ರಾಜಕೀಯದ ಕುರ್ಚಿಗಾಗಿ ಲಾಕ್ ಡೌನ್ ದುರುಪಯೋಗ ಮಾಡಬಾರದು: ಬಿಜೆಪಿ ಶಾಸಕ ಯತ್ನಾಳ್
"ಮುಖ್ಯಮಂತ್ರಿಗಳ ಸಂಪೂರ್ಣ ಕುಟುಂಬವೇ ಲೂಟಿಗೆ ನಿಂತಿದೆ"

ವಿಜಯಪುರ: ಜೂ. 15ರೊಳಗೆ ಒಂದು ಸಿಎಂ ಬದಲಾಗುತ್ತಾರೆ. ಇಲ್ಲದಿದ್ದರೆ, ಸಿ.ಪಿ.ಯೋಗೇಶ್ವರ್ ಅವರಿಗೆ ಡಿಸಿಎಂ ಮಾಡಿ ಇಂಧನ ಖಾತೆ ನೀಡಬೇಕಾಗುತ್ತದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಯೋಗೇಶ್ವರ್ ಅವರನ್ನು ತೆಗೆದು ಹಾಕುವ ಅಥವಾ ಉಚ್ಚಾಟನೆ ಮಾಡುವ ಧೈರ್ಯ ಯಡಿಯೂರಪ್ಪನವರಿಗೆ ಇಲ್ಲ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.
ಲಾಕಡೌನ್ ಸಡಿಲಿಕೆ ಮಾಡಲು ಯತ್ನಾಳ್ ಆಗ್ರಹ
ಇದೇ ವೇಳೆ, ಲಾಕ್ ಡೌನ್ ಮುಂದುವರೆಸುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೊರೊನಾ ಈಗ ರಾಜ್ಯದಲ್ಲಿ ನಿಯಂತ್ರಣಕ್ಕೆ ಬರುತ್ತಿದೆ. ಕೊರೋನ ಹಾವಳಿ ಎಲ್ಲೆಲ್ಲಿ ಕಡಿಮೆಯಾಗಿದೆ ಅಲ್ಲಿ ಲಾಕ್ ಡೌನ್ ತೆಗೆಯಬೇಕು. ಉದ್ಯೋಗ ಸೃಷ್ಟಿ ಆಗುವಂತೆ ಸಹಕಾರವನ್ನು ರಾಜ್ಯ ಸರಕಾರ ಮಾಡಬೇಕು. ರಾಜಕೀಯ ಕುರ್ಚಿ ಉಳಿಸುವಾಗ ಲಾಕ್ ಡೌನ್ ದುರುಪಯೋಗ ಆಗಬಾರದು ಎಂದು ಯತ್ನಾಳ್ ಹೇಳಿದರು.
ಲಾಕಡೌನ್ ಮುಂದೆವರೆಸುವದು ಬೇಡಾ ಎನ್ನುವ ಚರ್ಚೆ ಅನವಶ್ಯಕ. ಜೂ. 7 ರೊಳಗೆ ಲಾಕಡೌನ್ ನ್ನು ಹಂತ ಹಂತವಾಗಿ ಕಡಿಮೆ ಮಾಡಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು
"ಜಿಂದಾಲ್ ಗೆ ಭೂಮಿ ನೀಡುವಲ್ಲಿ ಭ್ರಷ್ಟಾಚಾರ"
ಇದೇ ವೇಳೆ, ಜಿಂದಾಲ್ ಗೆ ಸರಕಾರ 3666 ಎಕರೆ ಭೂಮಿಯನ್ನು ನೀಡುತ್ತಿರುವುದರ ಹಿಂದೆ ರೂ. 3500 ಕೋ. ಭ್ರಷ್ಟಾಚಾರವಿದೆ ಎಂದು ಅವರು ಆರೋಪಿಸಿದರು.
ಜಿಂದಾಲ್ ಗೆ ರೂ. 1.25 ಲಕ್ಷ ಕ್ಕೆ ಒಂದು ಎಕರೆ ಭೂಮಿ ನೀಡುತ್ತಾರೆ ಎಂದರೆ ಏನರ್ಥ? ಇಡೀ ದೇಶದ ಯಾವುದೇ ಮೂಲೆಯಲ್ಲಾದರೂ ರೂ. 1.25 ಲಕ್ಷ ಬೆಲೆಗೆ ಭೂಮಿ ಸಿಗುತ್ತಾ ಎಂದು ಪ್ರಶ್ನಿಸಿದರು. ಅದು ಬಂಗಾರದಂಥ ಭೂಮಿ. ಈ ಭೂಮಿ ನೀಡಿರುವುದರ ಹಿಂದೆ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಅವರು ಆರೋಪಿಸಿದರು.
ವಿಜಯೇಂದ್ರ ವಿರುದ್ಧ ಮತ್ತೆ ಗುಡುಗಿದ ಯತ್ನಾಳ್
ತಮ್ಮ ತಂದೆಯ ಸಿಎಂ ಕುರ್ಚಿ ಉಳಿಸಲು ವಿಜಯೇಂದ್ರ ತಮ್ಮ ಚೇಲಾಗಳ ಮೂಲಕ ಮಠಾಧೀಶರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂದು ಮತ್ತೆ ಆರೋಪಿಸಿದರು.
ಲಿಂಗಾಯತ ಮಠಾದೀಶರಿಗೆ ವಿಜಯೇಂದ್ರ ತಮ್ಮ ಚೇಲಾಗಳ ಮೂಲಕ ಆಮಿಷ ಒಡ್ಡುತ್ತಿದ್ದಾರೆ. ಈ ಕುರಿತು ತಾವು ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದೇನೆ. ಯಡಿಯೂರಪ್ಪ ಅವರ ಸ್ಥಾನಕ್ಕೆ ಕಂಟಕ ಎದುರಾಗಿದೆ. ನೀವು ಕೇಂದ್ರ ಸರಕಾರಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಾಯಿಗೆ ಬಂದಂಗೆ ಬಯ್ಯಿರಿ ಎಂದು ವಿಜಯೇಂದ್ರ ವ್ಯವಸ್ಥಿತ ತಂತ್ರ ಹಣೆದಿದ್ದಾನೆ ಎಂದು ಆರೋಪಿಸಿದರು.
ಈಗಾಗಲೇ ಹಲವರು ಬೇಟಿಯಾಗುವ ಕಾರ್ಯಕ್ರಮ ಆರಂಭಿಸಿದ್ದಾರೆ. ನಾನು ಮಠಾದೀಶರಿಗೆ ಸಾಮಾಜಿಕ ಜಾಲತಾಣದ ಮೂಲಕ ವಿನಂತಿ ಮಾಡಿಕೊಂಡಿದ್ದೇನೆ. ಯಡಿಯೂರಪ್ಪನವರ ಕುಟುಂಬದಿಂದ ನಮ್ಮ ಲಿಂಗಾಯತರ ಮಾನ ಮರ್ಯಾದೆ ಹಾಳಾಗಿದೆ. ವೀರಶೈವ ಲಿಂಗಾಯತರಲ್ಲಿ ಉತ್ತಮ ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ನಿಜಲಿಂಗಪ್ಪ, ಜೆ. ಎಚ್. ಪಟೇಲ್, ವಿರೇಂದ್ರ ಪಾಟೀಲರಂತೆ ಇವರೂ ಉತ್ತಮ ಮುಖ್ಯಮಂತ್ರಿಗಳಾಗಿದ್ದರೆ ನಾವು ಬೆಂಬಲಿಸುತ್ತಿದ್ದೆವು. ಆದರೆ ಇಂದು ಇಡೀ ಸಿಎಂ ಕುಟುಂಬ ಲೂಟಿಗೆ ನಿಂತಿದೆ ಎಂದು ಆರೋಪಿಸಿದರು.
ತನಗೆ ಆರೆಸ್ಸೆಸ್ ನಿಂದ ಯಾವುದೇ ಬುಲಾವ್ ಬಂದಿಲ್ಲ, ನನಗೆ ಯಾವುದೇ ಕರೆಗಳು ಬಂದಿಲ್ಲ. ಆ ರೀತಿಯ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.







