ನಡಿಕುದ್ರು, ಪರಪಟ್ಟ ಪ್ರದೇಶಗಳಿಗೆ ತಹಶೀಲ್ದಾರ್ ಭೇಟಿ

ಪಡುಬಿದ್ರಿ: ತೌಕ್ತೆ ಚಂಡಮಾರುತ ಪ್ರಭಾವದಿಂದ ಉಪ್ಪುನೀರು ಒಳಹರಿದು ಹೆಜಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಿಕುದ್ರು, ಪರಪಟ್ಟ ಪ್ರದೇಶದಲ್ಲಿ ಕೃಷಿಕರಿಗೆ ಹಾಗೂ ಕುಡಿಯುವ ನೀರಿಗೆ ಸಮಸ್ಯೆಯಾಗಿರುವ ಪ್ರದೇಶಗಳಿಗೆ ಕಾಪು ತಹಸೀಲ್ದಾರ್ ಪ್ರತಿಭಾ ಆರ್ ಭೇಟಿ ನೀಡಿದರು.
ಈ ಪ್ರದೇಶಗಳಲ್ಲಿ ಚಂಡಮಾರುತದಿಂದ ಉಪ್ಪು ನೀರಿನ ಸಮಸ್ಯೆಯ ಬಗ್ಗೆ ವಾರ್ತಾಭಾರತಿ ಮೇ 18ರಂದು ವರದಿಯನ್ನು ಪ್ರಕಟಿಸಿತ್ತು. ಅದರಂತೆ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಸ್ಥಳೀಯರೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್, ಹೆಜಮಾಡಿ ಗ್ರಾಮದ ನಡಿಕುದ್ರು, ಪರಪಟ್ಟ ಪ್ರದೇಶಗಳಿಗೆ ತುರ್ತು ಕುಡಿಯುವ ನೀರು ಒದಗಿಸಲು ಕ್ರಮಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಸೂಚಿಸಿದರು.
ಅಲ್ಲಿನ ಶಾಶ್ವತ ತಡೆಗೋಡೆ ನಿರ್ಮಾಣ ಕುರಿತಂತೆ ಗ್ರಾಮ ಪಂಚಾಯಿತಿ ನಿರ್ಣಯ ಮಾಡಿ ಕಳುಹಿಸುವಂತೆ ತಿಳಿಸಿದ್ದು, ಅವರ ನಿರ್ಣಯದಂತೆ ವರದಿ ಸಿದ್ದಪಡಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸುವುದಾಗಿ, ಬೆಳೆ ಬೆಳೆಯದ ಕಾರಣ ಪರಿಹಾರ ನೀಡುವ ಕುರಿತಂತೆ ಕೃಷಿ ಇಲಾಖೆ ವರದಿಯಾಧರಿಸಿ ಕ್ರಮವಹಿಸಲಾಗುವುದು ಎಂದು ಪ್ರತಿಭಾ ಎಂದು ವಿವರಿಸಿದರು.
ಕಂದಾಯ ನಿರೀಕ್ಷಕ ಸುಧೀರ್ಕುಮಾರ್ ಶೆಟ್ಟಿ, ಗ್ರಾಮಕರಣಿಕ ಅರುಣ್ ಕುಮಾರ್, ಉಪಾಧ್ಯಕ್ಷೆ ಪವಿತ್ರ ಗಿರೀಶ್, ಸದಸ್ಯ ಪಾಂಡುರಂಗ ಕರ್ಕೇರ, ಪಿಡಿಒ ಸುಮತಿ, ಸ್ಥಳೀಯರಾದ ವಾಮನ ಕೋಟ್ಯಾನ್, ಉಮೇಶ್ ಮೊದಲಾದವರು ಇದ್ದರು.







