ಹೋಂ ಐಸೋಲೇಷನ್ನಲ್ಲಿ ಇರುವವರಿಗೆ ಉಚಿತ ಆರೋಗ್ಯ ಕಿಟ್ : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬೊಮ್ಮಾಯಿ

ಉಡುಪಿ, ಮೇ 10: ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆಯನ್ನು ನಿಯಂತ್ರಿಸಲು, ಕೋವಿಡ್ ಸೋಂಕಿತರಾಗಿ ಹೋಂ ಐಸೋಲೇಷನ್ನಲ್ಲಿ ಇರುವವರಿಗೆ ಕಡ್ಡಾಯವಾಗಿ ಉಚಿತ ಅಗತ್ಯ ಮಾತ್ರೆಗಳನ್ನು ಒಳಗೊಂಡ ಕಿಟ್ಗಳನ್ನು ನೀಡಿ ಎಂದು ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹೋಂ ಐಸೋಲೇಶನ್ನಲ್ಲಿರುವವರಿಗೆ ಉಚಿತವಾಗಿ ಅಗತ್ಯ ಮಾತ್ರೆಗಳ ನ್ನೊಳಗೊಂಡ ಕಿಟ್ಗಳನ್ನು ಕಡ್ಡಾಯವಾಗಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಪ್ರತೀ ದಿನ ಹೋಂ ಐಸೋಲೇಷನ್ನಲ್ಲಿ ಇರುವವರನ್ನು ಭೇಟಿ ಮಾಡಿ, ಅವರ ಆರೋಗ್ಯ ಪರಿಶೀಲನೆ ನಡೆಸಿ ವರದಿ ಪಡೆಯುವಂತೆ ತಿಳಿಸಿದರು.
ಇದರಿಂದ ರೋಗಿಗಳಿಗೆ ಆಕ್ಸಿಜನ್ ಪ್ರಮಾಣ ಕಡಿಮೆ ಇದ್ದಲ್ಲಿ ಕೂಡಲೇ ಆಸ್ಪತ್ರೆಗಳಿಗೆ ದಾಖಲಿಸಲು ಸಾಧ್ಯವಾಗುತ್ತದೆ ಹಾಗೂ ಮರಣ ಸಂಭವಿಸುವುದನ್ನು ತಡೆಯಲು ಸಾಧ್ಯವಾಗಲಿದೆ ಎಂದವರು ಹೇಳಿದರು.
ಜಿಲ್ಲೆಗೆ ಆಕ್ಸಿಜನ್: ಜಿಲ್ಲೆಯಲ್ಲಿ ಆಕ್ಸಿಜನ್ ಸರಬರಾಜು ಹೆಚ್ಚಳಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾ ಗಿದೆ. ಬಹರೈನ್ ಮತ್ತು ಕುವೈತ್ನಿಂದ ಬರುವ ಆಕ್ಸಿಜಿನ್ನಲ್ಲಿ ಸಹ ಜಿಲ್ಲೆಗೆ ಸಾಕಷ್ಟು ಪ್ರಮಾಣದ ಆಕ್ಸಿಜನ್ ಸರಬರಾಜು ಮಾಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಹೊಸದಾಗಿ 1500 ಎಲ್ಪಿಎಂನ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲು ಸರಕಾರದಿಂದ ಅನುಮತಿ ದೊರೆತಿದೆ. ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜಿನ್ ಸಂಗ್ರಸಲು ಸಿಲೆಂಡರ್ಗಳ ಕೊರತೆ ಇದ್ದಲ್ಲಿ ಖಾಸಗಿಯವರಿಂದ ಲೀಸ್ ಆಧಾರದಲ್ಲಿ ಖಾಲಿ ಸಿಲೆಂಡರ್ ಗಳನ್ನು ಪಡೆಯಿರಿ. ಆದರೆ ಆಕ್ಸಿಜಿನ್ ಅನಗತ್ಯ ಪೋಲಾಗದಂತೆ ಎಚ್ಚರ ವಹಿಸಿ ಎಂದವರು ಸೂಚನೆ ಗಳನ್ನು ನೀಡಿದರು.
ಜಿಲ್ಲಾಸ್ಪತ್ರೆಯಲ್ಲಿ ಹೊಸದಾಗಿ ಪರೀಕ್ಷಾ ಕೇಂದ್ರ ಆರಂಭಿಸಲು ಸೂಚನೆ ನೀಡಲಾಗಿದೆ. ಜಿಲ್ಲೆಗೆ 480 ರೆಮ್ಡಿಸಿವರ್ ಸರಬರಾಜು ಮಾಡಿದ್ದು, ಇನ್ನೂ ಹೆಚ್ಚುವರಿಯಾಗಿ 1000 ರೆಮ್ಡಿಸಿವರ್ ಸರಬರಾಜು ಮಾಡುವಂತೆ ಸೂಚನೆ ನೀಡಲಾಗಿದೆ. ಜಿಲ್ಲೆಗೆ ಯಾವುದೇ ಅಗತ್ಯ ಔಷಧಗಳು ಮತ್ತು ಆಕ್ಸಿಜಿನ್ ಕೊರತೆ ಇದ್ದಲ್ಲಿ ಕನಿಷ್ಠ 2 ದಿನ ಮೊದಲೇ ತಮ್ಮ ಗಮನಕ್ಕೆ ತರುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ಜಿಲ್ಲೆಯಲ್ಲಿ ಅರಂಭಿಸಲಾಗಿರುವ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಸೋಂಕಿತರನ್ನು ದಾಖಲಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ ಸಚಿವರು, ಇದರಿಂದ ಕುಟುಂಬದ ಇತರರಿಗೆ ಸೋಂಕು ಹರಡುವುದನ್ನು ತಡೆಯುವುದರ ಜೊತೆಗೆ ತುರ್ತು ಸಂದರ್ಭದಲ್ಲಿ ಕೂಡಲೇ ಅಸ್ಪತ್ರೆಗೆ ದಾಖಲು ಮಾಡಲು ಹಾಗೂ ಸೂಕ್ತ ಚಿಕಿತ್ಸೆ ಒದಗಿಸಲು ಸಾಧ್ಯವಾಗಲಿದೆ ಎಂದರು.
ಜಿಲ್ಲೆಯಲ್ಲಿ ಖಾಸಗಿ ಸಂಸ್ಥೆಗಳ ಸಿಎಸ್ಆರ್ ನಿಧಿಯಿಂದ ಅಗತ್ಯವಿರುವ ವೈದ್ಯಕೀಯ ನೆರವು ಪಡೆಯುವಂತೆ ಸಚಿವರು ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಸಿಇಓ ಡಾ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಸ್ಪಿ ವಿಷ್ಣುವರ್ಧನ್, ಡಿಎಚ್ಓ ಡಾ.ಸುಧೀರ್ ಚಂದ್ರ ಸೂಡಾ ಮತ್ತಿತರರು ಉಪಸ್ಥಿತರಿದ್ದರು.







