'ಎಂಟು ಸಾವಿರ ಶಿಕ್ಷಕರಿಗೆ ಹಿಂಬಡ್ತಿ' ಸುದ್ದಿ: ಯಾವುದೇ ಶಿಕ್ಷಕರು ಆತಂಕ ಪಡಬೇಕಿಲ್ಲ ಎಂದು ಸುರೇಶ್ ಕುಮಾರ್ ಅಭಯ

ಬೆಂಗಳೂರು, ಮೇ 29: ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಎಂಟು ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ಹಿಂಭಡ್ತಿಯೆಂಬ ಸುದ್ದಿಗಳ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶವನ್ನು ಇನ್ನಷ್ಟು ವಿಸ್ತೃತವಾಗಿ ಗಮನಿಸಬೇಕಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ಈ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ನ್ಯಾಯಾಲಯದ ತೀರ್ಪನ್ನು ಇನ್ನಷ್ಟು ತಾಂತ್ರಿಕವಾಗಿ ಆಲೋಚಿಸಬೇಕಾದ ಅನಿವಾರ್ಯತೆ ಇದ್ದು ಈ ಹಂತದಲ್ಲಿ ಯಾವುದೇ ಶಿಕ್ಷಕರೂ ಅನಗತ್ಯ ಗೊಂದಲಕ್ಕೀಡಾಗುವುದು ಬೇಡ ಎಂದಿದ್ದಾರೆ.
ಪ್ರೌಢಶಾಲಾ ಶಿಕ್ಷಕರ ವೃಂದ ನಿಯಮಗಳಂತೆ ನೇರ ನೇಮಕಾತಿಯ ಜೊತೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಭಡ್ತಿಗೆ ನಿಗದಿ ಇರುವ ಅನುಪಾತದಂತೆ ಭಡ್ತಿ ಮುಖಾಂತರದಲ್ಲಿಯೂ ಪ್ರೌಢಶಾಲಾ ಶಿಕ್ಷಕ ಹುದ್ದೆಗಳನ್ನು ತುಂಬಲು ಅವಕಾಶವಿದೆ. ಈವರೆವಿಗೂ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಎಂದರೆ ಏಕರೂಪದಲ್ಲಿ ಇದ್ದ 1 ರಿಂದ 7ನೆ ತರಗತಿ ಶಿಕ್ಷಕ ವೃಂದವಾಗಿತ್ತು. ರಾಷ್ಟ್ರ ವ್ಯಾಪಿ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕ ಹುದ್ದೆಗೆ ಇರಬೇಕಾದ ವಿದ್ಯಾರ್ಹತೆಯನ್ನು ಶಾಸನಬದ್ಧ ಸಂಸ್ಥೆಯಾದ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ತು (ಎನ್ಸಿಟಿಇ) ನಿಯಮಿಸುವ ಅಧಿಕಾರವನ್ನು ಹೊಂದಿದ್ದು ಸದರಿ ನಿಯಮಗಳಂತೆ ಮತ್ತು ಶೈಕ್ಷಣಿಕ ಗುಣಮಟ್ಟದ ಹಿತದೃಷ್ಟಿಯಿಂದ 6ರಿಂದ 8ನೆ ತರಗತಿಗಳಿಗೆ ಪ್ರತ್ಯೇಕವಾದ ಪದವಿ ವಿದ್ಯಾರ್ಹತೆಯುಳ್ಳ ಶಿಕ್ಷಕ ವೃಂದವನ್ನು ಹೊಂದಬೇಕಾಗಿರುತ್ತದೆ.
ಅದರಂತೆ 2017ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ನಿಯಮಗಳನ್ನು ಪರಿಷ್ಕರಿಸಿ ಪ್ರಾಥಮಿಕ ಶಿಕ್ಷಕ 1 ರಿಂದ 7ನೆ ತರಗತಿಯ ಒಟ್ಟಾರೆ 18,8000 ವೃಂದ ಬಲದಲ್ಲಿಯೇ ಕಡಿತಗೊಳಿಸಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಅಗತ್ಯವಿರುವಂತೆ ಒಟ್ಟಾರೆ 52 ಸಾವಿರ ಬಲದ 6 ರಿಂದ 8ನೆ ತರಗತಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ವೃಂದವನ್ನು ಅಸ್ತಿತ್ವಕ್ಕೆ ತರಲಾಗಿದೆ. ಆದರೆ, ಮೂಲ ವೃಂದದಲ್ಲಿಯೂ ಪದವೀಧರ ವಿದ್ಯಾರ್ಹತೆಯುಳ್ಳ ಶಿಕ್ಷಕರು ಇದ್ದು ಸದರಿಯವರಿಗೆ 6ರಿಂದ 8ನೆ ತರಗತಿ ವೃಂದಕ್ಕೆ ಪರೀಕ್ಷೆ ಮುಖಾಂತರದಲ್ಲಿ ಸೇರ್ಪಡೆಗೊಳ್ಳಲು ಸದರಿ ನಿಯಮಗಳಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ.
ಅದೇ ರೀತಿಯಲ್ಲಿಯೇ ಪ್ರೌಢಶಾಲಾ ಶಿಕ್ಷಕ ವೃಂದಕ್ಕೆ ಇರುವ ಭಡ್ತಿ ನಿಯಮಗಳಿಗೂ 1 ರಿಂದ 5ನೆ ತರಗತಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದ ಮತ್ತು 6 ರಿಂದ 8ನೆ ತರಗತಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದವರಿಗೆ ಆಯಾ ವೃಂದ ಬಲದ ಆಧಾರದಲ್ಲಿ ಭಡ್ತಿ ಪ್ರಮಾಣವನ್ನು ನಿರ್ಧರಿಸಿ ನಿಯಮಿಸಬೇಕಾಗಿದೆ. ಈ ಪ್ರಕ್ರಿಯೆ ಜಾರಿಯಲ್ಲಿರುವ ಸಂದರ್ಭದಲ್ಲಿ ಮೇಲಿನ ನ್ಯಾಯಾಲಯ ಆದೇಶ ಹೊರಬಿದ್ದಿದೆ.
ಸದರಿ ನ್ಯಾಯಾಲಯ ಆದೇಶದಲ್ಲಿಯೂ ವೃಂದ ನಿಯಮಗಳಿಗೆ ತಿದ್ದುಪಡಿ ತಂದು 1ರಿಂದ 5ನೆ ತರಗತಿ ವೃಂದದಲ್ಲಿ ಅರ್ಹರಿಗೆ ಭಡ್ತಿಗೆ ಅವಕಾಶ ನೀಡಬಹುದಾಗಿದೆ ಎಂಬುದಾಗಿ ಇದೆ. ಜಾರಿಯಲ್ಲಿರುವ ವೃಂದ ನಿಯಮಗಳಲ್ಲಿ 1ರಿಂದ 5 ಮತ್ತು 6ರಿಂದ 8ನೇ ಎಂಬುದನ್ನು ಪ್ರಸ್ತಾಪಿಸಿರುವುದಿಲ್ಲವಾದ್ದರಿಂದ 6ರಿಂದ 8ನೇ ವೃಂದದಿಂದ ಭಡ್ತಿ ಸೂಕ್ತ ಎಂಬುದಾಗಿ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಹಾಗಾಗಿ 1ರಿಂದ 5ನೆ ತರಗತಿ ವೃಂದ ಭಡ್ತಿಗಳ ಬಗ್ಗೆ ಪ್ರಶ್ನೆ ಎತ್ತಿದೆ ಎಂದು ವಿವರಣೆ ನೀಡಿದ್ದಾರೆ.
ಇದು ತಾಂತ್ರಿಕವಾದ ವಿಷಯವಾಗಿದ್ದು 1967ರಿಂದಲೂ ವೃಂದ ನಿಯಮಗಳು ಜಾರಿ ಇದ್ದು 2017ರ ವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರು ಎಂದರೆ ಪೂರ್ವದಲ್ಲಿ 1ರಿಂದ 7ನೆ ತರಗತಿ ಶಿಕ್ಷಕ ವೃಂದ ಮತ್ತು ಇದೀಗ 1ರಿಂದ 5ನೆ ತರಗತಿ ಶಿಕ್ಷಕ ವೃಂದ ಎಂದು ನಾಮಾಂತನಗೊಂಡ ವೃಂದವೇ ಆಗಿದೆ. ಪ್ರಯುಕ್ತ, 2017ರ ನಂತರದಲ್ಲಿ ಈ ತಾಂತ್ರಿಕ ಸಮಸ್ಯೆ ಉಂಟಾಗಿದ್ದು ಎಲ್ಲ ಕಾಲದ ಭಡ್ತಿಗಳಿಗೆ ಇದು ಅನ್ವಯವಾಗುವುದಿಲ್ಲ ಎಂಬುದನ್ನು ಗಮನಿಸಬೇಕಾಗಿದೆ.
ಈ ಬಗ್ಗೆ ತುರ್ತಾಗಿ ಪರಿಶೀಲಿಸಿ ಕಾನೂನಾತ್ಮಕವಾದ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ನ್ಯಾಯಾಲಯದಲ್ಲಿಯೂ ಅಪೀಲು ಸಲ್ಲಿಸಿ ಈ ವಿಷಯವನ್ನು ಬಗೆಹರಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು. ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಶೀರ್ಷಿಕೆಗಳಿಂದ ಯಾವ ಶಿಕ್ಷಕರೂ ಆತಂಕ ಪಡಬೇಕಾಗಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.







