ಕೊರೋನ ಸೋಂಕು ನಿವಾರಕ ಏರ್ ಸ್ಪ್ರೇ ಯೋಜನೆ ಸ್ಥಗಿತ
ಬೆಂಗಳೂರು, ಮೇ 31: ವಿಮಾನದ ಮೂಲಕ ಗಾಳಿಯಲ್ಲಿ ಸೋಂಕು ನಿವಾರಕದ ಜೈವಿಕ ದ್ರಾವಣ ಸಿಂಪಡಿಸಿ ಕೊರೋನ ಸೋಂಕು ತಡೆಗಟ್ಟಲು ಮುಂದಾಗಿದ್ದ ಏರ್ ಸ್ಪ್ರೇ ಯೋಜನೆ ಮೇ 29ರಂದು ಚಾಲನೆಗೊಂಡು ಮೇ 31ರಂದೇ ಸ್ಥಗಿತಗೊಂಡಿದೆ.
ಈ ಸ್ಯಾನಿಟೈಸೇಷನ್ನಿಂದ ಪರಿಸರ ಮತ್ತು ಆರೋಗ್ಯದ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬ ಸೂಕ್ತ ಅಧ್ಯಯನ ಇಲ್ಲದ ಕಾರಣ ಸ್ಥಗಿತಗೊಳಿಸಲಾಗಿದೆ. ಅಲ್ಲದೇ, ಜೈವಿಕ ದ್ರಾವಣ ಸಿಂಪಡಣೆ ಬಗ್ಗೆ ಅಧ್ಯಯನಗಳಿಲ್ಲದೇ ಏಕಾಏಕಿ ಜಾರಿಗೊಳಿಸಿರುವ ಬಗ್ಗೆಯೂ ಸಾಕಷ್ಟು ತಜ್ಞರು ಟೀಕಿಸಿದ್ದರು.
ಮೊದಲನೆ ಅಲೆಯಲ್ಲಿ ರಸ್ತೆ, ಬೀದಿ, ಮನೆಗಳ ಮುಂದೆ ನಡೆಸಿದ ಸ್ಯಾನಿಟೈಸೇಷನ್ ಕೂಡಾ ವ್ಯರ್ಥವಾಗಿದೆ ಎಂಬ ವರದಿ ಬಂದ ನಂತರವೂ ವಿಮಾನದ ಮೂಲಕ ಸ್ಪ್ರೇಯಿಂಗ್ ಮಾಡುವ ದುಬಾರಿ ಯೋಜನೆಗೆ ನಾಗರಿಕರಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ, ಮೂರು ದಿನಗಳ ಕಾಲ ಪ್ರಾಯೋಗಿಕವಾಗಿ ಕೆ.ಆರ್.ಮಾರುಕಟ್ಟೆ, ಶಿವಾಜಿನಗರ ಮಾರುಕಟ್ಟೆಗಳಲ್ಲಿ ಏರ್ ಸ್ಪ್ರೇ ನಡೆಸಲು ನಿರ್ಧರಿಸಿದ್ದ ಯೋಜನೆಗೆ ತಡೆಬಿದ್ದಿದೆ.
ಏರ್ಲೆನ್ಸ್ ಮೈನಸ್ ಕೊರೋನ ಇದು ರಾಸಾಯನಿಕ ರಹಿತ ಮಾನವ ಸ್ನೇಹಿ ಹಾಗೂ ಪರಿಣಾಮಕಾರಿಯಾದ ಸ್ಯಾನಿಟೈಸೇಷನ್ ಸಿಸ್ಟಮ್ ಆಗಿದೆ. ಕೇವಲ ನಲ್ಲಿಯ ನೀರು ಮತ್ತು ವಿದ್ಯುತ್ಶಕ್ತಿ ಬಳಸಿಕೊಂಡು ತಯಾರಿಸಲಾಗುವ ಸೋಂಕು ನಿವಾರಣಾ ದ್ರಾವಣವನ್ನು ಸಾರ್ವಜನಿಕ ಸ್ಥಳಗಳು, ಕಚೇರಿಗಳು, ಆಸ್ಪತ್ರೆಗಳು ಮತ್ತು ಮನೆಗಳಲ್ಲಿ ಬಳಸಬಹುದಾಗಿದೆ.
ಈ ಸೋಂಕು ನಿವಾರಕ ದ್ರಾವಣವನ್ನು ಆಯುರ್ವೇದದ ಅಂಶಗಳನ್ನು ಬಳಸಿಕೊಂಡು ನಿರ್ಮಿಸಲಾಗಿದೆ. ಇದು ಲ್ಯಾಬ್ಗಳಲ್ಲಿ ಮತ್ತು ಹೊರಾಂಗಣಗಳಲ್ಲಿ ಬ್ಯಾಕ್ಟೀರಿಯಾ, ಫಂಗಸ್ ಮತ್ತು ವೈರಾಣುಗಳ ವಿರುದ್ಧ ಪರಿಣಾಕಾರಿಯಾದ ಫಲಿತಾಂಶ ನೀಡುತ್ತದೆ. ಈ ಜೈವಿಕ ಸೋಂಕು ನಿವಾರಣಾ ದ್ರಾವಣ ಚರ್ಮದ ಮೇಲೆ ಯಾವುದೇ ದುಷ್ಪರಿಣಾಮ ಬೀರದ ಶೇ.100ರಷ್ಟು ಸುರಕ್ಷಿತವಾದದ್ದು. ಇದು ಗಾಳಿಯಲ್ಲಿ ಮಾಲಿನ್ಯ ಹರಡುವುದನ್ನ ಕಡಿಮೆ ಮಾಡುತ್ತದೆ ಎನ್ನಲಾಗಿತ್ತು. ಆದರೆ, ಏರಿಯಲ್ ಸ್ಪ್ರೇಯಿಂಗ್ ಪರಿಸರ ಹಾಗೂ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಅಧ್ಯಯನ ಮಾಡಬೇಕಿದೆ. ನಂತರ ಇದರ ಜಾರಿ ಬಗ್ಗೆ ನಿರ್ಧರಿಸಲಾಗುವುದು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.
ಏರಿಯಲ್ ವರ್ಕಸ್ ಏರೋ ಎಲ್ಪಿಪಿ ಸಂಸ್ಥೆಯ ಸಹಯೋಗದೊಂದಿಗೆ ಕಳೆದ ಶನಿವಾರವಷ್ಟೇ ಜಕ್ಕೂರು ಏರೋಡ್ರೊಮ್ನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಈ ಕಾರ್ಯಕ್ಕೆ ಚಾಲನೆ ನೀಡಿದ್ದರು. ಇದೇ ಮೊದಲ ಬಾರಿಗೆ ಸಾವಯವ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಕಾರ್ಯವೂ ಇದಾಗಿತ್ತು.







