ಕುತ್ತಾರು: ಹೊಟೇಲಿನಲ್ಲಿ ದಾಂಧಲೆ ಆರೋಪ; ದೂರು ದಾಖಲು
ಮಂಗಳೂರು, ಮೇ 17: ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಮುನ್ನೂರು ಗ್ರಾಮದ ಕುತ್ತಾರ್ ಸಮೀಪದ ಮದನಿ ನಗರ ಎಂಬಲ್ಲಿನ ‘ಕ್ಯಾಲಿಕಟ್ ಕಿಚನ್’ ಎಂಬ ಹೊಟೇಲಿಗೆ ನುಗ್ಗಿದ ತಂಡವೊಂದು ದಾಂಧಲೆ ನಡೆಸಿದ್ದಾರೆ ಎನ್ನಲಾದ ಘಟನೆ ರವಿವಾರ ರಾತ್ರಿ ನಡೆದಿದೆ.
ಆರೋಪಿಗಳಾದ ಲುಕ್ಮಾನ್, ಅಝ್ಮಾಲ್, ರಿಝ್ವಾನ್, ಇಮ್ರಾನ್, ಫವಾಝ್, ನಿಝಾಮ್, ಇರ್ಫಾನ್, ತೌಫಿಕ್ ಎಂಬವರು ಈ ಹೊಟೇಲ್ ಬಳಿ ಹೋಗಿ ತಿಂಡಿಗೆ ಆರ್ಡರ್ ಮಾಡಿದ್ದು, ಈ ವೇಳೆ ಕೌಂಟರ್ನಲ್ಲಿದ್ದ ಸತೀಶ್ ಚಂದ್ರ ಎಂಬವರು ಈ ಬಾರಿಯ ಹಣ ಕೊಡಿ ಎಂದು ವಿನಂತಿಸಿದ್ದರು ಎನ್ನಲಾಗಿದ್ದು, ಅಷ್ಟರಲ್ಲಿ ಸಿಟ್ಟುಗೊಂಡ ಆರೋಪಿಗಳು ಇತರರನ್ನು ಸೇರಿಸಿಕೊಂಡು ಕಲ್ಲು ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಹೋಟೆಲ್ ಒಳಗಡೆ ಅಕ್ರಮವಾಗಿ ಪ್ರವೇಶ ಮಾಡಿ ಅವಾಚ್ಯ ಶಬ್ದದಿಂದ ಬೈದು ‘ನಾವು ಕೇಳುವಾಗ ಉಚಿತವಾಗಿ ತಿಂಡಿಗಳನ್ನು ಕೊಡಲು ನಿಮಗೆ ಆಗುವುದಿಲ್ಲವಾ ? ನಾವು ನಿಮಗೆ ಹಣ ಕೊಡಬೇಕಾ ? ಎಂದು ಕೇಳಿ ಕೌಂಟರ್ನಲ್ಲಿದ್ದ ಸತೀಶ್ ಚಂದ್ರರಿಗೆ ದೊಣ್ಣೆಯಿಂದ ಹೊಡೆದು, ಕಿಟಕಿ ಪಾತ್ರೆಗಳು, ಮೇಜು-ಕುರ್ಚಿಗಳಿಗೆ ಹಾನಿಗೈದು ಸುಮಾರು 20 ಸಾವಿರ ರೂ. ನಷ್ಟ ಮಾಡಿದ್ದಾರೆ ಎಂದು ಫೈಝಲ್ ಪಿ.ಕೆ. ಎಂಬವರು ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿಗಳು ಕಲ್ಲು ದೊಣ್ಣೆಗಳನ್ನು ಹೊಟೇಲ್ ಬಳಿಯಲ್ಲೇ ಎಸೆದು ನಾವು ಕೋರ್ಟ್, ಸ್ಟೇಷನ್ಗೆ ಹೋಗಿ ಬಂದವರು. ನಾವು ಯಾರಿಗೂ ಹೆದರುವುದಿಲ್ಲ. ನಾಳೆಯಿಂದ ಮತ್ತೆ ಹಣ ಕೇಳಿದರೆ ನಿಮ್ಮಲ್ಲಿ ಯಾರಾನ್ನಾದರೂ ಕೊಲೆ ಮಾಡಲಾಗುವುದು ಎಂದು ಬೆದರಿಸಿದ್ದಾರೆ. ಅಲ್ಲದೆ ಕೋವಿಡ್ ನಿಯಾಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.





