ಹರಿದ್ವಾರ ಕೋವಿಡ್ ಕೇಂದ್ರದಲ್ಲಿ 65 ಸಾವುಗಳ ಬಗ್ಗೆ ದಾಖಲೆಗಳೇ ಇಲ್ಲ: ಉತ್ತರಾಖಂಡ ಆರೋಗ್ಯ ಇಲಾಖೆ ನೋಟಿಸ್
ಡೆಹ್ರಾಡೂನ್ / ಹರಿದ್ವಾರ: ಎಪ್ರಿಲ್ 25 ಹಾಗೂ ಮೇ 12ರ ನಡುವೆ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟ ಸುಮಾರು 65 ರೋಗಿಗಳ ವಿವರಗಳನ್ನು ಮರೆಮಾಚಿರುವುದಕ್ಕೆ ಕುಂಭ ಮೇಳ ಸಮಯದಲ್ಲಿ ರೋಗಿಗಳ ಆರೈಕೆಗೆ ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರವಾಗಿ ಸ್ಥಾಪಿಸಲಾದ ಹರಿದ್ವಾರದ ಬಾಬಾ ಬಾರ್ಫಾನಿ ಆಸ್ಪತ್ರೆಗೆ ಉತ್ತರಾಖಂಡ ರಾಜ್ಯ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ.
ಆರೋಗ್ಯ ಇಲಾಖೆಯು ಈ ಲೋಪವನ್ನು "ಅತ್ಯಂತ ಗಂಭೀರವಾಗಿ" ನೋಡುತ್ತಿದೆ ಹಾಗೂ ಹರಿದ್ವಾರದ ಸಿಎಮ್ಒ ಹಾಗೂ ಆಸ್ಪತ್ರೆಯ ಅಧಿಕಾರಿಗಳಿಂದ ವಿವರಣೆಯನ್ನು ಪಡೆಯಲಾಗುತ್ತಿದೆ ಎಂದು ರಾಜ್ಯ ಕೋವಿಡ್ ಕಂಟ್ರೋಲ್ ರೂಮ್ ಮುಖ್ಯಸ್ಥ ಅಭಿಷೇಕ್ ತ್ರಿಪಾಠಿ ಹೇಳಿದರು.
ಕುಂಭ ಮೇಳ ಅಧಿಕೃತವಾಗಿ ಪ್ರಾರಂಭವಾದಾಗಿನಿಂದ ಎಪ್ರಿಲ್ 1 ರಿಂದ ಆಸ್ಪತ್ರೆಯಲ್ಲಿ 75 ಸಾವುಗಳು ಸಂಭವಿಸಿವೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಕೇವಲ 10 ಸಾವಿನ ಅಂಕಿ-ಅಂಶವನ್ನು ಆಸ್ಪತ್ರೆಯು ರಾಜ್ಯ ಕೋವಿಡ್ ನಿಯಂತ್ರಣ ಕೊಠಡಿ ಅಧಿಕಾರಿಗಳೊಂದಿಗೆ ಹಂಚಿಕೊಂಡಿದೆ.
"ಡೇಟಾವನ್ನು ಅಪ್ಲೋಡ್ ಮಾಡುತ್ತಿರುವ ವೈದ್ಯರು ಉತ್ತರಪ್ರದೇಶ ಮೂಲದವರಾಗಿರಬಹುದು ಹಾಗೂ ಕುಂಭ ಮೇಳ ಕೊನೆಗೊಂಡಾಗ ಅವರು ತಮ್ಮ ಮೂಲ ಹುದ್ದೆಗೆ ಮರಳಿದರು’’ ಎಂದು ಪ್ರಸ್ತುತ ಆಸ್ಪತ್ರೆಯ ನೋಡಲ್ ಅಧಿಕಾರಿಯಾಗಿರುವ ಐಎಎಸ್ ಅಧಿಕಾರಿ ಅನ್ಶುಲ್ ಸಿಂಗ್ ಹೇಳಿದ್ದಾರೆ.