ಕಲಾವಿದ ಮಂಗಲ್ಪಾಡಿ ಮಹಾಬಲ ಶೆಟ್ಟಿ ನಿಧನ

ಉಡುಪಿ, ಮೇ 30: ತೆಂಕುತಿಟ್ಟಿನ ಹಿರಿಯ ವೇಷಧಾರಿ ಮಂಗಲ್ಪಾಡಿ ಮಹಾಬಲ ಶೆಟ್ಟಿ (76) ರವಿವಾರ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಕಾಸರಗೋಡಿನ ಮಂಗಲ್ಪಾಡಿ ಯವರಾದ ಶೆಟ್ಟಿ, ಯಕ್ಷಗಾನ ಕೃಷಿಯೊಂದಿಗೆ ಕೃಷಿಯಲ್ಲು ಆಸಕ್ತರಾಗಿದ್ದರು.
ಭಗವತಿ, ಮಲ್ಲ, ಮಧೂರು, ಬೆಳ್ಮಣ್ಣು, ಕಟೀಲು, ಸುಂಕದಕಟ್ಟೆ ಮೇಳಗಳಲ್ಲಿ ಮೂರುವರೆ ದಶಕಗಳ ಕಲಾಸೇವೆ ಮಾಡಿದ್ದ ಮಹಾಬಲ ಶೆಟ್ಟಿ, ಕನ್ನಡ -ತುಳು ಎರಡೂ ಭಾಷೆಗಳಲ್ಲಿ ಹಾಗೇ ಪೌರಾಣಿಕ -ಐತಿಹಾಸಿಕ ಪ್ರಸಂಗ ಗಳಲ್ಲಿ ಸಮರ್ಥವಾಗಿ ಪಾತ್ರ ನಿರ್ವಹಿಸುತ್ತಿದ್ದರು. ಮಂಗಲ್ಪಾಡಿ ಯಕ್ಷಭಾರತಿ ಸಂಘಟನೆ ಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಉಡುಪಿಯ ಯಕ್ಷಗಾನ ಕಲಾರಂಗ ಇವರಿಗೆ ಕೆ.ವಿಶ್ವಜ್ಞ ಶೆಟ್ಟಿ ನೆನಪಿನ ಪ್ರಶಸ್ತಿ ನೀಡಿ ಗೌರವಿಸಿತ್ತು. ಪಟ್ಲ ಫೌಂಡೇಶನ್, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಬಂಜಾರ ಪ್ರಕಾಶ್ ಶೆಟ್ಟಿ ಪ್ರತಿಷ್ಠಾನದ ಪ್ರಶಸ್ತಿ ಸೇರಿದಂತೆ ಹಲವರು ಪ್ರಶಸ್ತಿಗಳಿಗೆ ಭಾಜನ ರಾಗಿದ್ದರು. ಮಹಾಬಲ ಶೆಟ್ಟಿ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.





