ಉ.ಪ್ರ:ಘಾಝಿಪುರದಲ್ಲಿ ಗಂಗಾ ನದಿಯಲ್ಲಿ ಮತ್ತೆ ತೇಲಿ ಬಂದ ಹೆಣಗಳ ರಾಶಿ
ಘಾಜಿಪುರ,ಮೇ 15: ಉತ್ತರ ಪ್ರದೇಶದ ಘಾಝಿಪುರದ ಗಂಗಾ ನದಿಯಲ್ಲಿ ಶನಿವಾರ ಮತ್ತೆ ಹೆಣಗಳು ತೇಲಿ ಬಂದಿದ್ದು,ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.
ಮಂಗಳವಾರವೂ ಇದೇ ಪ್ರದೇಶದಲ್ಲಿ ಹಲವಾರು ಶವಗಳು ಕಂಡು ಬಂದಿದ್ದವು. ಅದಕ್ಕೂ ಮುನ್ನಾ ದಿನ ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿಯೂ ಗಂಗಾ ನದಿಯಲ್ಲಿ ಶಂಕಿತ ಕೋವಿಡ್ ರೋಗಿಗಳ ಶವಗಳು ತೇಲಿಬಂದಿದ್ದವು. ರೋಗಗಳ ಹರಡುವಿಕೆ ಮತ್ತು ಊದಿಕೊಂಡು ಕೊಳೆತಿರುವ ಶವಗಳಿಂದ ಹೊರಹೊಮ್ಮುತ್ತಿರುವ ದುರ್ನಾತದ ಬಗ್ಗೆ ಘಾಝಿಪುರದ ನಿವಾಸಿಗಳು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.
ಭಯಂಕರ ದೃಶ್ಯ. ಎಲ್ಲ ದಿಕ್ಕುಗಳಿಂದಲೂ ತೇಲಿಬರುತ್ತಿರುವ ಶವಗಳು ನದಿಯ ದಂಡೆಯಲ್ಲಿಯ ಘಾಟ್ಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಿವೆ. ಜನರು ನಿಜಕ್ಕೂ ಭಯಭೀತರಾಗಿದ್ದರೆ ಮತ್ತು ದುರ್ನಾತ ಹೆಚ್ಚುತ್ತಲೇ ಇದೆ. ಶವಗಳು ಕಳೆದ ನಾಲ್ಕೈದು ದಿನಗಳಿಂದಲೂ ನದಿಯಲ್ಲಿ ತೇಲುತ್ತಿದ್ದಂತಿದೆ. ಈ ಶವಗಳು ಚಂದೌಲಿ ಕಡೆಯಿಂದ ತೇಲಿ ಬಂದಿರುವ ಸಾಧ್ಯತೆಯಿದೆ ಎದು ಸ್ಥಳೀಯರು ಹೇಳಿದರು.
ಗುರುವಾರ ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿಯೂ ನದಿ ಸಮೀಪದ ಮರಳಿನಲ್ಲಿ ಹುಗಿಯಲಾಗಿದ್ದ ಶವಗಳು ಪತ್ತೆಯಾಗಿದ್ದವು.
ಇಂತಹ ಘಟನೆಗಳು ದೇಶದಲ್ಲಿ,ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸಾಂಕ್ರಾಮಿಕದ ವ್ಯಾಪಕತೆಯ ಬಗ್ಗೆ ಭೀತಿಯನ್ನು ಸೃಷ್ಟಿಸಿವೆ. ಕೊರೋನವೈರಸ್ನಿಂದ ಮೃತರ ಸಂಬಂಧಿಗಳು ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೆ ಶವಗಳನ್ನು ನದಿಯಲ್ಲಿ ಎಸೆದಿರಬಹುದು ಎಂದು ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.