'ಕೊರೋನ ಸೋಲಿಸಿ, ದೇಶ ಗೆದ್ದುಬಿಟ್ಟಿತು' ಎಂದರೆ ಜನರನ್ನು ಕೊಂದ ಕೊಲೆಗಾರ ಯಾರು: ಸಿದ್ದರಾಮಯ್ಯ ಪ್ರಶ್ನೆ
ಕೋವಿಡ್ ಲಸಿಕೆ: ವಸ್ತುಸ್ಥಿತಿ ವಿವರಿಸಿ ರಾಜ್ಯದ ಜನತೆಗೆ ಪತ್ರ

ಬೆಂಗಳೂರು, ಮೇ 22: `ವೈಜ್ಞಾನಿಕ ಮನೋಭಾವಕ್ಕೆ ಆದ್ಯತೆ ನೀಡಿ. ತಜ್ಞರುಗಳು ಹೇಳಿದಂತೆ ಕೇಳಿ ಕೊರೋನ ಸೋಂಕು ನಿರ್ಮೂಲನೆ ಮಾಡಿ. ಕೊರೋನ ನಿಸರ್ಗ ಸಹಜ ವಿಕೋಪ ನಿಜ. ಆದರೆ, ಅದನ್ನು ನಿರ್ವಹಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಫಲರಾದ್ದರಿಂದ ಈಗ ಅದು ರಾಜಕೀಯ ವಿಕೋಪವಾಗಿದೆ. ಸುಳ್ಳುಗಳನ್ನು ನಂಬಬೇಡಿ. ಯಾರು ಏನೇ ಹೇಳಿದರೂ ಪರಿಶೀಲಿಸಿ ನೋಡಿ, ಪ್ರಶ್ನಿಸಿ, ದೇಶ ಉಳಿಸಿ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.
ಶನಿವಾರ ರಾಜ್ಯದ ಜನತೆಗೆ ಸುದೀರ್ಘ ಪತ್ರ ಬರೆದಿರುವ ಸಿದ್ದರಾಮಯ್ಯ, ಕೋವಿಡ್ ಲಸಿಕೆಗಳನ್ನು ಸಮರ್ಪಕವಾಗಿ ನೀಡಲಾಗದೆ, ಸಮಸ್ಯೆಗಳನ್ನು ನಿರ್ವಹಿಸಲಾಗದೆ ಜನರ ಮಾರಣ ಹೋಮಕ್ಕೆ ಕಾರಣವಾಗಿರುವ ಕೇಂದ್ರ-ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರಗಳು ಅಪರಾಧಿ ಸ್ಥಾನದಲ್ಲಿ ನಿಂತಿವೆ. ಅಪರಾಧ ಸಾಧಾರಣವಲ್ಲ. ತನ್ನದೆ ದೇಶದ ಮಕ್ಕಳಿಗೆ ಲಸಿಕೆ ನಿರಾಕರಿಸಿ ಲಕ್ಷಾಂತರ ಜನರನ್ನು ಕೊಂದ ಕೊಲೆಗಾರರು ಹೊರಬೇಕಾದ ಅಪರಾಧ ಅದು. ಸ್ವತಃ ಅಪರಾಧಿ ಸ್ಥಾನದಲ್ಲಿ ನಿಂತಿರುವ ಬಿಜೆಪಿಯು ಈಗ ದೇಶದ ನಾಗರಿಕರಿಗೆ ಲಸಿಕೆಯ ಕುರಿತು ಕಾಂಗ್ರೆಸ್ ಮುಖಂಡರು ಅಪಪ್ರಚಾರ ಮಾಡಿದರು, ಅದಕ್ಕಾಗಿ ಲಸಿಕೆ ಜನ ಲಸಿಕೆ ಹಾಕಿಸಿಕೊಳ್ಳಲಿಲ್ಲ ಎಂದು ಹೇಳಿಕೆ ನೀಡಲಾರಂಭಿಸಿದ್ದಾರೆ. ನಿಜ ಸಂಗತಿಗಳನ್ನು ಮರೆಮಾಚಲು ಪ್ರಾರಂಭಿಸಿದ್ದಾರೆ. ಗೊಬೆಲ್ಸ್ ಪರಂಪರೆಯವರು ಮತ್ತು ಅವರ ಅಧಿಕೃತ, ಅನಧಿಕೃತ ವಕ್ತಾರರುಗಳೆಲ್ಲ ಸೇರಿಕೊಂಡು ಸುಳ್ಳನ್ನು ಉತ್ಪಾದನೆ ಮಾಡಿ ಜನರಿಗೆ ಹಂಚಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.
ಲಸಿಕೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಅಥವಾ ಜನತೆ ಉತ್ತರಿಸಬೇಕಾಗಿಲ್ಲ. ಆಡಳಿತ ನಡೆಸುವ ಬಿಜೆಪಿಯು ಈಗ ದೇಶದ ಜನರಿಗೆ ಉತ್ತರಿಸಬೇಕಾಗಿದೆ. ದೇಶದ ಜನ ಪ್ರಶ್ನೆ ಕೇಳುತ್ತಿದ್ದಾರೆ. ಜನರ ಪ್ರಶ್ನೆಗಳಿಗೆ ಕಾಂಗ್ರೆಸ್ ಪಕ್ಷ ದನಿಗೂಡಿಸಿದೆ ಅಷ್ಟೆ. ಪ್ರಶ್ನೆ ಕೇಳುವುದು, ಸಲಹೆ ನೀಡುವುದು, ಪ್ರತಿಭಟಿಸುವುದು ಜನರ ಹಕ್ಕು. ಜನರ ದನಿಗೆ ಕಿವಿಗೊಟ್ಟು ಕೆಲಸ ಮಾಡಬೇಕಾಗಿರುವುದು ಸರ್ಕಾರಗಳ ಕರ್ತವ್ಯ. ವಿರೋಧ ಪಕ್ಷಗಳು, ನಾಡಿನ ಜನರು ಕೇಳುತ್ತಿರುವ ಈ ಪ್ರಶ್ನೆಗಳಿಗೆ ಉತ್ತರ ಹೇಳಬೇಕಾಗಿರುವುದೂ ಸರಕಾರದ ಕರ್ತವ್ಯ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಿದ್ಧತೆ ಏಕೆ ಮಾಡಿಕೊಳ್ಳಲಿಲ್ಲ: ವಿಶ್ವ ಆರೋಗ್ಯ ಸಂಸ್ಥೆಯು ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿಯೇ, ಭಾರತದಲ್ಲಿ ರೂಪಾಂತರ ಹೊಂದಿದ ಮಾರಣಾಂತಿಕ ಕೊರೋನ ವೈರಸ್ ತಳಿ ಬಿ.1.617 ಪತ್ತೆಯಾಗಿದೆ. ಇದು ಮುಂದಿನ ದಿನಗಳಲ್ಲಿ ಭಾರಿ ಹಾನಿ ಮಾಡಬಹುದು ಎಂದು ಹೇಳಿರಲಿಲ್ಲವೆ? ಅದನ್ನು ಕೇಂದ್ರ ಸರಕಾರ ಏಕೆ ನಿರ್ಲಕ್ಷಿಸಿತು? ಸಮರ್ಪಕ ಸಿದ್ಧತೆಗಳನ್ನು ಏಕೆ ಮಾಡಿಕೊಳ್ಳಲಿಲ್ಲ? ನಮ್ಮ ದೇಶದ, ವಿಶ್ವದ ವೈರಾಣು ತಜ್ಞರು, ವಿಜ್ಞಾನಿಗಳು ಫೆಬ್ರವರಿ, ಮಾರ್ಚ್ ವೇಳೆಗೆ ಭೀಕರ ಮಾರಣಾಂತಿಕವಾಗುವ ಕೊರೋನದ 2ನೆ ಅಲೆ ಭಾರತಕ್ಕೆ ಬರುತ್ತದೆ ಎಂದು ಹೇಳಿರಲಿಲ್ಲವೆ? ಬಿಜೆಪಿಯವರಿಗೆ ಆತ್ಮಸಾಕ್ಷಿ ಇದ್ದರೆ ಒಮ್ಮೆ ಮುಟ್ಟಿ ನೋಡಿಕೊಳ್ಳಬೇಕು. ಈ ದೇಶದ ಪ್ರಧಾನಿ 2021ರ ಜನವರಿ 28ರಂದು ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾರತವು ಕೊರೋನ ವಿರುದ್ಧ ಏಕಾಂಗಿಯಾಗಿ ಜಯ ಸಾಧಿಸಿದೆ ಎಂದು ಹೇಳಲಿಲ್ಲವೆ? ಪ್ರಧಾನಿಯವರು ಹಾಗೆ ಹೇಳಬೇಕಾದರೆ, ಅವರಿಗೆ ಯಾವ ವಿಜ್ಞಾನಿ, ಯಾವ ವೈರಾಣು ತಜ್ಞರು ವರದಿ ನೀಡಿದ್ದರು ಎಂಬುದನ್ನು ದೇಶದ ಜನರಿಗೆ ತಿಳಿಸಬೇಕಲ್ಲವೆ? ಎಂದು ಪ್ರಶ್ನಿಸಿದ್ದಾರೆ.
2021ರ ಫೆಬ್ರವರಿ 8ರಂದು ಇದೇ ಪ್ರಧಾನಿ ಮೋದಿಯವರು ಪಾರ್ಲಿಮೆಂಟಿನಲ್ಲಿ ಮಾಡಿದ ಭಾಷಣದಲ್ಲಿ ಜಗತ್ತಿನ ಯಾವ ದೇಶವೂ ಕೊರೋನ ವಿರುದ್ಧ ಜಯ ಸಾಧಿಸಿಲ್ಲ. ಆದರೆ, ನಾವು ಏಕಾಂಗಿಯಾಗಿ ಅದೃಶ್ಯ ಶತ್ರುವಾದ ಕೊರೋನ ವಿರುದ್ಧ ಹೋರಾಟ ಮಾಡಿ ಜಯ ಸಾಧಿಸಿದ್ದೇವೆ ಎಂದು ಹೇಳಿದಾಗ ಬಿಜೆಪಿಯ ಸಚಿವರುಗಳು, ಸಂಸದರುಗಳು ಮೇಜು ಕುಟ್ಟಿ ಸಂಭ್ರಮಿಸಲಿಲ್ಲವೆ? ಹಾಗೆ ಮೇಜು ಕುಟ್ಟಿ ಸಂಭ್ರಮಿಸಿದವರಲ್ಲಿ ಕರ್ನಾಟಕದಿಂದ ಆರಿಸಿ ಹೋದ ಸಚಿವರು ಪ್ರಧಾನಿಯವರ ಹಿಂದೆಯೇ ಕೂತಿರುವುದನ್ನು ಜನರು ನೋಡಿಲ್ಲವೆ? ಅದೇ ಸಚಿವರೆ ಈಗ ಮುಂದೆ ನಿಂತು ಕಾಂಗ್ರೆಸಿನ ನಾಯಕರನ್ನು ನಿಂದಿಸುತ್ತಾ ಕೂತಿದ್ದಾರೆ, ಇವರು ಆತ್ಮಸಾಕ್ಷಿಯನ್ನು ಮಾರಾಟ ಮಾಡಿ ಎಷ್ಟು ದಿನವಾಯಿತು? ಇವರಿಗೆ ಮೆದುಳು, ಹೃದಯ ಇವೆಲ್ಲಿರಬೇಕಾದ ಜಾಗದಲ್ಲಿ ಇವೆಯೆ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಜನರನ್ನು ದಾರಿ ತಪ್ಪಿಸಿ ಕ್ರೂರ ಕೊರೋನದ ಬಾಯಿಗೆ ದೂಡಿದವರು ಬಿಜೆಪಿಯವರಲ್ಲವೆ? ಕೊರೋನ ವಿರುದ್ಧ ಗೆಲುವು ಸಾಧಿಸಿದ್ದೇವೆ ಎಂದು ಪ್ರಧಾನಿಯವರು ಕೇವಲ ಒಂದೆರಡು ಬಾರಿ ಹೇಳಿದ್ದಲ್ಲ. ಜನವರಿ, ಫೆಬ್ರವರಿ ತಿಂಗಳಲ್ಲಿ ಹತ್ತಾರು ಬಾರಿ ಹೇಳಿದ್ದಾರೆ. ಅದಕ್ಕೆ ರಾಶಿ ರಾಶಿ ದಾಖಲೆಗಳಿವೆ. ವಿವೇಕವಂತರು, ಬುದ್ಧಿವಂತರು ಅವರ ಹೇಳಿಕೆಗಳನ್ನು ಪರಿಶೀಲಿಸಬಹುದು. ಹಾಗೆ ಪರಿಶೀಲಿಸಿ ಅಜ್ಞಾನದ, ಅವಿವೇಕದ ಆರಾಧಕರಿಗೆ ತಿಳಿಸಿ ಹೇಳಬೇಕಾಗಿದೆ. ಈ ದೇಶದ ಜನರ ಆರೋಗ್ಯದ ರಕ್ಷಣೆಯನ್ನು ನೋಡಿಕೊಳ್ಳಬೇಕಾದ ಆರೋಗ್ಯ ಸಚಿವರು 2021ರ ಜನವರಿ 16ರಂದು ದೇಶ ಕೊರೋನದ ವಿರುದ್ಧ ಜಯಸಾಧಿಸುವ ಹಂತಕ್ಕೆ ಬಂದಿದೆ ಎಂದು ಹೇಳಿರಲಿಲ್ಲವೆ? ಇದೇ ಸಚಿವರು 2021ರ ಮಾರ್ಚ್ 14ರಂದು ಆಲ್ ಇಂಡಿಯಾ ಮೆಡಿಕಲ್ ಸೈನ್ಸ್ ಸಂಸ್ಥೆಯಲ್ಲಿ (ಏಮ್ಸ್ನಲ್ಲಿ) ಮಾಡಿದ ಭಾಷಣದಲ್ಲಿ ಭಾರತವು ಕೋವಿಡ್ ವಿರುದ್ಧದ ಐತಿಹಾಸಿಕ ಗೆಲುವಿಗೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದ್ದು ಸುಳ್ಳೆ? ಅಸ್ಸಾಂನ ಬಿಜೆಪಿ ಮುಖ್ಯಮಂತ್ರಿ ಅಸ್ಸಾಂನಲ್ಲಿ ಕೊರೋನ ಇಲ್ಲ ಮಾಸ್ಕ್ ಧರಿಸುವ ಅಗತ್ಯವಿಲ್ಲವೆಂದು ಹೇಳಿದ್ದು ಸುಳ್ಳೆ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಜನರನ್ನು ಕೊಂದ ಕೊಲೆಗಾರ ಯಾರು?: ಕುಂಭಮೇಳ ನಡೆಸಿದರೆ ಕೊರೋನ ಬರುವುದಿಲ್ಲ ಎಂದು ಉತ್ತರಾಖಂಡ್ನ ಮುಖ್ಯಮಂತ್ರಿ ಹೇಳಿರಲಿಲ್ಲವೆ? ಪ್ರಧಾನಿಗಳು ಮತ್ತಿತರ ಕೇಂದ್ರ ಸಚಿವರು ಚುನಾವಣಾ ರ್ಯಾಲಿಗಳಲ್ಲಿ ಸೇರುತ್ತಿದ್ದ ಜನಸ್ತೋಮವನ್ನು ನೋಡಿ ಏನೇನು ಮಾತನಾಡಿದ್ದಾರೆಂದು ದೇಶದ ಬುದ್ಧಿವಂತ ಜನ ಮರೆಯಲು ಸಾಧ್ಯವೆ? ಕೊರೋನವನ್ನು ಸೋಲಿಸಿ ದೇಶ ಗೆದ್ದುಬಿಟ್ಟಿತು ಎಂದು ಪ್ರಧಾನಿಯವರೇ ಜನವರಿಯಿಂದ ಹೇಳುತ್ತಾ ಬಂದ ಮೇಲೆ ಜನ ವ್ಯಾಕ್ಸಿನ್ ಯಾಕೆ? ಮಾಸ್ಕ್ ಯಾಕೆ? ಸ್ಯಾನಿಟೈಸರ್ ಯಾಕೆ? ಎಂಬ ನಿಲುವಿಗೆ ಬಂದದ್ದು ಸುಳ್ಳೆ? ಹಾಗಿದ್ದರೆ ಜನ ಮೋಸ ಹೋಗಲು ಕಾರಣ ಯಾರು? ಜನರನ್ನು ಕೊಂದ ಕೊಲೆಗಾರರು ಯಾರು? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಕೇವಲ ಕೊರೋನ ವಿಕೋಪ ಇಲ್ಲ. ಜಗತ್ತಿನ ಅನೇಕ ದೇಶಗಳು ಕೊರೋನವನ್ನು ಸಮರ್ಥವಾಗಿ ನಿಭಾಯಿಸಿವೆ. ಆದರೆ ನಮ್ಮಲ್ಲಿ ರಾಜಕೀಯ ವೈಫಲ್ಯದ ಕಾರಣಕ್ಕೆ ಜನ ತಬ್ಬಲಿಗಳಾಗುತ್ತಿದ್ದಾರೆ ಅಲ್ಲವೆ? ದೇಶದ ವಿಜ್ಞಾನಿಗಳು ಎರಡನೇ ಅಲೆ ಬರುತ್ತದೆ ಎಂದು ಹೇಳಿದ್ದರು. ಇದನ್ನೇ ಸಂಸತ್ತಿನ ಉಪ ಸಮಿತಿಯೂ ಹೇಳಿತ್ತು. ಅದೇ ಸಂದರ್ಭದಲ್ಲಿ ವಿಶ್ವದ ಅನೇಕ ದೇಶಗಳು 2ನೆ ಅಲೆಯಿಂದ ತತ್ತರಿಸುತ್ತಿದ್ದವು. ಅವುಗಳಿಂದಲೂ ಆಡಳಿತ ನಡೆಸುವ ಸರಕಾರ ಬುದ್ಧಿ ಕಲಿಯಲಿಲ್ಲ. ಮೊದಲ ಅಲೆಯಲ್ಲಿ ತತ್ತರಿಸಿಹೋಗಿದ್ದ ದೇಶಗಳು ತನ್ನ ದೇಶದ ವಿಜ್ಞಾನಿಗಳ, ತಜ್ಞರ ಮಾತು ಕೇಳಿ ತೀವ್ರ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು, ಲಸಿಕೆಗಳನ್ನು ಹಾಕಿಸಿ ತಮ್ಮ ತಮ್ಮ ದೇಶಗಳ ಜನರನ್ನು ರಕ್ಷಿಸಿಕೊಂಡವು. ನಮ್ಮಲ್ಲಿ ಆಡಳಿತ ನಡೆಸುವವರ ಅಪ್ರಬುದ್ಧ, ಅರಾಜಕ, ಸರ್ವಾಧಿಕಾರಿ ಧೋರಣೆಯ ರಾಜಕೀಯ ತೀರ್ಮಾನಗಳಿಂದ ಜನ ಮರಣ ಹೊಂದುತ್ತಿದ್ದಾರೆ.
ಭಾರತವು ಜಗತ್ತಿನಲ್ಲಿಯೇ ಅತಿ ಹೆಚ್ಚು ವ್ಯಾಕ್ಸಿನ್ ತಯಾರಿಸುವ ದೇಶವಾಗಿದೆ. ಭಾರತವು ಕಳೆದ 70 ವರ್ಷಗಳಿಂದ ಸಾಧಿಸಿದ ಸಾಧನೆ ಇದು. ಇದರಿಂದಾಗಿಯೇ ದೇಶದ ಜನರಿಗೆ ಅತ್ಯಂತ ಉದಾತ್ತವಾಗಿ ಮತ್ತು ಉಚಿತವಾಗಿ ಸಿಡುಬು, ದಡಾರ, ಪೊಲಿಯೋ ಮುಂತಾದ ಲಸಿಕೆಗಳನ್ನು ಮನೆ ಮನೆಗೆ ತೆರಳಿ ಆಂದೋಲನದ ಮಾದರಿಯಲ್ಲಿ ನೀಡಿ ಭಾರತವನ್ನು ರಕ್ಷಿಸಲು ಸಾಧ್ಯವಾಯಿತು. ಒಂದು ಅಂದಾಜಿನ ಪ್ರಕಾರ ಸೀರಂ ಔಷಧ ತಯಾರಿಕಾ ಸಂಸ್ಥೆಯೊಂದೆ ವರ್ಷಕ್ಕೆ ಸುಮಾರು 150 ಕೋಟಿ ಡೋಸ್ ವಿವಿಧ ಲಸಿಕೆಗಳನ್ನು ತಯಾರಿಸುತ್ತಿದೆ. ಈ ಸಂಸ್ಥೆಯ ಮುಖ್ಯಸ್ಥರಾದ ಆದಾರ್ ಪೂನಾವಾಲ ಮೇ 18ರಂದು ಪತ್ರಿಕೆಗಳಿಗೆ ಹೇಳಿರುವಂತೆ ಭಾರತವು ಲಸಿಕೆ ಉತ್ಪಾದನೆಗೆ ಮತ್ತು ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಸೂಕ್ತ ಒಪ್ಪಂದಗಳನ್ನು ಮಾಡಿಕೊಳ್ಳಲಿಲ್ಲ. ಲಸಿಕೆ ಪೂರೈಸಲು ಆದೇಶಗಳನ್ನು ನೀಡಲಿಲ್ಲ. ಜನವರಿಯ ಹೊತ್ತಿಗೆ ದೇಶದಲ್ಲಿ ಕೊರೋನ ತುಸು ಇಳಿಮುಖವಾಗುತ್ತಿದೆಯೆಂದು ಭಾಸವಾದ ಕೂಡಲೇ ಆಡಳಿತ ನಡೆಸುತ್ತಿರುವವರು ಲಸಿಕೆ ವಿಚಾರದಲ್ಲಿ ಅಷ್ಟೊಂದು ಉತ್ಸಾಹ ತೋರಿಸಲಿಲ್ಲ. ಅದಕ್ಕಾಗಿ ಈ ಸಮಸ್ಯೆ ಪ್ರಾರಂಭವಾಯಿತೆಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಪೂನಾವಾಲ ಹೇಳುತ್ತಿರುವುದು ನಿಜವಾದರೆ ಜನರ ಸಾವಿನ ಹೊಣೆಯನ್ನು ಯಾರು ಹೊರಬೇಕು? ಶಿಕ್ಷೆಗೆ ಯಾರು ಅರ್ಹರು ನೀವೇ ತೀರ್ಮಾನಿಸಿ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
ದೇಶವು ಜನವರಿಯಲ್ಲಿ ಸುಮಾರು 1 ಕೋಟಿ 65 ಲಕ್ಷ ಲಸಿಕೆಗಳಿಗೆ ಆದೇಶ ನೀಡಿತು. ಆಗ ಸೀರಂ ಸಂಸ್ಥೆ ನಿಗದಿ ಮಾಡಿದ್ದ ದರ ಒಂದು ಲಸಿಕೆಗೆ 210ರೂ., ಮಾರ್ಚ್ ತಿಂಗಳಲ್ಲಿ ಸುಮಾರು 10 ಕೋಟಿ ಲಸಿಕೆಗಳಿಗೆ ಆದೇಶ ನೀಡಲಾಗಿದೆ. ಎರಡನೇ ಬಾರಿ ಲಸಿಕೆಯೊಂದಕ್ಕೆ ನಿಗದಿಪಡಿಸಿದ ದರ 157.50 ರೂ.ಗಳು. ಈ ಆದೇಶವೂ ಗೊಂದಲಕರವಾಗಿಯೇ ಇದೆ. ಎಪ್ರಿಲ್ ತಿಂಗಳಲ್ಲಿ 400 ರೂ.ಗಳ ಬೆಲೆ ನಿಗದಿ ಮಾಡಲಾಯಿತು. ನಂತರ ಅದೇ ಎಪ್ರಿಲ್ನಲ್ಲೇ 300 ರೂ.ಗಳಿಗೆ ಇಳಿಸಲಾಯಿತು. ಖಾಸಗಿ ಆಸ್ಪತ್ರೆಗಳಲ್ಲಿ 900 ರೂ.ಗಳಿಗೂ ಅಧಿಕ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಬೇಡಿಕೆಯನ್ನು ಆಧರಿಸಿ ಬೆಲೆಯನ್ನು ಹೆಚ್ಚಿಸುವ ಲಾಭಬಡುಕರಂತೆ ಲಸಿಕೆಗಳಿಗೆ ಬೆಲೆ ನಿಗದಿ ಪಡಿಸಲಾಗುತ್ತಿದೆ. ಹಾಗಿದ್ದರೆ ಕೇಂದ್ರ ಸರಕಾರ ಜನರ ಹಿತಕ್ಕಾಗಿ ಆಡಳಿತ ನಡೆಸುತ್ತಿದೆಯೋ ಅಥವಾ ಜನರ ಕಗ್ಗೊಲೆ ನಡೆಯುತ್ತಿದ್ದರೂ ಅದನ್ನು ನಿರ್ಲಕ್ಷಿಸಿ ಅಂಗಡಿ ತೆರೆದುಕೊಂಡು ಕೂತಿದೆಯೋ? ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬೆಲೆ ಏರಿಕೆಗೆ ಸಂಬಂಧಿಸಿದಂತೆ ಆದಾರ್ ಪೂನಾವಾಲ ತಾನು ಶೇ.50ರಷ್ಟು ರಾಯಲ್ಟಿಯನ್ನು ಆಸ್ಟ್ರಝನೇಕ ಕಂಪೆನಿಗೆ ನೀಡುತ್ತಿದ್ದೇನೆಂದು ಹೇಳಿಕೊಂಡದ್ದಿದೆ. ಆದರೆ ಕೆ.ವಿ.ಬಾಲಸುಬ್ರಹ್ಮಣ್ಯಂ ಎಂಬ ಭಾರತದ ಇಮ್ಯುನಾಲಜಿಸ್ಟ್ ಹೇಳುವ ಪ್ರಕಾರ ರಾಯಲ್ಟಿಯ ಪ್ರಮಾಣ ಶೇ.5ರಿಂದ 10ರಷ್ಟಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಇದೇ ತಜ್ಞರ ಪ್ರಕಾರ ಕೋವಿಶೀಲ್ಡ್ ಲಸಿಕೆಯ ಬೆಲೆ ಕೇವಲ 30 ರೂ.ಗಳಷ್ಟಾಗಬಹುದು ಎಂದಿದೆ. ಇದೇ ಪೂನಾವಾಲ ವ್ಯಾಕ್ಸಿನ್ ಉತ್ಪಾದಿಸಲು ಹಣ ಬಿಡುಗಡೆ, ಹಣ ಬಿಡುಗಡೆ ಎಂದು ಒತ್ತಾಯ ಮಾಡಿದ್ದು ನಿಜ ಅಲ್ಲವೆ? ಮಾತೆತ್ತಿದರೆ ಕನಿಷ್ಠ ಸರಕಾರ, ಗರಿಷ್ಠ ಆಡಳಿತ ಎಂದು ಹೇಳುವ ಕೇಂದ್ರ ಸರಕಾರದಿಂದ ಒಬ್ಬ ಕಾರ್ಪೋರೇಟ್ ಔಷಧಗಳ ಉದ್ಯಮಿಯನ್ನು ನಿಭಾಯಿಸಲಾಗಲಿಲ್ಲ. ಮೊದಲು ಹಣ ನೀಡಲು ನಿರಾಕರಿಸಿ ನಂತರ ಹಣ ಬಿಡುಗಡೆ ಮಾಡಿದ್ದು ನಿಜವಲ್ಲವೆ? ಲಸಿಕೆಗಳ ಬೆಲೆಯ ಕುರಿತು ಕಂಪೆನಿಗಳೇ ನಿರ್ಧರಿಸಬಹುದೆಂದು ಕೇಂದ್ರ ಸರಕಾರ ಲಸಿಕಾ ನೀತಿಯೊಂದನ್ನು ಹೊರಡಿಸಿದೆ. ಇದರಿಂದಾಗಿ ರಾಜ್ಯಗಳು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತವೆ. ಆದರೂ ನಮಗೆ ಜನರ ಜೀವ ಮುಖ್ಯ. 2ನೆ ಅಲೆಯು ತಾರಕ ರೂಪದಲ್ಲಿದೆ. ಇದರ ನಡುವೆಯೇ ಮೂರನೆ ಅಲೆಯು ಮುಂದಿನ ದಿನಗಳಲ್ಲಿ ಆವರಿಸಿಕೊಳ್ಳಲಿದೆ ಎಂಬ ಎಚ್ಚರಿಕೆ ಮತ್ತು ಸೂಚನೆಗಳನ್ನು ತಜ್ಞರು ನೀಡುತ್ತಿದ್ದಾರೆ. ಅದರಿಂದ ರಕ್ಷಣೆ ಪಡೆಯಬೇಕಾದರೆ ಇರುವುದೊಂದೇ ದಾರಿ, ವ್ಯಾಕ್ಸಿನ್ ನೀಡುವುದು. ಆದರೆ ಅದಾರ್ ಪೂನಾವಾಲ ದೇಶದ ಎಲ್ಲರಿಗೆ ಲಸಿಕೆ ನೀಡಲು ಎರಡು ವರ್ಷಗಳಾಗಬಹುದೆಂದು ಹೇಳುತ್ತಿದ್ದಾರೆ. ಹಾಗಿದ್ದರೆ ದೇಶದ ಜನರನ್ನು ಕಾಪಾಡುವುದು ಹೇಗೆ? ಕೇಂದ್ರ ಸರಕಾರ ಈಗ ಕೆಲವು ಹೊಸ ಕಂಪೆನಿಗಳಿಗೆ ಆದೇಶ ನೀಡಿದೆ. ಅವು ಲಸಿಕೆಯ ಟ್ರಯಲ್ಗಳನ್ನು ನಡೆಸಿ ಉತ್ಪಾದನೆ ಪ್ರಾರಂಭಿಸುವುದಕ್ಕೆ ಕೆಲವು ತಿಂಗಳುಗಳೇ ಬೇಕಾಗುತ್ತವೆ. ತಜ್ಞರು ಹೇಳುವಂತೆ ಒಂದು ವರ್ಷವೆ ಬೇಕಾಗಬಹುದು.
ಇದಕ್ಕೆ ಈಗ ಇರುವ ಪರಿಹಾರವೊಂದೆ, ಈಗಾಗಲೇ ಅನೇಕ ದೇಶಗಳು ತಮ್ಮ ಜನಸಂಖ್ಯೆಗಿಂತ ಹೆಚ್ಚಿನ ಲಸಿಕೆಗಳಿಗೆ ಆದೇಶ ನೀಡಿವೆ. ಸಂಗ್ರಹಿಸಿಟ್ಟುಕೊಂಡಿವೆ. ವಿಶ್ವದ ಅನೇಕ ಕಂಪೆನಿಗಳು ವ್ಯಾಪಕ ಪ್ರಮಾಣದಲ್ಲಿ ಲಸಿಕೆಗಳನ್ನು ಉತ್ಪಾದಿಸುತ್ತಿವೆ. ಸಾಧ್ಯವಾದ ಕಡೆಗಳಿಂದೆಲ್ಲ ಅವುಗಳನ್ನು ಪಡೆದು ಕೇಂದ್ರ ಸರಕಾರ ಉಚಿತವಾಗಿ ಜನರಿಗೆ ಆಂದೋಲನದ ಮಾದರಿಯಲ್ಲಿ ನೀಡಬೇಕು. ಕೊರೋನ ನಿರೋಧಕ ಲಸಿಕೆಗಳನ್ನು ನೀಡುವುದಕ್ಕೆಂದೇ ಕೇಂದ್ರ ಸರಕಾರ ಈ ಬಾರಿಯ ಬಜೆಟ್ನಲ್ಲಿ 35 ಸಾವಿರ ಕೋಟಿ ರೂ.ಗಳನ್ನು ಮೀಸಲಿಡುವುದಾಗಿ ಘೋಷಿಸಿದೆ. ಅದರಲ್ಲಿ ಒಂದು ಭಾಗದಷ್ಟು ಹಣವನ್ನೂ ಖರ್ಚು ಮಾಡಿಲ್ಲ ಏಕೆ? ರಾಜ್ಯಗಳು ಒಂದು ಲಸಿಕೆಗೆ 300 ರೂ.ಗಳನ್ನು ನೀಡಿ ಯಾಕೆ ಕೊಂಡುಕೊಳ್ಳಬೇಕು? ಕರ್ನಾಟಕದಿಂದ ವರ್ಷಕ್ಕೆ 2.5 ಲಕ್ಷ ಕೋಟಿ ರೂ.ಗಳಷ್ಟು ತೆರಿಗೆಯನ್ನು ದೋಚಿಕೊಳ್ಳುವ ಕೇಂದ್ರ ಸರಕಾರ ನಮಗೆ ವಾಪಸ್ಸು ನೀಡುತ್ತಿರುವುದು ಮಾತ್ರ ಕೇವಲ 50ಸಾವಿರ ಕೋಟಿ ರೂ.ಮಾತ್ರ. ರಾಜ್ಯಗಳು ಭಿಕಾರಿಗಳಾಗುತ್ತಿವೆ. ನಮ್ಮ ರಾಜ್ಯದ ಸಂಸದರುಗಳು ಇದೆಲ್ಲದರ ಕುರಿತು ಕೇಂದ್ರ ಸರಕಾರಕ್ಕೆ ಜೋರು ಮಾಡಿ ಕೇಳಬೇಕಲ್ಲವೆ? ಅವರು ಕೇಳುತ್ತಿಲ್ಲ. ಆದುದರಿಂದ ರಾಜ್ಯ ಸರಕಾರವೇ ವಿವಿಧ ಮೂಲಗಳಿಂದ ಲಸಿಕೆ ಖರೀದಿಸಿ ಕೂಡಲೇ ಲಸಿಕೆ ನೀಡಿ ರಾಜ್ಯದ ಜನರನ್ನು ರಕ್ಷಿಸಬೇಕಾಗಿದೆಯೆಂದು ಒತ್ತಾಯಿಸುತ್ತಿದ್ದೇವೆ.
ಬಿಜೆಪಿಯವರು ಮತ್ತವರ ಭಟ್ಟಂಗಿಗಳು ಮಾತನಾಡುವುದಕ್ಕೆ ಮೊದಲು ಯೋಚನೆ ಮಾಡಿ ಮಾತನಾಡಬೇಕು. ಕೇಂದ್ರ ಸರಕಾರವು ಮಾರ್ಚ್ ತಿಂಗಳ ಒಳಗೆ ದೇಶದಲ್ಲಿರುವ 3ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಿ ಮುಗಿಸುವ ಗುರಿ ನಿಗದಿ ಪಡಿಸಿಕೊಂಡಿತ್ತು. ಆದರೆ ಸಾಧ್ಯವಾಗಿದ್ದು ಮಾತ್ರ 1.4 ಕೋಟಿ ಮಾತ್ರ. ಯಾಕೆ ಗುರಿ ಸಾಧಿಸಲಾಗಲಿಲ್ಲ? ಆರೋಗ್ಯ ಕಾರ್ಯಕರ್ತರೆಂದರೆ ವೈದ್ಯರು ಮತ್ತು ಅದರ ಸಂಬಂಧಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು. ಇವರು ಯಾರಾದರು ಲಸಿಕೆ ಹಾಕಿಸಿಕೊಳ್ಳಬೇಡಿ ಎಂದರೆ ಕೇಳುವವರಾ? ಹಾಗಿದ್ದರೆ ಯಾಕೆ ಇವರೆಲ್ಲರಿಗೆ ಲಸಿಕೆ ನೀಡಲಾಗಲಿಲ್ಲ? ಎಂಬುದನ್ನು ವಿವರಿಸಬೇಕು. ಲಸಿಕೆಗಳ 3ನೆ ಹಂತದ ಟ್ರಯಲ್ಗಳ ಕುರಿತು ಬಗ್ಗೆ ಹಲವು ತಜ್ಞರು ಪ್ರಶ್ನೆಗಳನ್ನು ಎತ್ತಿದ್ದರು. ಉದಾಹರಣೆಗೆ ಗಗನ್ ದೀಪ್ ಎಂಬ ಪ್ರಖ್ಯಾತ ತಜ್ಞರು ಹಲವು ಸ್ಪಷ್ಟನೆಗಳನ್ನು ಕೇಳಿದ್ದರು. ಈ ಪ್ರಶ್ನೆಗಳಿಗೆ ಕೇಂದ್ರದ ಆಡಳಿತಗಾರರು ಉತ್ತರಿಸಬೇಕಾಗುತ್ತದೆ. ಲಸಿಕೆಗಳ ಕುರಿತು ಅನುಮಾನಗಳಿದ್ದರೆ ಅವುಗಳನ್ನು ಬಗೆಹರಿಸಲು ಪ್ರಧಾನಿ, ಆರೋಗ್ಯ ಸಚಿವರು, ಸರಕಾರದ ವಿವಿಧ ಹಂತಗಳ ತಜ್ಞರು, ಮುಖಂಡರುಗಳು ಮೊಟ್ಟ ಮೊದಲಿಗೆ ಲಸಿಕೆ ಹಾಕಿಸಿಕೊಂಡು ಏನೂ ಆಗಿಲ್ಲ ನೋಡಿ ಎಂದು ದೇಶದ ಜನರಿಗೆ ತೋರಿಸಿ ಹೇಳಬೇಕಾಗುತ್ತದೆ. ಇದನ್ನೇ ನಾಯಕತ್ವ, ಮುತ್ಸದ್ದಿತನ ಎನ್ನುವುದು. ದೇಶದಲ್ಲಿ ಜನವರಿ 16 ರಿಂದಲೇ ಲಸಿಕೆ ಹಾಕುವ ಕಾರ್ಯಕ್ರಮ ಪ್ರಾರಂಭಿಸಲಾಗಿತ್ತು. ಆದರೆ, ಪ್ರಧಾನಿ ಮತ್ತು ಗೃಹ ಸಚಿವರು ಲಸಿಕೆ ಹಾಕಿಸಿಕೊಂಡಿದ್ದು ಮಾರ್ಚ್ 1ರಂದು. ಆರೋಗ್ಯ ಸಚಿವರು ಹಾಕಿಸಿಕೊಂಡಿದ್ದು ಮಾರ್ಚ್ 2ರಂದು. ಇವರುಗಳೆಲ್ಲ ಯಾಕೆ ಹೀಗೆ ಮಾಡಿದರು? ಇವರುಗಳೆಲ್ಲ ತಮಗೆ 60 ವರ್ಷ ವಯಸ್ಸಾಗಿರಲಿಲ್ಲ ಎಂದು ಹೇಳಿ ಜಾರಿಕೊಳ್ಳಬಹುದು. ಆದರೆ, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ವಯಸ್ಸಿನ ನಿಬರ್ಂಧಗಳಿರಲಿಲ್ಲ. ಕೋವಿಡ್ ವಿರುದ್ಧ ಹೋರಾಟ ಮಾಡುತ್ತಿರುವವರೆಲ್ಲ ಮುಂಚೂಣಿ ಕಾರ್ಯಕರ್ತರೇ ಅಲ್ಲವೆ? ಪ್ರಧಾನಿ ಮುಂತಾದವರು ಲಸಿಕೆಗಳಿಂದ ಜನರ ಮೇಲೆ ಯಾವ ಪರಿಣಾಮವಾಗುತ್ತಿದೆ ಎಂದು ಕಾದು ನೋಡಿ ಹಾಕಿಸಿಕೊಂಡರು ಎಂಬ ಆರೋಪವನ್ನು ಬಹುಪಾಲುಜನ ಮಾಡುತ್ತಿದ್ದಾರೆ. ಜನರು ಮಾಡುತ್ತಿರುವ ಈ ಆರೋಪ ಸುಳ್ಳೆ? ಎಂದು ಪ್ರಶ್ನಿಸಿದ್ದಾರೆ.
'ಪ್ರಧಾನಿ ಮನೆಗೆ ಮಾರಿ ಊರಿಗೆ ಉಪಕಾರಿ': ದೇಶದ ಮಕ್ಕಳಿಗೆ ಲಸಿಕೆ ಇಲ್ಲದಿದ್ದಾಗ ಹೊರದೇಶಗಳಿಗೆ ಕೇವಲ 3 ಡಾಲರ್ಗಳ ಬೆಲೆಗೆ ರಫ್ತು ಮಾಡಲಾಗಿದೆ. ಆದರೆ ನಮ್ಮ ದೇಶದ ಜನರಿಗೆ 1,200 ರೂ.ಗಳ ವರೆಗೆ ಬೆಲೆ ನಿಗದಿ ಪಡಿಸಲಾಗಿದೆ. ಬಡ ದೇಶಗಳಿಗೆ ಹೋಗಲಿ ಇಂಗ್ಲೆಂಡಿಗೂ 5.5 ದಶ ಲಕ್ಷ ವ್ಯಾಕ್ಸಿನ್ಗಳನ್ನು ನಿಯಮ ಬಾಹಿರವಾಗಿ ರಫ್ತು ಮಾಡಲಾಗಿದೆ. ಲಸಿಕೆಗಳನ್ನು ಬೇರೆ ದೇಶಗಳಿಗೆ ಕಳುಹಿಸಿ ಕೊಡುವುದಕ್ಕೋಸ್ಕರವಾಗಿಯೇ ಜನವರಿ 20ನೆ ತಾರೀಖಿನಿಂದ `ಮೈತ್ರಿ' ಎಂಬ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಎಪ್ರಿಲ್ ಮೊದಲ ವಾರದವರೆಗೆ ಸುಮಾರು 85 ದೇಶಗಳಿಗೆ 6.5 ಕೋಟಿ ಲಸಿಕೆಗಳನ್ನು ರಫ್ತು ಮಾಡಲಾಗಿದೆ. ಬೇರೆ ಬಡದೇಶಗಳಿಗೆ ಕಳುಹಿಸಬೇಡಿ ಎಂಬಷ್ಟು ಸಂಕುಚಿತ ಮನಸ್ಸಿನವರಲ್ಲ ನಮ್ಮ ಜನರು. ಅದರಲ್ಲೂ ಕೊರೋನದಂತಹ ಸಾಂಕ್ರಾಮಿಕವನ್ನು ಜಾಗತಿಕ ಸಹಕಾರಗಳ ಮೂಲಕವೇ ನಿರ್ಮೂಲನೆ ಮಾಡಬೇಕು. ಆದರೆ, ಜಗತ್ತಿನ ಬಹುಪಾಲು ದೇಶಗಳೆಲ್ಲ ಮೊದಲು ತಮ್ಮ ದೇಶದ ಜನರಿಗೆ ಲಸಿಕೆ ನೀಡುತ್ತಿವೆ. ಹೆಚ್ಚುವರಿ ಲಸಿಕೆಗಳನ್ನು ತಮ್ಮಲ್ಲೇ ಉಳಿಸಿಕೊಂಡಿವೆ. ಆದರೆ, ಭಾರತ ಮಾತ್ರ ಇಂಗ್ಲೆಂಡಿಗೂ 5.5 ಮಿಲಿಯನ್ ಲಸಿಕೆಗಳನ್ನು ರಫ್ತು ಮಾಡಿದೆ. ನಮ್ಮ ದೇಶದ ಪ್ರಧಾನಿ ಮನೆಗೆ ಮಾರಿ ಊರಿಗೆ ಉಪಕಾರಿ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಅಲ್ಲವೆ?
ಅಮೆರಿಕದಂತಹ ದೇಶವೂ ಒಂದೇ ಒಂದು ಡೋಸ್ ಲಸಿಕೆಯನ್ನು ರಫ್ತು ಮಾಡಲಿಲ್ಲ ಅಲ್ಲವೇ? 2020ರ ಜುಲೈ, ಆಗಸ್ಟ್ ತಿಂಗಳುಗಳಲ್ಲೆ ಜಗತ್ತಿನ ವಿವಿಧ ದೇಶಗಳು ತಮ್ಮ ದೇಶದ ಜನಸಂಖ್ಯೆಗಿಂತ ಹೆಚ್ಚಿನ ಲಸಿಕೆಗಳಿಗೆ ಆದೇಶ ನೀಡಿದ್ದರು. ಉತ್ಪಾದಿಸಿಕೊಡುವಂತೆ ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಕೆನಡ, ಯುರೋಪಿಯನ್ ಒಕ್ಕೂಟ, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯ ಮುಂತಾದ ದೇಶಗಳು ತಮ್ಮ ದೇಶದ ಜನಸಂಖ್ಯೆಗಿಂತ ಎರಡರಿಂದ 5 ಪಟ್ಟು ಹೆಚ್ಚು ಲಸಿಕೆಗಳಿಗಾಗಿ ಆದೇಶ ನೀಡಿದ್ದವು. ಮುಂದುವರೆಯುತ್ತಿರುವ ದೇಶಗಳಾದ ಇಂಡೋನೇಶಿಯಾ, ಬ್ರೆಜಿಲ್, ಆಫ್ರಿಕಾದ ಒಕ್ಕೂಟದ ದೇಶಗಳೂ ತನ್ನ ಜನಸಂಖ್ಯೆಯ ಶೇ.40ಕ್ಕೂ ಹೆಚ್ಚು ಲಸಿಕೆಗಳಿಗೆ ಆದೇಶ ನೀಡಿದ್ದವು. ಆದರೆ, ನಮ್ಮ ದೇಶದಲ್ಲಿ ಆಡಳಿತ ನಡೆಸುತ್ತಿರುವವರು 2021ರ ಜನವರಿಯಲ್ಲಿ 1 ಕೋಟಿ 65 ಲಕ್ಷ ಲಸಿಕೆಗಳಿಗೆ ಮಾತ್ರ ಆದೇಶ ನೀಡಿದ್ದರು. ಇಂತಹ ಮತಿಹೀನ ತೀರ್ಮಾನಗಳಿಂದಾಗಿಯೇ ದೇಶದಲ್ಲಿ ಲಕ್ಷಾಂತರ ಜನ ಮರಣ ಹೊಂದುತ್ತಿದ್ದಾರೆ. ಮೋದಿಯವರ ಇಂತಹ ಭೀಕರ ತಪ್ಪುಗಳನ್ನು ಸಮರ್ಥನೆ ಮಾಡುವುದಕ್ಕಾಗಿಯೇ ಈಗ ಅವರ ಪಟಾಲಂ ಜನರನ್ನು, ವಿರೋಧ ಪಕ್ಷಗಳನ್ನು ನಿಂದಿಸುವ ಪ್ರಾಪಗಾಂಡ ಪ್ರಾರಂಭಿಸಿದೆ ಇಂತಹ ನಿರ್ಲಜ್ಜ ರಾಜಕಾರಣವನ್ನು ಮಾಡುತ್ತಿರುವವರನ್ನು ಗೊಬೆಲ್ಸ್ ಪರಂಪರೆಯವರು ಎನ್ನದೆ ಬೇರೆ ದಾರಿ ಇದೆಯೇ.
ಬಿಜೆಪಿಯವರು ಜನರು ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ ಎಂದು ಜನರ ಮೇಲೆ ಆರೋಪ ಮಾಡುತ್ತಾರಲ್ಲ. ಆ ಅವಧಿಯಲ್ಲಿ ಮಾರ್ಚ್ 7ನೆ ತಾರೀಖಿನಿಂದ ಎಪ್ರಿಲ್ 25ರವರೆಗೆ ಪ್ರತಿದಿನ 25 ಲ�







