ಲಸಿಕಾ ಕೇಂದ್ರಗಳಿಗೆ ನೋಡೆಲ್ ಅಧಿಕಾರಿಗಳ ನೇಮಕ
ಉಡುಪಿ, ಮೇ 31: ಉಡುಪಿ ತಾಲೂಕಿನ ವ್ಯಾಪ್ತಿಯಲ್ಲಿ ಲಸಿಕಾಕರಣಕ್ಕಾಗಿ ಏರ್ಪಡಿಸಲಾದ ಲಸಿಕಾ ಕೇಂದ್ರಗಳಲ್ಲಿ ಪ್ರತಿದಿನ ಕೊರೋನಾ ಮುಂಚೂಣಿ ಕಾರ್ಯಕರ್ತರು, ಆದ್ಯತಾ ಗುಂಪಿನವರು ಹಾಗೂ 45 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಲಸಿಕಾ ಡೋಸ್ಗಳನ್ನು ಪಡೆಯುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಹಾಗೂ ಲಸಿಕಾಕರಣಕ್ಕೆ ನೋಂದಣಿಯಾಗದೇ ಇರುವ ವ್ಯಕ್ತಿಗಳು ಬಂದು ಗೊಂದಲದ ವಾತಾವರಣ ಸೃಷ್ಟಿಸುತ್ತಿರುವುದು ಕಂಡುಬಂದಿದೆ.
ಆದುದರಿಂದ ಈ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ಲಸಿಕಾ ವಿತರಣೆ ನಡೆಯಲು ಸಾಧ್ಯವಾಗುವಂತೆ, ಸಾರ್ವಜನಿಕ ಲಸಿಕಾ ಕೇಂದ್ರ ದಲ್ಲಿ ಗುಂಪು ಗುಂಪಾಗಿ ಸೇರಿ ಗೊಂದಲ ಉಂಟಾಗುತ್ತಿರುವುದರಿಂದ ವ್ಯವಸ್ಥಿತವಾಗಿ ಲಸಿಕಾಕರಣ ನಡೆಸುವ ಸಲುವಾಗಿ ಹಾಗೂ ಸಾರ್ವಜನಿಕರಿಗೆ ಮಾಹಿತಿಗಳನ್ನು ಒದಗಿಸುವ ಸಲುವಾಗಿ ಈ ಕೆಳಕಂಡ ಲಸಿಕಾ ಕೇಂದ್ರಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.
ಉಡುಪಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಲಸಿಕಾ ಕೇಂದ್ರಕ್ಕೆ ಜಿಲ್ಲಾ ಭೂ ನ್ಯಾಯ ಮಂಡಳಿಯ ವಿಶೇಷ ಆಯುಕ್ತ ರವಿಕುಮಾರ್ (ಮೊ.ನಂ: 9480124382), ಮಣಿಪಾಲದ ಮಾಧವ ಕೃಪಾ ಶಾಲೆಯ ಲಸಿಕಾ ಕೇಂದ್ರಕ್ಕೆ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಸೀತಾರಾಮ ಶೆಟ್ಟಿ (ಮೊ: 9448623952), ಬ್ರಹ್ಮಗಿರಿಯ ಸೈಂಟ್ ಸಿಸಿಲೀಸ್ ಶಾಲೆಯ ಲಸಿಕಾ ಕೇಂದ್ರಕ್ಕೆ ಓರಿಯೆಂಟಲ್ ಇನ್ಸುರೆನ್ಸ್ ಕಂಪೆನಿ ಮ್ಯಾನೇಜರ್ ಗೋಪಿಕೃಷ್ಣ (ಮೊ: 9481902285) ಹಾಗೂ ನಗರದ ಡಾ.ಬಿ.ಆರ್. ಶೆಟ್ಟಿ- ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಲಸಿಕಾ ಕೇಂದ್ರಕ್ಕೆ ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಂಜು (ಮೊ:8277734618) ಇವರನ್ನು ನೇಮಕ ಮಾಡಲಾ ಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.







