‘ಪಿಎಂ ಕೇರ್ಸ್’ನ ಪಾರದರ್ಶಕತೆ ಮತ್ತು ಕಳಪೆ ವೆಂಟಿಲೇಟರ್ಗಳು
ಪ್ರಧಾನಿಯವರ ‘ಪಿಎಂ ಕೇರ್ಸ್’ನ ಪಾರದರ್ಶಕತೆಯ ಕುರಿತು ವಿವಾದ ಸೃಷ್ಟಿಯಾದಾಗ, ಅಂದು ಅವರ ಕೆಲವು ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಪ್ರಭಾವಶಾಲಿಯಾಗಿ ಅವರ ನಡೆಯನ್ನು ಸಮರ್ಥಿಸುತ್ತಿದ್ದರು. ಅವರ ಆಗಿನ ವಾದವೇನಿತ್ತೆಂದರೆ, ‘‘ಪಿಎಂ ಕೇರ್ಸ್ಗೆ ಡೊನೇಷನ್ ನೀಡುವುದೆಂದರೆ ಅದೊಂದು ರೀತಿ ಗಿಫ್ಟ್ ನೀಡಿದಂತೆ. ಗಿಫ್ಟ್ ನೀಡಿದ ನಂತರ ಅದರ ಪಾರದರ್ಶಕತೆಯ ಪ್ರಶ್ನೆಯೇ ಇರುವುದಿಲ್ಲ. ನಿಮಗೆ ನಿಮ್ಮದೇ ದೇಶದ ಪಿಎಂ ಮೇಲೆ ವಿಶ್ವಾಸವೇ ಇಲ್ಲ ಎಂದಾದರೆ, ನಮ್ಮ ದೇಶಕ್ಕೆ ದೇಣಿಗೆ ದೊರೆಯುವುದಾದರೂ ಹೇಗೆ? ಕೋವಿಡ್ನ ಸಂದರ್ಭದಲ್ಲಿ ದೇಶದ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟಿರುವಾಗ ಈ ರೀತಿ ಚರ್ಚೆ ಸಮಂಜಸವಲ್ಲ.....’’
ಅಂದು ‘ಪಿಎಂ ಕೇರ್ಸ್’ನ ಪಾರದರ್ಶಕತೆಯ ಪ್ರಶ್ನೆಯನ್ನು ಎತ್ತಿದವರ ವಾದ ಏನಿತ್ತೆಂದರೆ: ‘‘ಈ ವಿಷಯ ಅಷ್ಟು ಸರಳವಲ್ಲದ ಕಾರಣ ಈ ರೀತಿ ಚರ್ಚೆಗಳು ನಡೆಯುತ್ತಿವೆ. ಈ ರೀತಿಯ ಚರ್ಚೆಗಳು ದೇಶದ ಭವಿಷ್ಯಕ್ಕೆ ಸಕಾರಾತ್ಮಕವಾದ ಪರಿಣಾಮ ಬೀರಲಿದೆಯೇ ಹೊರತು ಸಮಸ್ಯೆಯನ್ನು ಸೃಷ್ಟಿಸುವುದಿಲ್ಲ.’’
‘ಪಿಎಂ ಕೇರ್ಸ್’ನ ವಿವಾದಕ್ಕೆ ದೊಡ್ಡ ಕಾರಣವೇನಿತ್ತೆಂದರೆ:
ಮೊದಲನೆಯದಾಗಿ, ‘ಪಿಎಂ ಕೇರ್ಸ್’ನಲ್ಲಿ ಹಣ ನೀಡಿದ ದಾನಿಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಮತ್ತು ಕಂಪೆನಿಗಳ ಸಿಎಸ್ಆರ್ (ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ) ಹಣಗಳನ್ನು ಸಂಗ್ರಹಿಸಲಾಗುವುದು ಎಂದು ಹೇಳಲಾಗಿತ್ತು. ಹಾಗಾಗಿ ಅದನ್ನು ಕೇವಲ ಒಂದು ರೀತಿಯ ಡೊನೇಷನ್ ಅಥವಾ ಗಿಫ್ಟ್ ರೂಪದಲ್ಲಿ ನೋಡುವುದು ಸರಿಯಲ್ಲ.
ಎರಡನೆಯದಾಗಿ, ಒಂದು ಕಂಪೆನಿ ‘ಪಿಎಂ ಕೇರ್ಸ್’ಗೆ ದೇಣಿಗೆ ನೀಡಿತೆಂದರೆ ಅದು ತನ್ನ ‘ಸಿಎಸ್ಆರ್ ಫಂಡ್’ನಿಂದ ಯಾವುದೇ ಪೂರ್ವ ನಿಯೋಜಿತವಾದ ‘ಆ್ಯಕ್ಟಿವಿಟಿ’ ಕೈಗೊಳ್ಳುವುದಿಲ್ಲ. ಬದಲಾಗಿ ಅದು ‘ಪಿಎಂ ಕೇರ್ಸ್’ನ ದೇಣಿಗೆಗೆ ಒಂದಿಷ್ಟು ಮೊತ್ತವನ್ನು ನೀಡಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತದೆ.
ಮೂರನೆಯದಾಗಿ, ‘ಪಿಎಂ ಕೇರ್ಸ್’ ಮಾಹಿತಿ ಹಕ್ಕು ಕಾನೂನಿನ ಪ್ರಕಾರ ಒಂದು ಪಬ್ಲಿಕ್ ಅಥಾರಿಟಿ ಅಲ್ಲದ ಕಾರಣ ಅದರ ಕಾರ್ಯಚಟುವಟಿಕೆಯ ವಿವರವನ್ನು ಕೇಳುವ ಅಧಿಕಾರವು ಅದಕ್ಕೆ ಹಣ ನೀಡಿದ ವ್ಯಕ್ತಿ ಅಥವಾ ಕಂಪೆನಿಯ ಬಳಿಯೂ ಇರುವುದಿಲ್ಲ.
ಕೋವಿಡ್ನಿಂದಾಗಿ ಆಕ್ಸಿಜನ್ ಇಲ್ಲ, ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ ಮತ್ತು ಹಳ್ಳಿ ಪ್ರದೇಶಗಳಲ್ಲಿ ಸರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲ ಎನ್ನುವ ಕೂಗು ಒಂದು ಕಡೆಯಾದರೆ, ಇನ್ನೊಂದೆಡೆ ಹಿಡಿತಕ್ಕೆ ಬಾರದ ಕೋವಿಡ್ ಪಾಸಿಟಿವ್ ಪ್ರಕರಣಗಳು ಹಾಗೂ ಸರಕಾರಕ್ಕೂ ಸರಿಯಾಗಿ ಲೆಕ್ಕಕೊಡಲು ಸಾಧ್ಯವಾಗದಷ್ಟು ಡೆತ್ರೇಟ್ (ಮರಣ ಸಂಖ್ಯೆ) ಇದೆ. ಅಲ್ಲದೆ ಅವೈಜ್ಞಾನಿಕವಾದ ಲಾಕ್ಡೌನ್ನಿಂದಾಗಿ ವ್ಯಾಪಾರಿಗಳಿಗೆ ಮತ್ತು ಕಾರ್ಮಿಕರಿಗೆ ಆದ ನಷ್ಟ, ದೇಶದಲ್ಲಿ ಸೃಷ್ಟಿಯಾದ ಅತೀವ ಬಡತನ ಮತ್ತು ನಿರುದ್ಯೋಗ ಸಮಸ್ಯೆ ಮತ್ತು ಮಕ್ಕಳಿಗಾದ ಶೈಕ್ಷಣಿಕ ನಷ್ಟಗಳನ್ನು ಭರಿಸಲು ದಶಕಗಳೇ ಬೇಕಾಗಬಹುದು.
ಇಷ್ಟೆಲ್ಲ ಕಷ್ಟನಷ್ಟಗಳಾಗಿರುವಾಗ ಭಾರತೀಯರಿಗಾಗಿ ಸಂಗ್ರಹಿಸಲಾಗಿರುವ ‘ಪಿಎಂ ಕೇರ್ಸ್’ನ ಬಹು ದೊಡ್ಡ ಮೊತ್ತದ ಪಾರದರ್ಶಕತೆಯ ಪ್ರಶ್ನೆಯು ವ್ಯಾಪಕವಾಗಿ ಚರ್ಚೆಯಾಗುವುದು ಸಹಜ. ಒಂದು ಲೆಕ್ಕದ ಪ್ರಕಾರ ಕಳೆದ ವರ್ಷವೇ ಸುಮಾರು ರೂ. 3,000 ಕೋಟಿಗಿಂತಲೂ ಹೆಚ್ಚು ಸಂಗ್ರಹಿಸಿರುವ ಈ ‘ಪಿಎಂ ಕೇರ್ಸ್’ ಹಣದ ಬಗ್ಗೆ ಪಾರದರ್ಶಕತೆ ಇರಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಅದರ ಲೆಕ್ಕ ಕೊಡಿ ಎಂದು ಜನರು ನಿರಂತರವಾಗಿ ಕೇಳುತ್ತಿರುವಾಗಲೂ ‘ಪಿಎಂ ಕೇರ್ಸ್’ನ ಒಡೆಯರು ಸುಮ್ಮನಿದ್ದಾರೆ ಎಂದರೆ ಅಚ್ಚರಿಯಾಗುತ್ತದೆ. ಆದರೆ ಈ ಜನರ ನಿರಂತರ ಪ್ರಶ್ನೆಯಿಂದಾಗಿ ‘ಪಿಎಂ ಕೇರ್ಸ್’ನ ಹೆಸರಲ್ಲಿ ಸಾವಿರಾರು ವೆಂಟಿಲೇಟರ್ ಹಲವು ರಾಜ್ಯಗಳಿಗೆ ವಿತರಣೆಯಾಯಿತು. ಇತರ ರಾಜ್ಯಗಳಿಗೆ ಕಳುಹಿಸಿದಂತೆಯೇ ನಮ್ಮ ರಾಜ್ಯಕ್ಕೂ ಸಾವಿರಾರು ವೆಂಟಿಲೇಟರ್ಗಳನ್ನು ಕಳುಹಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ. ಆದರೆ ‘ಪಿಎಂ ಕೇರ್ಸ್’ ಹೆಸರಿನಿಂದ ನಮ್ಮ ರಾಜ್ಯಕ್ಕೆ ಕಳುಹಿಸಲಾದ ಸುಮಾರು 2,913 ವೆಂಟಿಲೇಟರ್ಗಳ ಪೈಕಿ ಅರ್ಧದಷ್ಟು ಕೆಲಸಕ್ಕೆ ಬಾರದ ಅತ್ಯಂತ ಕಳಪೆ ಗುಣಮಟ್ಟದವುಗಳಾಗಿವೆ, ಅವುಗಳು ಅಳವಡಿಸಲಾಗದೆ ಗೋಡೌನ್ನಲ್ಲಿ ಧೂಳು ಹಿಡಿಯುತ್ತಿವೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಇನ್ನು ನಮ್ಮ ಪಕ್ಕದ ರಾಜ್ಯವಾದ ಮಹಾರಾಷ್ಟ್ರದ ಔರಂಗಾಬಾದ್ ಉಚ್ಚ ನ್ಯಾಯಾಲಯದಲ್ಲಿ ದಾಖಲಾದ ಸು ಮೋಟೋ ಜನಹಿತಯಾಚಿಕೆಯಲ್ಲಿ ವೈದ್ಯರ ಸಮಿತಿಯ ವರದಿಯಂತೆ ಆ ಪ್ರದೇಶಕ್ಕೆ ಕಳುಹಿಸಲಾದ ವೆಂಟಿಲೇಟರ್ಗಳ ಪೈಕಿ ಬಹಳಷ್ಟು ಕಳಪೆ ಗುಣಮಟ್ಟದ್ದು ಎಂದು ಹೇಳಲಾಗಿದೆ. ಈ ವೆಂಟಿಲೇಟರ್ಗಳು ಆರಂಭದಲ್ಲಿ ‘ಪಿಎಂ ಕೇರ್ಸ್’ನಿಂದ ನೀಡಲಾಗುತ್ತಿದೆ ಎಂದು ಪ್ರಚಾರಮಾಡಲಾಗಿತ್ತು. ಆದರೆ ಅದು ಅಳವಡಿಕೆಗೆ ಬಾರದ ವೆಂಟಿಲೇಟರ್ಗಳೆಂದು ತಿಳಿದೊಡನೆ ಆ ವೆಂಟಿಲೇಟರ್ಗಳಿಗೂ ‘ಪಿಎಂ ಕೇರ್ಸ್’ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗಿದೆ.
ಈ ರೀತಿ ಕಳಪೆ ಗುಣಮಟ್ಟದ ವೆಂಟಿಲೇಟರ್ ಸರಬರಾಜು ಮಾಡುವ ಕಂಪೆನಿಗಳಿಗೆ ಅದೊಂದು ಹಣಮಾಡುವ ಆಟ, ಆದರೆ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ಗಾಗಿ ಓಡಾಡುವ ರೋಗಿಗಳಿಗೆ ಅದು ಪ್ರಾಣ ಸಂಕಟವಾಗಿದೆ.
ಒಂದೆಡೆ ‘ಪಿಎಂ ಕೇರ್ಸ್’ನ ಪಾರದರ್ಶಕತೆಯ ಬಗ್ಗೆ ಲೆಕ್ಕ ಕೇಳುವಂತೆಯೂ ಇಲ್ಲ, ಇನ್ನೊಂದು ಕಡೆ ನಮ್ಮ ರಾಜ್ಯದಲ್ಲಿಯೇ ವೆಂಟಿಲೇಟರ್ಗಳ ಕೊರತೆಯಿಂದಾಗಿ ಸಾವಿರಾರು ಜನರು ತೀರಿಹೋಗಿದ್ದು, ಈ ಕಳಪೆ ವೆಂಟಿಲೇಟರ್ಗಳನ್ನು ಪೂರೈಸಿದ ಕಳ್ಳ ಖದೀಮರು ಯಾರು ಎನ್ನುವುದನ್ನು ಪ್ರಶ್ನಿಸಲಾಗದ ಸ್ಥಿತಿ ಈ ದೇಶದ ನಾಗರಿಕರದ್ದಾಗಿದೆ.