ಟಗ್ ತೆರವುಗೊಳಿಸದಿದ್ದಲ್ಲಿ ಮೀನುಗಾರರ ಹೋರಾಟಕ್ಕೆ ಬೆಂಬಲ: ವಿನಯಕುಮಾರ್ ಸೊರಕೆ

ಪಡುಬಿದ್ರಿ: ಇತ್ತೀಚೆಗೆ ಚಂಡಮಾರುತದಿಂದ ದುರಂತಕ್ಕೀಡಾಗಿರುವ ಕಾಪು ಮತ್ತು ಪಡುಬಿದ್ರಿಯಲ್ಲಿರುವ ಟಗ್ನ್ನು ತೆರವು ಗೊಳಿಸದೆ ಇರುವುದರಿಂದ ಸಾಂಪ್ರಾದಾಯಿಕ ಮೀನುಗಾರಿಕೆಯನ್ನೇ ನಂಬಿದ ಮೀನುಗಾರರಿಗೆ ಸಂಕಷ್ಟ ತಂದೊಡ್ಡಿದೆ. ಸರ್ಕಾರ ಈ ಬಗ್ಗೆ ಸ್ಪಂದಿಸುತಿಲ್ಲ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆರೋಪಿಸಿದರು.
ಕಾಪು ರಾಜೀವ್ ಭವನದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದುರಂತಕ್ಕೀಡಾಗಿ 17 ದಿನವಾದರೂ ತೆರವು ಮಾಡುವ ಬಗ್ಗೆ ಸರ್ಕಾರ ಸ್ಪಂದಿಸಬೇಕು. ಕರೊನಾ ವೈರಸ್ ಲಾಕ್ಡೌನ್ನಿಂದ ಮೊದಲೇ ಸಂಕಷ್ಟ ಹೊಂದಿರುವ ಅವರು ಸರ್ಕಾರದ ಸ್ಪಂದನೆಯಿಲ್ಲದೆ ಹೋರಾಟದ ಹಾದಿ ತುಳಿದಿದ್ದು, ಕಾಂಗ್ರೆಸ್ ಪಕ್ಷವು ಕೂಡಾ ಅವರ ಹೋರಾಟಕ್ಕೆ ಬೆಂಬಲ ನೀಡಲಿದೆ ಎಂದು ನುಡಿದರು.
ಕಾಪು ಬಳಿ ಸಮುದ್ರದಲ್ಲಿ ಟಗ್ ದುರಂತಕ್ಕೀಡಾಗಿ 50 ಗಂಟೆ ಬಳಿಕ ಅದರಲ್ಲಿದ್ದ ಸಿಬ್ಬಂದಿಯನ್ನು ರಕ್ಷಿಸಲಾಗಿತ್ತು. ಪಡುಬಿದ್ರಿ ಟಗ್ 11 ದಿನಗಳ ಬಳಿಕ ಸುಸ್ಥಿತಿಗೆ ತರಲಾಗಿತ್ತು. ಟಗ್ ತೆರವು ಮಾಡದೆ ಅ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಯನ್ನು ಮಾಡಿ ಅದೆಷ್ಟು ಕುಟುಂಬಗಳು ಮೀನುಗಾರಿಕೆ ನಡೆಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಪು ಬಳಿ ಸಮುದ್ರದಲ್ಲಿ ಟಗ್ ದುರಂತಕ್ಕೀಡಾಗಿ 50 ಗಂಟೆ ಬಳಿಕ ಅದರಲ್ಲಿದ್ದ ಸಿಬ್ಬಂದಿಯನ್ನು ರಕ್ಷಿಸಲಾಗಿತ್ತು. ಅದರ ಲಾಭ ಪಡೆಯುವ ಸಲುವಾಗಿ ರಾಜ್ಯ ಸರ್ಕಾರದ ಸಚಿವರು, ಲೋಕಸಭಾ ಸದಸ್ಯರ ಸಹಿತ ಬಿಜೆಪಿ ಜನಪ್ರತಿನಿಧಿಗಳು ತಮ್ಮನ್ನು ತಾವೇ ಅಭಿನಂದಿಸುವ ಪೈಪೋಟಿಯಲ್ಲಿ ತೊಡಗಿದ್ದರು. ಆದರೆ ಟಗ್ ಇನ್ನೂ ತೆರವಾಗದಿದ್ದರೂ ಯಾವೊಬ್ಬರೂ ಇತ್ತ ಗಮನಹರಿಸುತಿಲ್ಲ ಎಂದು ಸೊರಕೆ ಲೇವಡಿ ಮಾಡಿದರು.
ಎಂಆರ್ಪಿಎಲ್ ಯೋಜನೆಯ ಗುತ್ತಿಗೆ ಹೊಂದಿರುವ ಟಗ್ ತೆರವಿಗೆ ಯುಪಿಸಿಎಲ್ ಜತೆಗೂಡಿ ಎಂಆರ್ಪಿಎಲ್ ಮುಂದಾಗಬೇಕು. ಇಲ್ಲವೇ ಸಂಕಷ್ಟಕ್ಕೊಳಗಾದ ಮೀನುಗಾರರಿಗೆ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು.
ಕೋವಿಡ್ ಲಸಿಕೆಯಲ್ಲಿ ತಾರತಮ್ಯ: ಕೋವಿಡ್-19 ಲಸಿಕೆ ನೀಡಿಕೆಯಲ್ಲೂ ತಾರತಮ್ಯಗಳಾಗುತ್ತಿರುವ ಬಗ್ಗೆ ದೂರುಗಳು ಬಂದಿದೆ. ಸರ್ಕಾರ ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ತಾರತಮ್ಯ ಮುಂದುವರಿದಲ್ಲಿ ಕಾಪು ಕ್ಷೇತ್ರದ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಸೊರಕೆ ಎಚ್ಚರಿಕೆ ನೀಡಿದರು.
ಕಾಪು ಬ್ಲಾಕ್ ದಕ್ಷಿಣ ಅಧ್ಯಕ್ಷ ನವೀನಚಂದ್ರ ಸುವರ್ಣ, ಕಾಪು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಸಾದಿಕ್ ದೀನಾರ್, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಶರ್ಪುದ್ದೀನ್ ಶೇಖ್, ಕಾಪು ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ಹರೀಶ್ ನಾಯಕ್, ಪ್ರಮುಖರಾದ ಶಾಬು ಸಾಹೇಬ್, ರಮೀಜ್ ಹುಸೇನ್, ಶಾಂತಲತಾ ಶೆಟ್ಟಿ, ಕೆ.ಎಚ್.ಉಸ್ಮಾನ್, ಸೌಮ್ಯ, ಮಾಲಿನಿ, ಅಮೀರ್ ಉಪಸ್ಥಿತರಿದ್ದರು.







