ಪಶ್ಚಿಮ ಬಂಗಾಳ ರಾಜ್ಯ ಕಾರ್ಯದರ್ಶಿ ಬಂದೋಪಾಧ್ಯಾಯ ವಿರುದ್ಧ ಕ್ರಮ ಕೈಗೊಳ್ಳಲಿರುವ ಕೇಂದ್ರ ಸರಕಾರ

photo: twitter
ಪಶ್ಚಿಮ ಬಂಗಾಳ ರಾಜ್ಯ ಕಾರ್ಯದರ್ಶಿ ಆಲಾಪನ್ ಬಂದೋಪಾಧ್ಯಾಯರನ್ನು ಹೊಸದಿಲ್ಲಿಯ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಇಲಾಖೆ ಕಚೇರಿಗೆ ಇಂದು ಹಾಜರಾಗಲು ಕೇಂದ್ರ ಸರಕಾರ ಸೂಚಿಸಿತ್ತು. ಆದರೆ ಅವರು ಹಾಜರಾಗಲು ವಿಫಲರಾಗಿರುವ ಕಾರಣ ಅವರ ವಿರುದ್ಧ ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು hindustantimes ವರದಿ ಮಾಡಿದೆ.
ಬಂದೋಪಾಧ್ಯಾಯರನ್ನು ಶುಕ್ರವಾರ ಕೇಂದ್ರ ಸರಕಾರವು ವರ್ಗಾವಣೆ ಮಾಡಿತ್ತು. ಯಾಸ್ ಚಂಡಮಾರುತದ ಪರಿಣಾಮಗಳ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಬಂಗಾಳಕ್ಕೆ ಆಗಮಿಸಿದ್ದು, ಈ ವೇಳೆ ಮಮತಾ ಬ್ಯಾನರ್ಜಿ ಆಗಮಿಸಿರಲಿಲ್ಲ. ಪ್ರಧಾನಿಗೆ ವರದಿ ಸಲ್ಲಿಸಲು ಆಲಾಪನ್ ರೊಂದಿಗೆ ಮಮತಾ ಆಗಮಿಸಿದ್ದು, ಪ್ರಧಾನಿಯನ್ನು 30 ನಿಮಿಷ ಕಾಯಿಸಲಾಗಿತ್ತು ಎಂದು ಕೇಂದ್ರ ಹೇಳಿಕೆಯಲ್ಲಿ ತಿಳಿಸಿತ್ತು.
ಪಶ್ಚಿಮ ಬಂಗಾಳ ಸರಕಾರದೊಂದಿಗೆ ಯಾವುದೇ ಪೂರ್ವ ಸಮಾಲೋಚನೆ ನಡೆಸದೇ, ಅಧಿಕಾರಿಗೆ ಯಾವುದೇ ಆಯ್ಕೆಯನ್ನು ನೀಡದೇ, ಭಾರತೀಯ ಆಡಳಿತ ಸೇವೆ ನಿಯಮಗಳು, 1954 ಮತ್ತು ಇತರ ಅನ್ವಯವಾಗುವ ಯಾವುದೇ ಪೂರ್ವ ಷರತ್ತುಗಳನ್ನು ಇದು ಪಾಲಿಸಿಲ್ಲ. ಇದೊಂದು ಏಕಪಕ್ಷೀಯ ಆದೇಶವಾಗಿದ್ದು, ಕಾನೂನುಬದ್ಧವಾಗಿ ಸ್ವೀಕಾರಾರ್ಹವಲ್ಲ. ಇದೊಂದು ಅಸಾಂವಿಧಾನಿಕ ನಿರ್ಧಾರವಾಗಿದೆ ಎಂದು ಮಮತಾ ಬ್ಯಾನರ್ಜಿ ಇಂದು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.