ಮೃತ ಮೀನುಗಾರ ಲೋಕೇಶ್ ಕುಂದರ್ ಕುಟುಂಬಕ್ಕೆ 6 ಲಕ್ಷ ರೂ. ಪರಿಹಾರ
ಮಂಗಳೂರು, ಜೂ.5: ಕಳೆದ ಡಿಸೆಂಬರ್ನಲ್ಲಿ ಮನೆ ಸಮೀಪವೇ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಸಾವಿಗೀಡಾಗಿದ್ದ ಸುರತ್ಕಲ್ ಸಮೀಪದ ಇಡ್ಯಾದ ಗುಡ್ಡೆಕೊಪ್ಲ ನಿವಾಸಿ ಲೋಕೇಶ್ ಕುಂದರ್ ಕುಟುಂಬಕ್ಕೆ ಸರಕಾರದಿಂದ ಮಂಜೂರಾದ 6 ಲಕ್ಷ ರೂ. ಪರಿಹಾರ ಧನದ ಮಂಜೂರಾತಿ ಪತ್ರವನ್ನು ಶಾಸಕ ಭರತ್ ಶೆಟ್ಟಿ ಶನಿವಾರ ಹಸ್ತಾಂತರಿಸಿದರು.
ಲೋಕೇಶ್ ಕುಂದರ್ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಟ್ಯೂಬ್ ಹತೋಟಿ ತಪ್ಪಿ ದೂರ ಸರಿದು ನೀರಿಗೆ ಹಾಕಿದ ಬಲೆ ಕಾಲಿಗೆ ಸಿಲುಕಿ ಈಜಾಡಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.
ರಾಜ್ಯ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ಶಾಸಕರು ವಿಶೇಷ ಪ್ರಯತ್ನ ನಡೆಸಿ 6 ಲಕ್ಷ ರೂ. ಮಂಜೂರು ಮಾಡಿಸಿದ್ದು, ಶನಿವಾರ ಲೋಕೇಶ್ರ ಪತ್ನಿ ಜ್ಯೋತಿ ಎಸ್. ಪುತ್ರನ್ಗೆ ಪರಿಹಾರ ಮಂಜೂರಾತಿ ಪತ್ರ ಹಸ್ತಾಂತರಿಸಿ ಸಾಂತ್ವನ ಹೇಳಿದರು.
ಈ ಸಂದರ್ಭ ಮನಪಾ ನಾಮನಿರ್ದೇಶಿತ ಸದಸ್ಯ ರಾಜೇಶ್ ಸಾಲ್ಯಾನ್, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ. ಸುಶ್ಮಿತಾ ರಾವ್, ಸಹಾಯಕ ನಿರ್ದೇಶಕ ದಿಲೀಪ್, ದಕ್ಷಿಣ ಕನ್ನಡ ಕರಾವಳಿ ಮೂಲ ಮೀನುಗಾರರ ಸಂಘದ ಅಧ್ಯಕ್ಷ ಅಶ್ವಥ್ ಕಾಂಚನ್ ಬೈಕಂಪಾಡಿ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಶ್ರೀಯಾನ್ ಗುಡ್ಡೆಕೊಪ್ಲ. ದ.ಕ. ಹಾಗೂ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ನ ನಿರ್ದೇಶಕ ಸುಧೀರ್ ಶ್ರೀಯಾನ್, ಪಕ್ಷದ ಮಂಡಲ ಉಪಾಧ್ಯಕ್ಷ ವಿಠಲ ಸಾಲಿಯಾನ್ ಉಪಸ್ಥಿತರಿದ್ದರು.







