ನಾಟೆಕಲ್: ‘ಸೆಲ್ಯೂಟ್ ದಿ ಸೈಲೆಂಟ್ ವರ್ಕರ್’ ಸನ್ಮಾನ

ಉಳ್ಳಾಲ, ಮೇ 14: ವೈದ್ಯಕೀಯ ಕ್ಷೇತ್ರದಲ್ಲಿ ಕೊರೋನ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದವರಿಗೆ ಜೆಸಿಐ ಮಂಗಳ ಗಂಗೋತ್ರಿ ವತಿಯಿಂದ ‘ಸೆಲ್ಯೂಟ್ ದಿ ಸೈಲೆಂಟ್ ವರ್ಕರ್’ ಸನ್ಮಾನ ಕಾರ್ಯಕ್ರಮವು ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ಕೇಂದ್ರದ ಆರೋಗ್ಯ ಅಧಿಕಾರಿ ಡಾ.ಮಿಸ್ರಿಯ ಸುಹಾನಾ ಮಾತನಾಡಿ ಕೋವಿಡ್ ಸೋಂಕು ವೈದ್ಯರಿಗೂ ಹೊಸ ಅನುಭವವಾಗಿದೆ. ಕೊರೋನ ವಿರುದ್ಧ ಸಿಬ್ಬಂದಿ ಸಹಿತ ವೈದ್ಯರ ತಂಡ ಸಮಾನ ಪ್ರಯತ್ನದಿಂದ ಹೋರಾಡಿದ್ದೇವೆ. ಈಗ ಮತ್ತೆ ಕೊರೋನ ಎರಡನೇ ಅಲೆ ಬಂದಿದ್ದು, ನಾಗರಿಕರು ಸ್ವಯಂ ಜಾಗೃತರಾಗಬೇಕು ಎಂದರು.
ಮಂಗಳಗಂಗೋತ್ರಿ ಘಟಕದ ಅಧ್ಯಕ್ಷ ಜೆಸಿ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಲಯ ಆರೋಗ್ಯ ಶಿಕ್ಷಣ ಅಧಿಕಾರಿ ಲಲಿತಾ, ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಲೀಲ್ ಇಬ್ರಾಹೀಂ, ಯೋಗಿನಿ, ಮರಿಯಮ್ಮ, ಸುಷ್ಮಾ, ಸುರೇಂದ್ರ ಪೂಜಾರಿ, ಜೆಸಿಐ ಸದಸ್ಯ ಆರೀಫ್ ಕಲ್ಕಟ್ಟ ಉಪಸ್ಥಿತರಿದ್ದರು.
ಸ್ಥಾಪಕ ಅಧ್ಯಕ್ಷ ಜೆ.ಸಿ.ತ್ಯಾಗಮ್ ಹರೇಕಳ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಘಟಕದ ಉಪಾಧ್ಯಕ್ಷೆ ಜೆ.ಸಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಜೆ.ಸಿ ನಳಿನಿ ಗಟ್ಟಿ ಸ್ವಾಗತಿಸಿದರು. ಘಟಕದ ನಿಕಟಪೂರ್ವ ಅಧ್ಯಕ್ಷೆ ಜೆ.ಸಿ ಪವಿತ್ರಾ ಗಣೇಶ್ ವಂದಿಸಿದರು.







