ರೋಹಿಣಿ ಸಿಂಧೂರಿ ವಿರುದ್ಧದ ಆರೋಪಗಳ ಬಗ್ಗೆ ಶಿಲ್ಪಾನಾಗ್ ಬಳಿ ದಾಖಲೆ ಕೇಳಿದ ಸರಕಾರದ ಮುಖ್ಯ ಕಾರ್ಯದರ್ಶಿ
''ಏಕಾಏಕಿ ಸುದ್ದಿಗೋಷ್ಠಿ ನಡೆಸಿದ್ದು ಆಡಳಿತಾತ್ಮಕ ಉಲ್ಲಂಘನೆ ಅಲ್ಲವೆ?''

ಮೈಸೂರು,ಜೂ.4: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾಡಿರುವ ಆರೋಪಗಳ ಕುರಿತು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ದಾಖಲೆ ನೀಡುವಂತೆ ಕೇಳಿದ್ದಾರೆ.
ನಗರದ ಎಟಿಐನಲ್ಲಿ ಕೊರೋನ ನಿಯಂತ್ರಣ ಸಂಬಂಧ ಮಾಹಿತಿ ಪಡೆಯಲು ಆಗಮಿಸಿರುವ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಗುರುವಾರದ ಸುದ್ದಿಗೋಷ್ಠಿ ಬಗ್ಗೆ ದಾಖಲೆಗಳನ್ನು ಕೇಳಿದರು ಎನ್ನಲಾಗಿದೆ. ನಿನ್ನೆ ಸುದ್ಧಿಗೋಷ್ಠಿ ನಡೆಸಿ ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಶಿಲ್ಪಾನಾಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದೇ ವಿಚಾರವಾಗಿ ಶಿಲ್ಪಾನಾಗ್ ಅವರನ್ನ ತರಾಟೆ ತೆಗೆದುಕೊಂಡು ಸುದ್ದಿಗೋಷ್ಠಿ ಬಗ್ಗೆ ದಾಖಲೆಗಳನ್ನು ಕೇಳಿದ್ದಾರೆ.
ನೀವು ನಿನ್ನೆ ಏಕಾಏಕಿ ಹೇಗೆ ಸುದ್ದಿಗೋಷ್ಠಿ ನಡೆಸಿದಿರಿ. ಸುದ್ದಿಗೋಷ್ಠಿ ನಡೆಸುವ ಅಗತ್ಯತೆ ಏನಿತ್ತು? ಯಾವ ಆಧಾರದಲ್ಲಿ ನೀವು ಸುದ್ದಿಗೋಷ್ಠಿ ನಡೆಸಿದ್ದೀರಿ. ಸುದ್ದಿಗೋಷ್ಠಿ ನಡೆಸಿದ್ದರ ಉದ್ದೇಶ ಏನು ? ನನಗೆ ಈ ವಿಚಾರದಲ್ಲಿ ದೂರು ನೀಡಬಹುದಿತ್ತು. ಏಕಾಏಕಿ ಸುದ್ದಿಗೋಷ್ಠಿ ನಡೆಸಿದ್ದು ಆಡಳಿತಾತ್ಮಕ ಉಲ್ಲಂಘನೆ ಅಲ್ಲವೆ? ಈಗ ಡಿಸಿ ವಿರುದ್ಧ ಮಾಡಿರುವ ಆರೋಪಗಳಿಗೆ ದಾಖಲೆ ಇದೆಯಾ ಎಂದು ಶಿಲ್ಪಾನಾಗ್ ಅವರಿಗೆ ರವಿಕುಮಾರ್ ಪ್ರಶ್ನಿಸಿದರು ಎನ್ನಲಾಗಿದೆ.
ಇದೇ ವೇಳೆ ಕೆಲವೊಂದು ವಾಟ್ಸಾಪ್ ಗ್ರೂಪ್ ನಿಂದ ತಮ್ಮನ್ನು ರಿಮೋವ್ ಮಾಡಿರುವ ಬಗ್ಗೆ ಶಿಲ್ಪಾನಾಗ್ ದೂರಿದರು. ಈ ಸಮಯದಲ್ಲಿ ನಿಮ್ಮ ಬಳಿ ದಾಖಲೆ ಇದ್ದರೆ ದಾಖಲೆ ಸಮೇತ ವಿವರಣೆ ನೀಡಿ ಎಂದು ರವಿಕುಮಾರ್ ಅವರು ಶಿಲ್ಪಾನಾಗ್ ಅವರಿಗೆ ತಿಳಿಸಿದರು ಎಂದು ತಿಳಿದು ಬಂದಿದೆ.







