ಪ್ರಥಮ ಬಾರಿಗೆ ಕನ್ನಡದಲ್ಲಿ ತೀರ್ಪನ್ನು ಬರೆದಿದ್ದ ನ್ಯಾ.ಕೆ.ವಿ. ವಾಸುದೇವ ಮೂರ್ತಿ ನಿಧನ

ಬೆಂಗಳೂರು, ಮೇ 29: ನ್ಯಾಯಾಂಗ ವ್ಯವಸ್ಥೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕನ್ನಡದಲ್ಲಿ ತೀರ್ಪನ್ನು ಬರೆಯುವ ಜತೆಗೆ ನ್ಯಾಯಾಲಯದಲ್ಲಿ ಕನ್ನಡ ಅನುಷ್ಠಾನಕ್ಕೆ ಶ್ರಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಕೆ.ವಿ. ವಾಸುದೇವ ಮೂರ್ತಿ (83) ಅವರು ಶನಿವಾರ ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ವಾಸುದೇವ ಮೂರ್ತಿ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಹನುಮಂತನಗರದಲ್ಲಿ ಅವರು ವಾಸವಾಗಿದ್ದರು.
ವಾಸುದೇವ ಮೂರ್ತಿ ಅವರು ಪತ್ನಿಯನ್ನು ಅಗಲಿದ್ದಾರೆ. ಸಂಜೆ 6.30ಕ್ಕೆ ಚಾಮರಾಜಪೇಟೆಯ ಟಿಆರ್ ಮಿಲ್ ಚಿತಾಗಾರದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿದೆ.
1971ರಲ್ಲಿ ನ್ಯಾಯಾಧೀಶರಾಗಿ ನೇಮಕವಾದ ಅವರು, ನ್ಯಾಯಾಂಗ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕನ್ನಡದಲ್ಲಿ ತೀರ್ಪನ್ನು ಬರೆದರು. ಕರ್ನಾಟಕ ಕಾನೂನು ಮಂಡಳಿಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಲಕ್ಷಾಂತರ ಪ್ರಕರಣಗಳನ್ನು ಜನತಾ ನ್ಯಾಯಾಲಯದ ಮೂಲಕ ವಿಚಾರಣೆ ನಡೆಸಲು ಆದೇಶಿಸಿ, 200 ಕೋಟಿ ರೂ.ಗೂ ಅಧಿಕ ಪರಿಹಾರದ ಹಣವನ್ನು ಜನರಿಗೆ ಕೊಡಿಸಿದ್ದರು.
1 ರೂ. ವೇತನ ಪಡೆಯುತ್ತಿದ್ದ ನ್ಯಾಯಮೂರ್ತಿ: ಹೊಸದಿಲ್ಲಿಯ ರಾಷ್ಟ್ರೀಯ ಪರಿಸರ ಮೇಲ್ಮನವಿ ಪ್ರಾಧಿಕಾರದ ರಿಜಿಸ್ಟ್ರಾರ್ ಆಗಿದ್ದ ಅವರು, ಬಳಿಕ ಕರ್ನಾಟಕ ಲೋಕಾಯುಕ್ತ ಇಲಾಖೆಯಲ್ಲಿ ವಿಜಿಲೆನ್ಸ್ ನಿರ್ದೇಶಕರಾಗಿದ್ದರು. ತಿಂಗಳಿಗೆ ಕೇವಲ 1 ರೂ. ವೇತನ ಪಡೆಯುತ್ತಿದ್ದರು. ನಾಲ್ಕೂವರೆ ವರ್ಷ ಕಾರ್ಯನಿರ್ವಹಿಸಿದ ಅವರು, ಆ ವೇಳೆ ಮಹಾನಗರ ಪಾಲಿಕೆಯ ಅನೇಕ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದರು.







