ಸ್ಟಿರಾಯ್ಡ್ ಬಳಕೆಗೆ ಕೆಲ ನಿರ್ಬಂಧಗಳು ಅಗತ್ಯ: ಸಚಿವ ಆರ್.ಅಶೋಕ್

ಬೆಂಗಳೂರು, ಮೇ 21: ಕೋವಿಡ್ ಸೋಂಕಿತರು ಅತೀಯಾದ ಸ್ಟಿರಾಯ್ಡ್ ಬಳಕೆ ಮಾಡುತ್ತಿರುವುದು ಕಂಡುಬರುತ್ತಿದೆ. ಬ್ಲ್ಯಾಕ್ ಫಂಗಸ್ಗೆ ತುತ್ತಾಗುವುದಕ್ಕೆ ಇದು ಒಂದು ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿ ಇದರ ಬಳಕೆಗೆ ಸೂಕ್ತ ಕಡಿವಾಣ ಹಾಕಬೇಕಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಶುಕ್ರವಾರ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡ್ರಗ್ಸ್ ಲಾಜಿಸ್ಟಿಕ್ಸ್ ಸೊಸೈಟಿಯ ಅಧಿಕಾರಿಗಳ ಜೊತೆಗೆ ಮಾತನಾಡಿದ ಸಚಿವ ಅಶೋಕ್, ಕೋವಿಡ್ ಔಷಧಿ ಲಭ್ಯತೆ ಕುರಿತಂತೆ ಪರಾಮರ್ಶೆ ಸಭೆ ನಡೆಸಿದರು. ಈ ವೇಳೆ 'ಸ್ಟಿರಾಯ್ಡ್ ಬಳಕೆಯ ಕುರಿತಂತೆ ಸೂಕ್ತ ಮಾರ್ಗಸೂಚಿಯನ್ನ ಹೊರಡಿಸಬೇಕಿದೆ. ಹೋಮ್ ಐಸೋಲೇಷನ್ ಕಿಟ್ನಲ್ಲಿಯೂ ಸ್ಟಿರಾಯ್ಡ್ ಮಾತ್ರೆಗಳನ್ನ ಇಟ್ಟು ಕೊಡಲಾಗುತ್ತಿದೆ. ಇದರ ಬಳಕೆಯನ್ನ ಆಸ್ಪತ್ರೆಗಳಲ್ಲಿ ಅದು ವೈದ್ಯರ ಸೂಚನೆಯ ಮೇರೆಗೆ ಮಾತ್ರ ಬಳಸುವಂತೆ ಸೂಚಿಸಬೇಕು. ಹಾಗೆಯೇ ವಿಶ್ವಾರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ನ ಅನುಸರಿಸುವುದರ ಜೊತೆಗೆ ಕೆಲ ನಿರ್ಬಂಧನೆಗಳನ್ನು ಹಾಕಬೇಕಿದೆ' ಎಂದರು.
ನಂತರದಲ್ಲಿ ರೆಮ್ಡೆಸಿವಿರ್ ಲಭ್ಯತೆ ಕುರಿತಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಧ್ಯ ರೆಮ್ಡೆಸಿವಿರ್ ವಯಲ್ಗಳ ಕೊರತೆ ಕಾಡುತ್ತಿಲ್ಲ. ಈ ಮೊದಲು ದಿನಕ್ಕೆ 18 ರಿಂದ 20 ಸಾವಿರ ವಯಲ್ಗಳಿಗೆ ಬೇಡಿಕೆ ಇತ್ತು. ಈಗ ಅದು 5 ಸಾವಿರಕ್ಕೆ ಇಳಿದಿದೆ. ಖುದ್ದು ನಾನು ಕೂಡಾ ಕೆಲ ಆಸ್ಪತ್ರೆಗಳಿಗೆ ಕರೆ ಮಾಡಿ ಅವರಿಗೆ ಅಗತ್ಯವಿರುವಷ್ಟು ವಯಲ್ಗಳು ದೊರಕುತ್ತಿರುವುದರ ಬಗ್ಗೆ ಖಚಿತ ಪಡಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ಬ್ಲ್ಯಾಕ್ ಫಂಗಸ್ ವಿಚಾರವಾಗಿ ನನಗೂ ಹಲವು ಕರೆಗಳು ಬರುತ್ತಿವೆ. ಈಗಾಗಲೇ ಚಿಕಿತ್ಸೆಯ ಕುರಿತಂತೆ ಸ್ಪಷ್ಟ ಮಾಹಿತಿಗಳನ್ನ ನೀಡಲಾಗಿದೆ. ಚಿಕಿತ್ಸೆಗೆ ಬೇಕಾದ ಔಷಧಿ ಕುರಿತಂತೆ ಈಗಾಗಲೇ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಜೊತೆ ಮಾತನಾಡಿದ್ದೇನೆ. ನಾಳೆ 10 ಸಾವಿರ ವಯಲ್ಗಳನ್ನ ಕೇಂದ್ರವು ಕಳುಹಿಸಿಕೊಡಲಿದ್ದು, ಇನ್ನೂ ಹೆಚ್ಚಿನ ಹಂಚಿಕೆ ರಾಜ್ಯಕ್ಕೆ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದೇನೆ ಎಂದರು.
ಸೋಂಕಿನಿಂದ ಸಾವನ್ನಪ್ಪಿದವರ ಅಸ್ಥಿಗಳಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಚಿತಾಗಾರಗಳಲ್ಲಿ ಇನ್ನೂ 1 ಸಾವಿರಕ್ಕೂ ಅಧಿಕ ಸಾವನ್ನಪ್ಪಿದವರ ಅಸ್ಥಿಗಳನ್ನ ಸಂಬಂಧಿಗಳು ತೆಗೆದುಕೊಂಡು ಹೋಗಿಲ್ಲ. ನಾವು ಸಂಬಂಧಿಸಿದವರಿಗೆ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದರೆ ಅವರ ಫೋನ್ಗಳು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಹೀಗಾಗಿ ಸರಕಾರವು ಗೌರವಯುತವಾಗಿ ಅವುಗಳ ವಿಸರ್ಜನೆಗೆ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸುವ ಕುರಿತಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪತ್ರದ ಕುರಿತಂತೆ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ವಿರೋಧ ಪಕ್ಷದ ನಾಯಕರಿಗೆ ಹೀಗೆ ಜಿಲ್ಲಾಧಿಕಾರಿಗಳ ಸಭೆ ನಡೆಸಲು ಅನುಮತಿ ಕೊಟ್ಟಿದ್ದರಾ? ಆ ರೀತಿ ಸಭೆ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಬೇಕಿದ್ದರೆ ಅವರು ಪತ್ರ ಮುಖೇನ ಅಗತ್ಯ ಮಾಹಿತಿ ತೆಗೆದುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದರು.







