ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ʼನ್ಯಾಯಬದ್ಧ ಫೆಲೆಸ್ತೀನ್ ಉದ್ದೇಶʼ ಬೆಂಬಲಿಸಿದ ಭಾರತ

ಹೊಸದಿಲ್ಲಿ: ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಉಂಟಾಗಿರುವ ಸಂಘರ್ಷಮಯ ಮತ್ತು ಉದ್ವಿಗ್ನ ವಾತಾವರಣವನ್ನು ಶಮನಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ರವಿವಾರ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಆಗ್ರಹಿಸಿದೆ.
"ಇಸ್ರೇಲ್ ಹಾಗೂ ಫೆಲೆಸ್ತೀನ್ ತಕ್ಷಣ ನೇರ ಮಾತುಕತೆಗಳನ್ನು ಮುಂದುವರಿಸಬೇಕು ಹಾಗೂ ಭಾರತ ಫೆಲೆಸ್ತೀನ್ನ ನ್ಯಾಯಬದ್ಧ ಉದ್ದೇಶವನ್ನು ಹಾಗೂ ಎರಡು-ದೇಶ ಪರಿಹಾರವನ್ನು ಬೆಂಬಲಿಸುತ್ತದೆ" ಎಂದು ರವಿವಾರ ನಡೆದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಟಿ ಎಸ್ ತಿರುಮೂರ್ತಿ ಹೇಳಿದರು.
"ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ಸುವ್ಯವಸ್ಥೆಯನ್ನು ಹದಗೆಡಿಸಿವೆ. ಗಾಝಾದಿಂಧ ನಡೆಯುತ್ತಿರುವ ಅನಿಯಂತ್ರಿತ ರಾಕೆಟ್ ದಾಳಿಗಳು ಇಸ್ರೇಲ್ ನಾಗರಿಕರನ್ನು ಗುರಿಯಾಗಿಸಿವೆ, ಇದನ್ನು ನಾವು ಖಂಡಿಸುತ್ತೇವೆ. ಗಾಝಾ ಮೇಲೆ ನಡೆದ ಪ್ರತಿ ದಾಳಿ ಕೂಡ ಮಹಿಳೆಯರು, ಮಕ್ಕಳು ಸೇರಿದಂತೆ ಬಹಳಷ್ಟು ಸಾವುನೋವಿಗೆ ಕಾರಣವಾಗಿದೆ" ಎಂದು ಅವರು ಹೇಳಿದರು.
"ಎರಡೂ ಕಡೆಗಳು ಉದ್ವಿಗ್ನತೆಯನ್ನು ಶಮನಗೊಳಿಸಲು ಯತ್ನಿಸಬೇಕು ಹಾಗೂ ಈಗಿರುವ ಯಥಾಸ್ಥಿತಿಯನ್ನು ಬದಲಾಯಿಸುವುದರಿಂದ ದೂರ ಸರಿಯಬೇಕು. ಜೆರುಸಲೆಂ ಲಕ್ಷಾಂತರ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿದೆ" ಎಂದು ತಿರುಮೂರ್ತಿ ಹೇಳಿದರು.