ಉತ್ತರಾಖಂಡ:ನಾಯಿಗಳಿಗೆ ಆಹಾರವಾದ ಮನುಷ್ಯನ ಮೃತದೇಹಗಳು
ಇದು ಮಾನವೀಯತೆಯ ಸಾವು ಎಂದ ಸ್ಥಳೀಯ ಜನ

photo: The Telegraph
ಉತ್ತರಕಾಶಿ (ಉತ್ತರಾಖಂಡ): ಉತ್ತರಾಖಂಡದ ಉತ್ತರಕಾಶಿಯ ಭಾಗೀರಥಿ ನದಿಯ ದಡದಲ್ಲಿರುವ ಕೇದಾರ ಘಾಟ್ನಲ್ಲಿ ಬೀದಿ ನಾಯಿಗಳು ಮಾನವ ಮೃತ ದೇಹವನ್ನು ಕಿತ್ತು ತಿನ್ನುತ್ತಿರುವ ಭೀಕರ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಕಳೆದ ಕೆಲವು ದಿನಗಳಿಂದ ಮಳೆಯಿಂದಾಗಿ ಭಾಗೀರಥಿ ನದಿ ನೀರಿನ ಮಟ್ಟ ಏರಿಕೆಯಾದ ನಂತರ ಶವಗಳು ಹಾಗೂ ಕೆಲವು ಅರ್ಧ ಸುಟ್ಟ ಶವಗಳು ತೇಲಿಬಂದಿವೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
"ನಾನು ನಿನ್ನೆ ಈ ಅರ್ಧ ಸುಟ್ಟ ಮೃತ ದೇಹಗಳನ್ನು ಬೀಡಾಡಿ ನಾಯಿಗಳು ತಿನ್ನುವುದನ್ನು ನಾನು ನೋಡಿದೆ. ಜಿಲ್ಲಾಡಳಿತ ಹಾಗೂ ಮುನ್ಸಿಪಲ್ ಕಾರ್ಪೋರೇಶನ್ ಪರಿಸ್ಥಿತಿ ಅರಿತುಕೊಂಡು ತಕ್ಷಣ ಏನಾದರೂ ಮಾಡಬೇಕು. ಇದು ಕಳವಳಕಾರಿ ವಿಷಯ. ನನ್ನ ಪ್ರಕಾರ ಇದು ಮಾನವೀಯತೆಯ ಸಾವು "ಎಂದು ಸ್ಥಳೀಯರೊಬ್ಬರು ಹೇಳಿದರು.
ಶವಸಂಸ್ಕಾರ ಮಾಡಿದ ಕೋವಿಡ್-19 ಸೋಂಕಿತ ಜನರ ಶವಗಳು ಇದಾಗಿರುವ ಸಾಧ್ಯತೆಯಿದೆ ಹಾಗೂ ಸೋಂಕಿನ ಹರಡುವಿಕೆಯನ್ನು ತಪ್ಪಿಸಲು ನಗರಪಾಲಿಕೆಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಇದನ್ನು ಸರಿಯಾಗಿ ನೋಡಿಕೊಳ್ಳಬೇಕೆಂದು ನಾನು ಆಡಳಿತವನ್ನು ವಿನಂತಿಸುತ್ತೇನೆ. ನಗರಪಾಲಿಕೆ ಹಾಗೂ ತ್ತು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರೂ, ಅಂತಿಮ ವಿಧಿಗಳನ್ನು ನಡೆಸಿದ ನಂತರ ಶವಗಳನ್ನು ವಿಲೇವಾರಿ ಮಾಡಲು ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಈ ಹಿಂದೆ ಉತ್ತರ ಪ್ರದೇಶ ಮತ್ತು ಬಿಹಾರದಿಂದ ಗಂಗಾ ನದಿಯಲ್ಲಿ ಹೆಚ್ಚಿನ ಸಂಖ್ಯೆಯ ಶವಗಳು ತೇಲುತ್ತಿರುವ ಘಟನೆಗಳು ವರದಿಯಾಗಿದ್ದವು.







