ಪ್ರಧಾನಿ ಮೋದಿ ಆಪ್ತ ಮಾಜಿ ಅಧಿಕಾರಿಗೆ ಉತ್ತರ ಪ್ರದೇಶದಲ್ಲಿ ಮಹತ್ವದ ಹುದ್ದೆ ದೊರೆಯುವ ನಿರೀಕ್ಷೆ: ವರದಿ

Photo source: aksharmabharat.in
ಹೊಸದಿಲ್ಲಿ: ಉತ್ತರ ಪ್ರದೇಶ ಸರಕಾರ ಕೋವಿಡ್ ಸಮಸ್ಯೆ ನಿಭಾಯಿಸಿದ ರೀತಿಯ ಕುರಿತು ಕೇಳಿ ಬಂದ ಟೀಕೆಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಿಲ್ಲ ಎಂದು ಬಿಜೆಪಿ ನಾಯಕತ್ವ ಸ್ಪಷ್ಟಪಡಿಸಿದೆ. ಆದರೂ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಸಂಪುಟದಲ್ಲಿ ಕೆಲ ಹೊಸ ಮುಖಗಳ ಸೇರ್ಪಡೆಯ ಜತೆಗೆ ಪ್ರಧಾನಿ ನರೇಂದ್ರ ಮೋದಿಯ ಆಪ್ತರೆಂದೇ ಪರಿಗಣಿತರಾಗಿರುವ ಮಾಜಿ ಅಧಿಕಾರಿ ಎ.ಕೆ. ಶರ್ಮ ಅವರಿಗೆ ಕೂಡ ಪ್ರಮುಖ ಹುದ್ದೆ ದೊರೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದ್ದಾಗಿ ndtv.com ವರದಿ ಮಾಡಿದೆ.
ಆದಿತ್ಯನಾಥ್ ಅವರು ಸಿಎಂ ಆಗಿ ಹಾಗೂ ಸ್ವತಂತ್ರ ದೇವ್ ಸಿಂಗ್ ಅವರು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಪಕ್ಷ ನಾಯಕತ್ವ ಈಗಾಗಲೇ ಸ್ಪಷ್ಟ ಪಡಿಸಿದೆಯೆನ್ನಲಾಗಿದೆ.
ಈ ತಿಂಗಳು ಉತ್ತರ ಪ್ರದೇಶ ಸಚಿವ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆಯಿದೆ. ಕೇಂದ್ರ ಬಿಜೆಪಿ ನಾಯಕರುಗಳಾದ ಬಿ.ಎಲ್. ಸಂತೋಷ್ ಹಾಗೂ ರಾಧಾ ಮೋಹನ್ ಸಿಂಗ್ ಅವರು ಇತ್ತೀಚೆಗೆ ರಾಜ್ಯದಲ್ಲಿ ನಡೆಸಿದ ಸಭೆಗಳ ನಂತರ ಮೇಲಿನ ಬೆಳವಣಿಗೆ ನಡೆದಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಕೂಡ ಮುಂದಿನ ತಿಂಗಳು ಉತ್ತರ ಪ್ರದೇಶಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.