ಭಾರತವನ್ನು ಅರಿಯದೆ ಸಂವಿಧಾನ ಅರ್ಥ ಮಾಡಿಕೊಳ್ಳುವುದು ಕಷ್ಟ: ನ್ಯಾ.ನಾಗಮೋಹನ ದಾಸ್

ಬೆಂಗಳೂರು, ಜೂ.3: ಭಾರತವನ್ನು ಅರಿಯದೆ ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಸಮಾಜದಲ್ಲಿರುವ ದುರ್ಬಲರು, ಬಡತನದಿಂದ ಬಳಲುತ್ತಿರುವವರು, ಅನಕ್ಷರಸ್ಥರು, ಭೂಹೀನರು, ರೋಗಗ್ರಸ್ತರು, ನಿರುದ್ಯೋಗಿಗಳು, ಹಿಂದುಳಿದ ವರ್ಗದವರನ್ನು ಮುಂದೆ ತಂದು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವುದೇ ಸಂವಿಧಾನದ ಬಹುಮುಖ್ಯ ಉದ್ದೇಶವೆಂದು ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ ದಾಸ್ ಅಭಿಪ್ರಾಯಿಸಿದ್ದಾರೆ.
ಬೆಂವಿವಿ ರಾಷ್ಟ್ರೀಯ ಸೇವಾ ಯೋಜನೆ ಕೋಶ ವತಿಯಿಂದ ಆಯೋಜಿಸಿದ್ದ ಉಪನ್ಯಾಸ ಮಾಲಿಕೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯವನ್ನು ಮಾನವ ಹಕ್ಕುಗಳ ವ್ಯಾಖ್ಯಾನದ ಅಡಿಯಲ್ಲಿ ತಂದು ಹಲವರ ಹಕ್ಕುಗಳನ್ನು ರಕ್ಷಣೆ ಮಾಡಬೇಕಾಗಿದೆ. ಮೀಸಲಾತಿ ಒಂದೇ ಸಾಮಾಜಿಕ ನ್ಯಾಯ ವ್ಯಾಪ್ತಿಯಡಿಯಲ್ಲಿ ಬರುವುದಲ್ಲ ಹಾಗೂ ಸಾಮಾಜಿಕ ನ್ಯಾಯವೆಂದರೆ ಕೇವಲ ಮೀಸಲಾತಿ ಸಿದ್ಧಾಂತಕ್ಕೆ ಒಳಪಡಿಸುವದಲ್ಲವೆಂದು ತಿಳಿಸಿದ್ದಾರೆ.
ಇಂದಿನ ದಿನಗಳಲ್ಲಿ ಮೀಸಲಾತಿ ತನ್ನ ಮಹತ್ವವನ್ನೇ ಕಳೆದುಕೊಂಡಿದೆ. ಸರಕಾರಗಳು ಸಾರ್ವಜನಿಕ ವಲಯಗಳನ್ನು ಖಾಸಗಿ ವಲಯಗಳಾಗಿ ಮಾರ್ಪಡಿಸಿದ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಗುರಿ ಉದ್ದೇಶಗಳನ್ನ ವಿಫಲ ಮಾಡಿದಂತೆ. ಸರಕಾರ ಸಂಸ್ಥೆಗಳಲ್ಲಿ ಕಾಲಕಾಲಕ್ಕೆ ಆಗಬೇಕಾದ ನೇಮಕಾತಿಗಳನ್ನು ಮುಂದೂಡಿ, ಇಂದಿಗೂ ಒಪ್ಪಂದ ಹಾಗೂ ಹೊರಗುತ್ತಿಗೆಯಲ್ಲಿ ಜನರಿಗೆ ಉದ್ಯೋಗವನ್ನು ನೀಡುತ್ತಿರುವುದು ಸಾಮಾಜಿಕ ನ್ಯಾಯದ ಉದ್ದೇಶಗಳನ್ನು ಬುಡಮೇಲು ಮಾಡಿದಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದೆ ರೈತರು ಗ್ರಾಮಗಳಲ್ಲಿ ಜನರಿಗೆ ಉದ್ಯೋಗ ನೀಡುತ್ತಿದ್ದರು. ಆದರೆ ಇಂದಿನ ಸರಕಾರಗಳ ಅವೈಜ್ಞಾನಿಕ ಹಾಗೂ ಅಸಮಂಜಸ ಕೃಷಿ ನೀತಿಗಳಿಂದ ರೈತರು ಕಂಗಾಲಾಗಿ ಮೀಸಲಾತಿಯನ್ನು ಕೇಳುವಂತಾಗಿದೆ. ಆರ್ಥಿಕ ಆಧಾರದ ಮೇಲೆ ಶೇ.10ರಷ್ಟು ಕೊಟ್ಟಿರುವ ಮೀಸಲಾತಿ ಅಸಂವಿಧಾನ ಹಾಗೂ ಇದರ ಬಗ್ಗೆ ಯಾವುದೇ ಆಯೋಗಗಳನ್ನು ರಚಿಸಿದೆ ತರಾತುರಿಯಲ್ಲಿ ಯಾವುದೇ ಚರ್ಚೆಗೆ ಒಳಪಡಿಸದೆ ಸಂವಿಧಾನ ತಿದ್ದುಪಡಿ ಮಾಡಿರುವುದು ನಿಜಕ್ಕೂ ಆತಂಕಕಾರಿ ಎಂದು ಅವರು ವಿಷಾದಿಸಿದರು.
ಈ ವೇಳೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೇಣುಗೋಪಾಲ್. ಕಾರ್ಯಕ್ರಮದಲ್ಲಿ ರಾಜ್ಯ ಎನ್ನೆಸ್ಸೆಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ, ಸಂಯೋಜನಾಧಿಕಾರಿ ಡಾ. ಎನ್. ಸತೀಶ್ ಗೌಡ ಉಪಸ್ಥಿತರಿದ್ದರು.







