ಬಿಜೆಪಿ ನಾಯಕರ ಟ್ವೀಟ್ ಗಳಿಗೆ ʼತಿರುಚಲ್ಪಟ್ಟ ಸುದ್ದಿʼ ಲೇಬಲ್: ಟ್ವಿಟರ್ ಕಚೇರಿಗೆ ದಿಲ್ಲಿ ಪೊಲೀಸ್ ದೌಡು

Photo: ANI
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷವು ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ಮಾನಹರಣ ಮಾಡುವ ಸಲುವಾಗಿ ಟೂಲ್ ಕಿಟ್ ರಚಿಸಿದೆ ಎಂಬ ಸುದ್ದಿಯನ್ನು ಪೋಸ್ಟ್ ಮಾಡಿದ್ದ ಟ್ವೀಟ್ ಗಳಿಗೆ ಟ್ವಿಟರ್ ʼತಿರುಚಲ್ಪಟ್ಟ ಸುದ್ದಿ ಲೇಬಲ್ʼ ಲಗತ್ತಿಸಿತ್ತು. ಈ ಕುರಿತಾದಂತೆ ಟ್ವಿಟರ್ ಗೆ ದಿಲ್ಲಿ ಪೊಲೀಸರು ನೋಟಿಸ್ ನೀಡಿದ್ದು, ಇದೀಗ ಟ್ವಿಟರ್ ಕಚೇರಿಗೆ ದಿಲ್ಲಿ ಪೊಲೀಸರು ದೌಡಾಯಿಸಿದ್ದಾರೆಂದು ndtv.com ವರದಿ ಮಾಡಿದೆ.
ಗುರುಗ್ರಾಮ ಹಾಗೂ ಲಾಡೊ ಸರಾಯಿಯಲ್ಲಿರುವ ಟ್ವಿಟರ್ ಕಚೇರಿಗಳಿಗೆ ಪೊಲೀಸರು ತೆರಳಿದ್ದಾರೆ ಎಂದು ತಿಳಿದು ಬಂದಿದೆ.
"ದಿಲ್ಲಿ ಪೊಲೀಸರು ದೂರಿನ ಕುರಿತಾದಂತೆ ವಿಚಾರಣೆ ನಡೆಸುತ್ತಿದ್ದಾರೆ. ಬಿಜೆಪಿ ಮುಖಂಡ ಸಂಬಿತ್ ಪಾತ್ರ ಅವರ ಟ್ವೀಟ್ ಅನ್ನು ʼತಿರುಚಲ್ಪಟ್ಟ ಸುದ್ದಿʼ ಎಂದು ವರ್ಗೀಕರಿಸಿರುವುದರ ಕುರಿತು ಟ್ವಿಟರ್ ನಿಂದ ಸ್ಪಷ್ಟನೆ ಕೋರಲಾಗಿದೆ. ಈ ರೀತಿ ವರ್ಗೀಕರಿಸಿರುವುದರ ಹಿನ್ನೆಲೆ ಏನೆಂದು ನಮಗೆ ತಿಳಿದಿಲ್ಲ. ಈ ಮಾಹಿತಿಯ ಕುರಿತು ವಿಚಾರಣೆ ನಡೆಸುತ್ತಿದ್ದೇವೆ. ವಿಚಾರಣೆ ನಡೆಸುತ್ತಿರುವ ವಿಚಾರಣೆ ತಂಡಕ್ಕೆ ಸತ್ಯವನ್ನು ಅರಿಯಬೇಕಾಗಿದೆ. ಈ ಕುರಿತು ಟ್ವಿಟರ್ ಸ್ಪಷ್ಟಪಡಿಸಬೇಕು" ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.