ಅಲೆಮಾರಿ ದನಗಳನ್ನು ದತ್ತು ಪಡೆಯಲು ಜನರನ್ನು ಪ್ರೋತ್ಸಾಹಿಸಿ: ಮೇಯರ್, ಕಾರ್ಪೊರೇಟರುಗಳಿಗೆ ಆದಿತ್ಯನಾಥ್ ಸಲಹೆ

ಲಕ್ನೋ: ನಗರ ಸ್ಥಳೀಯಾಡಳಿತ ಸಂಸ್ಥೆಗಳು ಅಲೆಮಾರಿ ದನಗಳ ಸಮಸ್ಯೆ ಎದುರಿಸುತ್ತಿವೆ ಎಂಬುದನ್ನು ಒಪ್ಪಿಕೊಂಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಇಂತಹ ದನಗಳ ಸಾಕಣಿಕೆಗೆ ಹಣ ನೀಡುವ ಮೂಲಕ ಅವುಗಳನ್ನು ದತ್ತು ಪಡೆಯಲು ಜನರನ್ನು ಪ್ರೋತ್ಸಾಹಿಸಬೇಕು ಎಂದು ನಗರಾಡಳಿತ ಸಂಸ್ಥೆಗಳ ಮೇಯರ್ ಹಾಗೂ ಕಾರ್ಪೊರೇಟರುಗಳಿಗೆ ಕರೆ ನೀಡಿದ್ದಾರೆ.
ನಗರ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳ ಜತೆಗೆ ವರ್ಚುವಲ್ ಸಂವಾದದ ವೇಳೆ ಆದಿತ್ಯನಾಥ್ ಅವರು ಮೇಲಿನ ಸಲಹೆ ನೀಡಿದ್ದಾರೆ.
ಅಲೆಮಾರಿ ದನಗಳ ಸಮಸ್ಯೆಯನ್ನು ನಿಭಾಯಿಸಲು ರಾಜ್ಯ ಸರಕಾರ ಪ್ರಯತ್ನಿಸುತ್ತಿದೆಯಾದರೂ ಜನರು ದನಗಳನ್ನು ದತ್ತು ಪಡೆಯುವಂತಾಗಲು ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.
“ದನಗಳು ಒಣ ಹುಲ್ಲನ್ನು ಮಾತ್ರ ತಿಂದರೆ ಸಾಲದು, ಅವುಗಳಿಗೆ ಸ್ವಲ್ಪ ಹಸಿರು ಹುಲ್ಲನ್ನೂ ನೀಡಬೇಕು ಆಗ ಅವುಗಳು ಆರೋಗ್ಯಯುತವಾಗುತ್ತವೆ. ದನ ಕೃಶಗೊಂಡರೆ ಅದನ್ನು ಚೆನ್ನಾಗಿ ನೋಡಿಕೊಳ್ಳದೇ ಇದ್ದುದಕ್ಕಾಗಿ ನಮಗೆ ಪಾಪ ತಟ್ಟುತ್ತದೆ,'' ಎಂದು ಅವರು ಹೇಳಿದರು.
ಅಲೆಮಾರಿ ದನಗಳ ಖರ್ಚು ನಿಭಾಯಿಸಲು ದನಗಳನ್ನು ದತ್ತು ಪಡೆಯಲು ನೀಡಬೇಕಾದ ಮೊತ್ತವನ್ನು ರೂ. 300ರಿಂದ ರೂ. 500ರೊಳಗೆ ನಿಗದಿ ಪಡಿಸುವಂತೆ ಸೂಚಿಸಿದ ಅವರು, ಒಬ್ಬ ವ್ಯಕ್ತಿ ವರ್ಷಕ್ಕೆ ಒಂದು ಬಾರಿ ಈ ಮೊತ್ತ ನೀಡುವಂತೆ ಮಾಡಬೇಕು ಎಂದು ಹೇಳಿದರು.







