ಪಡುಬಿದ್ರಿ: ಕೋವಿಡ್ ಸೇವೆಗೆ ಆಂಬುಲೆನ್ಸ್ ಕೊಡುಗೆ

ಪಡುಬಿದ್ರಿ: ವ್ಯಾಕ್ಸಿನ್ ಕಡಿಮೆ ಲಭ್ಯತೆ ಇರುವುದರಿಂದ ಈಗ ಸಮಸ್ಯೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ವ್ಯಾಕ್ಸಿನ್ ಹೆಚ್ಚಾಗಿ ಬರಲಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಾಕ್ಸಿನ್ ನೀಡಲು ಚಿಂತನೆ ನಡೆಸಲಾಗಿದೆ ಎಂದು ಪಡುಬಿದ್ರಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ರಾಜೇಶ್ವರಿ ಕಿಣಿ ಹೇಳಿದರು.
ಅವರು ಸೋಮವಾರ ಪಡುಬಿದ್ರಿ ಕಂಚಿನಡ್ಕ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ನಿಂದ ಪಡುಬಿದ್ರಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರ ಸೇವೆಗೆ ಮೈಮುನಾ ಫೌಂಡೇಶನ್ನ ಆಪದ್ಬಾಂಧವ ಆಸೀಫ್ ನೀಡಿದ ಆಂಬುಲೆನ್ಸ್ ಉಚಿತ ಸೇವೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕೊರೊನಾ ಸೋಂಕಿನ ಬಗ್ಗೆ ಜಾಗರೂಕರಾಗಬೇಕು. ಹೆಚ್ಚೆಚ್ಚು ಸೋಂಕಿನ ಬಗ್ಗೆ ಪರೀಕ್ಷೆ ನಡೆಸಲು ಅವಕಾಶ ನೀಡಬೇಕು. ವ್ಯಾಕ್ಸಿನ್ ಪಡೆದುಕೊಳ್ಳಲು ಜನರಲ್ಲಿಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಉಚಿತ ಸೇವೆ: ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಈ ಆಂಬುಲೆನ್ಸ್ ಕೊರೊನಾ ಪೀಡಿತರನ್ನು ಆಸ್ಪತ್ರೆಗೆ ಸಾಗಿಸಲು ಉಚಿತ ಸೇವೆ ನೀಡಲಿದೆ. ಇದರ ಜವಾಬ್ದಾರಿಯನ್ನು ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ವಹಿಸಿಕೊಂಡಿದೆ. ಇದರಲ್ಲಿ ಆಕ್ಸಿಮೀಟರ್ ಹಾಗೂ ಆಮ್ಲಜನಕ ಇದ್ದು, ದಿನದ 24 ಗಂಟೆಗಳ ಕಾಲ ಸೇವೆಗೆ ಲಭ್ಯವಿದೆ. ಆಂಬುಲೆನ್ಸ್ ಅಗತ್ಯತೆ ಇದ್ದಲ್ಲಿ ಈ ಸಂಖ್ಯೆಯನ್ನು 9741674966 ಸಂಪರ್ಕಿಸಬಹುದು.
ಪಡುಬಿದ್ರಿ ಜುಮ್ಮಾ ಮಸೀದಿ ಖತೀಬ್ ಅಬ್ದುಲ್ ರಹಿಮಾನ್ ಮದನಿ ದುವಾ ನೆರವೇರಿಸಿದರು. ಪಡುಬಿದ್ರಿ ಜುಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಕೆ. ಮಯ್ಯದ್ದಿ, ಪಡುಬಿದ್ರಿ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಮೈಮುನಾ ಪೌಂಡೇಶನ್ ಸಂಸ್ಥೆಯ ಸ್ಥಾಪಕ ಆಪತ್ಬಾಂಧವ ಆಸಿಫ್, ಮುಸ್ಲಿಂ ವೆಲ್ಫೇರ್ ಅಧ್ಯಕ್ಷ ಇಸ್ಮಾಯಿಲ್ ಕಂಚಿನಡ್ಕ, ಗೌರವಾಧ್ಯಕ್ಷ ಉಪಾಧ್ಯಕ್ಷ ಯೂಸುಫ್ ಕಂಚಿನಡ್ಕ, ನಜೀರ್ ಕಂಚಿನಡ್ಕ, ಕಾರ್ಯದರ್ಶಿ ಸಫ್ವಾನ್ ಉಪಸ್ಥಿತರಿದ್ದರು. ರಝಾಕ್ ಕಂಚಿನಡ್ಕ ಕಾರ್ಯಕ್ರಮ ನಿರ್ವಹಿಸಿದರು.







