ಆ್ಯಂಟಿ ವೈರಲ್ ಔಷಧಿ ವಿತರಿಸಿದ್ದ ಗಂಭೀರ್ ರಿಂದ ವಿವರಣೆ ಕೋರಿದ ದಿಲ್ಲಿ ಪೊಲೀಸ್

ಹೊಸದಿಲ್ಲಿ: ಆಂಟಿವೈರಲ್ ಔಷಧಿ ಫ್ಯಾಬಿಫ್ಲು ಅನ್ನು ತನ್ನ ಕಚೇರಿಯಲ್ಲಿ ಸಂಗ್ರಹಿಸಿ, ವಿತರಿಸಿದ್ದಾರೆ ಎಂಬ ವರದಿಗಳ ಬಗ್ಗೆ ದಿಲ್ಲಿ ಪೊಲೀಸರು ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರಿಂದ ಪ್ರತಿಕ್ರಿಯೆ ಕೋರಿದ್ದಾರೆ.
ಇದಕ್ಕೂ ಮೊದಲು ಶುಕ್ರವಾರ, ದಿಲ್ಲಿ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಗಳು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಅವರನ್ನು ಕೋವಿಡ್ ಪರಿಹಾರ ಕಾರ್ಯಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸಿದ್ದಾರೆ
ದಿಲ್ಲಿ ಪೊಲೀಸರ ಕ್ರಮಕ್ಕೆ ಪ್ರತಿಕ್ರಿಯಿಸಿದ ಪೂರ್ವ ದಿಲ್ಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ "ನಾವು ಎಲ್ಲಾ ವಿವರಗಳನ್ನು ಒದಗಿಸಿದ್ದೇವೆ. ನಾನು ದಿಲ್ಲಿ ಹಾಗೂ ಅದರ ಜನರಿಗೆ ಯಾವಾಗಲೂ ನನ್ನ ಅತ್ಯುತ್ತಮ ಸಾಮರ್ಥ್ಯದೊಂದಿಗೆ ಸೇವೆ ಸಲ್ಲಿಸುತ್ತೇನೆ" ಎಂದರು.
ಗೌತಮ್ ಗಂಭೀರ್ ಹಾಗೂ ಶ್ರೀನಿವಾಸ್ ಬಿ.ವಿ ಅವರಲ್ಲದೆ ದಿಲ್ಲಿ ಪೊಲೀಸರು ಬಿಜೆಪಿ ವಕ್ತಾರ ಹರೀಶ್ ಖುರಾನಾ ಅವರನ್ನು ಪರಿಹಾರ ಸಾಮಗ್ರಿಗಳ ವಿತರಣೆಗೆ ಸಂಬಂಧಿಸಿದಂತೆ ಪ್ರಶ್ನಿಸಿದ್ದಾರೆ.
ಕೊರತೆಯಿರುವ ಆಂಟಿವೈರಲ್ ಔ ಷಧಿ ಫ್ಯಾಬಿಫ್ಲು ಅನ್ನು ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್ ಅವರ ಕಚೇರಿಯಿಂದ ವಿತರಿಸಲಾಗುತ್ತಿದೆ ಎಂದು ಅನೇಕ ವರದಿಗಳು ದೃಢಪಡಿಸಿದ್ದವು.
ಎಪ್ರಿಲ್ 25 ರಂದು ಮಾಡಿದ್ದ ಟ್ವೀಟ್ನಲ್ಲಿ, ಗೌತಮ್ ಗಂಭೀರ್ ಅವರು ತಮ್ಮ ತಂಡವು ಪೂಸಾ ರಸ್ತೆಯಲ್ಲಿರುವ ತಮ್ಮ ಕಚೇರಿಯಿಂದ ಎಷ್ಟು ಜನರಿಗೆ ಸಾಧ್ಯವೋ ಅಷ್ಟು ಜನರಿಗೆ ‘ಫ್ಯಾಬಿಫ್ಲು’ ಒದಗಿಸುತ್ತದೆ ಎಂದು ಹೇಳಿದ್ದರು. ಈ ವಿತರಣೆ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಉಚಿತವಾಗಿ ನಡೆಯಲಿದೆ ಎಂದಿದ್ದರು.
ಕಾಂಗ್ರೆಸ್ಸಿನ ಪವನ್ ಖೇರಾ ಮತ್ತು ಎಎಪಿಯ ದುರ್ಗೇಶ್ ಪಾಠಕ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ಕೊರತೆಯಿರುವ ಆಂಟಿವೈರಲ್ ಔಷಧವನ್ನುಗಂಭೀರ್ ಹೇಗೆ ಸಂಗ್ರಹಿಸುವಲ್ಲಿ ಯಶಸ್ವಿಯಾದರು ಎಂಬ ಪ್ರಶ್ನೆಗಳನ್ನು ಎತ್ತಿದ್ದರು.







