ಪ್ರಧಾನಿ ಮೋದಿ ವೈಫಲ್ಯ ಮರೆಮಾಚಲು ಬಿಜೆಪಿಯಿಂದ ನಕಲಿ ಟೂಲ್ ಕಿಟ್ : ರಮಾನಾಥ ರೈ ಆರೋಪ
ಮಂಗಳೂರು, ಮೇ 21: ಕೊರೋನ ಎರಡನೇ ಅಲೆಯನ್ನು ಸರಿಯಾಗಿ ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿ ಸರಕಾರ ವಿಫಲ ಆಗಿರುವುದನ್ನು ಮರೆಮಾಚಲು ಬಿಜೆಪಿ ನಕಲಿ ಟೂಲ್ ಕಿಟ್ ಕಥೆಕಟ್ಟಿ ನಾಚಿಗೇಡಿನ ಕೃತ್ಯ ಎಸಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಟೀಕಿಸಿದ್ದಾರೆ.
ಸೋಶಿಯಲ್ ಮಿಡಿಯಾ ಟ್ವಿಟ್ಟರ್ ಈಗಾಗಲೇ ಬಿಜೆಪಿಯ ಜೋಕರ್ ಮತ್ತು ವಕ್ತಾರ ಸಂಬಿತ್ ಪಾತ್ರ ಅವರ ‘ಟೂಲ್ ಕಿಟ್ ಟ್ವೀಟ್’ ತಿರುಚಲ್ಪಟ್ಟಿರುವ ಮೀಡಿಯಾ’ ಎಂದು ಹೇಳಿದ್ದು, ಬಿಜೆಪಿ ತನ್ನ ಸಕಲ ವೈಫಲ್ಯಗಳನ್ನು ಮುಚ್ಚಿಹಾಕಲು ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಅತ್ಯಂತ ನೀಚಮಟ್ಟಕ್ಕೆ ಇಳಿದಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಿ ವೈರ್ ಮತ್ತು ಆಲ್ಟ್ ನ್ಯೂಸ್ನಂತಹ ಸ್ವತಂತ್ರ ಮಾಧ್ಯಮ ಸಂಸ್ಥೆಗಳು ಈಗಾಗಲೇ ಬಿಜೆಪಿಯ ಮುಖಂಡರು ನಕಲಿ ದಾಖಲೆಗಳನ್ನು ಸೃಷ್ಟಿಸಿ ದ್ದಾರೆ ಎಂದು ಹೇಳಿವೆ. ಬಿಜೆಪಿ ಪ್ರಚಾರಕ್ಕೆ ತಂದಿರುವ ಟೂಲ್ ಕಿಟ್ ಕಟ್ಟುಕಥೆಯಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ಪಾತ್ರವಿಲ್ಲ. ಬಿಜೆಪಿ ಇಂತಹ ಅನೈತಿಕ ಕೃತ್ಯದ ಮೂಲಕ ದೇಶದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದೆ. ಸುಳ್ಳು ಮತ್ತು ಅಪಪ್ರಚಾರದ ಮೂಲಕವೇ ಅಧಿಕಾರಕ್ಕೆ ಬಂದಿ ರುವ ಬಿಜೆಪಿಯಂತಹ ರಾಜಕೀಯ ಪಕ್ಷ ಜನಾಭಿಪ್ರಾಯ ಮತ್ತು ಪ್ರತಿಪಕ್ಷಗಳನ್ನು ಹತ್ತಿಕ್ಕಲು ಯಾವ ಮಟ್ಟಕ್ಕೂ ಇಳಿಯಬಹುದು ಎಂಬುದಕ್ಕೆ ಇದೊಂದು ಉದಾಹರಣೆ ಎಂದು ರಮಾನಾಥ ರೈ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಮಂಚೂಣಿ ಸಂಘಟನೆಗಳು, ಮುಖಂಡರು, ಕಾರ್ಯಕರ್ತರು ಶಕ್ತಿ ಮೀರಿ ಕೋವಿಡ್ ನಿಯಂತ್ರಣ ಕಾರ್ಯಗಳು, ವೈದ್ಯಕೀಯ ನೆರವು ಮತ್ತು ಪರಿಹಾರ ಕಾರ್ಯದಲ್ಲಿ ನಿರತವಾಗಿದ್ದಾರೆ. ದೇಶ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಯುವ ಕಾಂಗ್ರೆಸ್ ಮುಖಂಡರು ಕೊರೋನ ಪರಿಹಾರ ಕಾರ್ಯದಲ್ಲಿ ನಿರತರಾಗಿರುವುದು ಎಲ್ಲರಿಂದಲೂ ಪ್ರಸಂಶೆ ಗಳಿಸುತ್ತಿದೆ. ಕಾಂಗ್ರೆಸ್ ಸಂಘಟನೆಗಳ ಜನಪರ ಸೇವೆಯನ್ನು ಸಹಿಸಲಾ ರದೆ ಬಿಜೆಪಿ ಇಂತಹ ನೀಚ ಕೃತ್ಯ ನಡೆಸಿದೆ ಎಂದು ರೈ ಆಪಾದಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಟೂಲ್ಕಿಟ್ ಸಿದ್ಧಪಡಿಸಿದೆ ಎಂದು ಆರೋಪಿಸಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟ್ವೀಟ್ ಮೂಲಕ ಹಂಚಿಕೊಂಡಿದ್ದರು. ಅನಂತರ ಬಿಜೆಪಿಯ ಮುಖಂಡರು ಕಾಂಗ್ರೆಸ್ ಪಕ್ಷ ಸರಕಾರದ ವಿರುದ್ಧ ಸುಳ್ಳು ಪ್ರಚಾರದಲ್ಲಿ ತೊಡಗಿದರು. ಕಾಂಗ್ರೆಸ್ ಪಕ್ಷ ಬಿಜೆಪಿ ಮುಖಂಡರ ವಿರುದ್ಧ ಪೊಲೀಸರಿಗೆ ದೂರು ನೀಡಿದೆ ತಿಳಿಸಿದ್ದಾರೆ.
ನಕಲಿ ದಾಖಲೆಗಳನ್ನು ಟ್ವೀಟ್ ಮಾಡಿರುವ ಸಂಬಿತ್ ಪಾತ್ರಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಹಲವು ಬಿಜೆಪಿ ನಾಯಕರ ಟ್ವಿಟ್ಟರ್ ಖಾತೆಯನ್ನು ಅಮಾನತು ಮಾಡಬೇಕು. ನಕಲಿ ಟೂಲ್ ಕಿಟ್ ಮೂಲಕ ಬಿಜೆಪಿ ಮಾಡಿರುವ ಆರೋಪ, ಅಪಪ್ರಚಾರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಲಿದ್ದು, ಬಿಜೆಪಿ ಕುತಂತ್ರಗಳನ್ನು, ಆಡಳಿತ ವೈಫಲ್ಯವನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಲಿದ್ದಾರೆ ಎಂದು ರೈ ಹೇಳಿದ್ದಾರೆ.
ತಾವೇ ಸೃಷ್ಟಿಸಿದ ನಕಲಿ ಟೂಲ್ಕಿಟ್ ಮೂಲಕ ಸ್ಥಳೀಯ ಸಂಸದರು ಕಾಂಗ್ರೆಸ್ ಪಕ್ಷದ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಬುದ್ಧಿಗೇಡಿತನದ ಪರಮಾವಧಿಯಾಗಿದೆ. ಬಿಜೆಪಿ ಮುಖಂಡರು ಅಪಪ್ರಚಾರ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ನಡೆಸುತ್ತಿರುವ ಕೀಳು ಮಟ್ಟದ ರಾಜಕೀಯ ದೇಶದ ಇತರ ರಾಜಕೀಯ ಪಕ್ಷಗಳು ಕೂಡ ನಾಚಿಕೆಪಡುವಂತೆ ಮಾಡಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ದೇಶದ ಗೌರವಕ್ಕೆ ಕುಂದು ತರುವಂತದು ಎಂದು ರಮಾನಾಥ ರೈ ಅಭಿಪ್ರಾಯಪಟ್ಟಿದ್ದಾರೆ.
ಟೂಲ್ಕಿಟ್ ಮೂಲಕ ಬಿಜೆಪಿಯ ಸುಳ್ಳಿನ ತಂತ್ರ ಬೆಳಕಿಗೆ : ಹರೀಶ್ ಕುಮಾರ್
ಕೊರೋನ ನಿಗ್ರಹದಲ್ಲಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಹಾಗೂ ಕಳಚಿ ಬೀಳುವ ಮುಖವಾಡವನ್ನು ಉಳಿಸಿ ಕೊಳ್ಳಲು ಟೂಲ್ ಕಿಟ್ ಫೋರ್ಜರಿ ಮಾಡಿ ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗುವ ಮೂಲಕ ಬಿಜೆಪಿಯ ಸುಳ್ಳಿನ ತಂತ್ರ ಬೆಳಕಿಗೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ರಾಜೀವ್ ಗೌಡ ಮತ್ತಿರರರು ಸೇರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಹಾಗೂ ಸ್ಮೃತಿ ಇರಾನಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಮೇಲೆ ಕೇಸು ದಾಖಲಿಸಿದ್ದಾರೆ. ದೇಶದ ಜನರನ್ನು ಕೊರೋನ ಎಂಬ ಮಹಾಮಾರಿಯನ್ನು ನಿಯಂತ್ರಣ ಮಾಡಲು ವಿಫಲವಾದ ಬಿಜೆಪಿಯು ಕಾಂಗ್ರೆಸ್ ಪಕ್ಷದ ಲೆಟರ್ಹೆಡನ್ನು ದುರ್ಬಳಕೆ ಮಾಡಿ ಇಲ್ಲಸಲ್ಲದ ಆರೋಪ ವನ್ನು ಮಾಡಿದೆ. ಅಲ್ಲದೆ ಕಾಂಗ್ರೆಸ್ ಪಕ್ಷದ ಮೇಲೆ ದ್ವೇಷದ ಭಾವನೆ ಬೀರುವಂತೆ ಮಾಡಿ ಜನರನ್ನು ತಪ್ಪುದಾರಿಗೆ ಕೊಂಡೊಯ್ಯಲು ಪ್ರಯತ್ನಿಸಿದೆ ಎಂದು ಹರೀಶ್ ಕುಮಾರ್ ಆರೋಪಿಸಿದ್ದಾರೆ.
ಬಿಜೆಪಿ ಈ ರೀತಿ ಹಲವು ಪ್ರಕರಣಗಳಲ್ಲಿ ಜನರನ್ನು ಮೋಸ ಮಾಡಲು ಪ್ರಯತ್ನಿಸುತ್ತಿದೆ. ಇಂದು ಬಿಜೆಪಿ ನಕಲಿ ಪೋಸ್ಟ್ ಮಾಡಿ ಜನರನ್ನು ಮೋಸ ಗೊಳಿಸುವುದರಲ್ಲಿ ವಿಫಲವಾಗಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.







