ಸೈನಾ ನೆಹ್ವಾಲ್,ಕಿಡಂಬಿ ಶ್ರೀಕಾಂತ್ ಟೋಕಿಯೊ ಒಲಿಂಪಿಕ್ಸ್ ಕನಸು ಭಗ್ನ
ಹೈದರಾಬಾದ್: ಟೋಕಿಯೊ ಒಲಿಂಪಿಕ್ಸ್ನ ಭಾರತೀಯ ತಂಡದಲ್ಲಿ ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್ ಭಾಗವಹಿಸುವುದಿಲ್ಲ ಎನ್ನುವುದು ಈಗ ಅಧಿಕೃತವಾಗಿದೆ.. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯುಎಫ್) ಅರ್ಹತಾ ಅವಧಿಯು ಜೂನ್ 15 ರಂದು ಅಧಿಕೃತವಾಗಿ ಮುಕ್ತಾಯಗೊಳ್ಳುತ್ತದೆ ಹಾಗೂ ಆ ಗಡುವಿನ ಮೊದಲು ಯಾವುದೇ ಅರ್ಹತಾ ಟೂರ್ನಿಗಳು ಇರುವುದಿಲ್ಲ ಎಂದು ಅದು ಹೇಳಿದೆ.
ಪರಿಷ್ಕೃತ ಟೋಕಿಯೊ 2020 ಅರ್ಹತಾ ವ್ಯವಸ್ಥೆಯ ಪ್ರಕಾರ ಅರ್ಹತಾ ಅವಧಿ 15 ಜೂನ್ 2021 ರಂದು ಅಧಿಕೃತವಾಗಿ ಮುಚ್ಚಲ್ಪಡುತ್ತದೆಯಾದರೂ ಪ್ರಸ್ತುತ ಟೋಕಿಯೊ ರ್ಯಾಕಿಂಗ್ ಗಳ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಒಲಿಂಪಿಕ್ಸ್ ಗೆ ಈಗಿನ ರ್ಯಾಂಕಿಂಗ್ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಶ್ರೇಯಾಂಕಗಳೊಂದಿಗೆ ಶೀಘ್ರದಲ್ಲೇ ಆಮಂತ್ರಣಗಳನ್ನು ಕಳುಹಿಸಲಾಗುವುದು ”ಎಂದು ಬಿಡಬ್ಲ್ಯೂಎಫ್ ಬಿಡುಗಡೆ ತಿಳಿಸಿದೆ.
ಜೂನ್ 15 ರ ಮೊದಲು ಪಿವಿ ಸಿಂಧು ಮಾತ್ರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಭಾರತದಿಂದ ಒಲಿಂಪಿಕ್ಸ್ ಗೆ ಅರ್ಹತೆ ಪಡೆದರೆ, ಸಾಯಿ ಪ್ರಣೀತ್ ಪುರುಷರ ಸಿಂಗಲ್ಸ್ನಲ್ಲಿ ಅರ್ಹತೆ ಪಡೆದ ಏಕೈಕ ಭಾರತೀಯನಾಗಿರುತ್ತಾರೆ.
ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ತಮ್ಮ ಮೊದಲ ಒಲಿಂಪಿಕ್ಸ್ನಲ್ಲಿ ಆಡಲಿದ್ದಾರೆ. ಒಟ್ಟಾರೆಯಾಗಿ, ಕೇವಲ ನಾಲ್ಕು ಭಾರತೀಯ ಶಟ್ಲರ್ಗಳು ಮಾತ್ರ ಪ್ರಧಾನ ಟೂರ್ನಿಗೆ ಅರ್ಹತೆ ಪಡೆದಿದ್ದಾರೆ.