ರಗಳ ಸ್ಥಾಪನೆಗೆ ಅಪಾರವಾದ ಕೊಡುಗೆ ನೀಡಿದ್ದು, ತಮ್ಮ ಸಮೀಪ ಸಹವರ್ತಿಗಳ ಸಹಕಾರದೊಂದಿಗೆ, ಅಂಜನಾಪುರದ ಬಿಹೈಂಡ್ ವುಡ್ ರೆಸಾರ್ಟ್ನಲ್ಲಿ 50 ಹಾಸಿಗೆಗಳ ಆರೈಕೆ ಕೇಂದ್ರ ಸ್ಥಾಪನೆಗೆ ಸಹ ಸಹಕಾರ ನೀಡಿದ್ದಾರೆ. ಜನಪ್ರತಿನಿಧಿಗಳ ಈ ರೀತಿಯ ಸಹಕಾರ ಇಂದಿನ ಸಂದರ್ಭದಲ್ಲಿ ವಿಶ್ವಾಸವನ್ನು ತುಂಬುವಂತಹುದ್ದಾಗಿದೆ ಎಂದು ಸುರೇಶ್ ಕುಮಾರ್ ಶ್ಲಾಘಿಸಿದರು.







