ಶಿವಮೊಗ್ಗ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ಶಿವಮೊಗ್ಗ, ಜೂ.5: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದೇಶಾದ್ಯಂತ ಜನ ಕೊರೋನ ಎರಡನೇ ಅಲೆಯಿಂದ ತತ್ತರಿಸಿದ್ದು, ಮೂರನೆಯ ಮುನ್ಸೂಚನೆಗಳಿರುವ ಇಂತಹ ಸಂದರ್ಭದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕೇಂದ್ರ ಬಿಜೆಪಿ ಸರ್ಕಾರ ಏರಿಕೆ ಮಾಡುತ್ತಿದೆ ಎಂದು ಪ್ರತಿಭಟನಾನಿತರು ಆಕ್ರೋಶ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದರೂ ಕೇಂದ್ರ ಸರ್ಕಾರ ಎಕ್ಸೈಸ್ ಸುಂಕವನ್ನು ಹೆಚ್ಚಿಸಿ, ಕೊರೋನ ಲಾಕ್ಡೌನ್ ನಿಂದ ತತ್ತರಿಸಿರುವ ದೇಶದ ಶ್ರೀಸಾಮಾನ್ಯನ ಮೇಲೆ ಹೊರೆ ಹಾಕುತ್ತಿದೆ. ಸಮರ್ಪಕವಾಗಿ ಕೊರೋನವನ್ನು ನಿರ್ವಹಿಸದೇ ಅವೈಜ್ಞಾನಿಕ ಲಾಕ್ ಡೌನ್ ಘೋಷಣೆ ಮಾಡಿ ಯಾವುದೇ ವಿಶೇಷ ಪ್ಯಾಕೇಜನ್ನು ಸಹ ನೀಡದೆ ದೇಶದ ಜನರ ಜೀವ ಹಾಗು ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಎಲ್ಲಾ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನೂರು ರೂಪಾಯಿ ಗಡಿಯನ್ನು ದಾಟಿದೆ. ಇದು ಸರಕು ಸಾಗಾಣಿಕೆ ಮೇಲೆ ಹೊಡೆತ ಬೀಳುವುದರಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತದೆ. ದೇಶದ ಜನರಿಗೆ ಪ್ರಧಾನಮಂತ್ರಿಗಳು ಮಾತ್ರ ಸ್ವಾವಲಂಬಿ ಬದುಕನ್ನು ಸಾಗಿಸಬೇಕೆಂದು ಹೇಳುವ ಮೂಲಕ ದೇಶದ ಶ್ರೀಸಾಮಾನ್ಯನ ಮೇಲೆ ಹೊರೆ ಹೇರುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಈ ಕೂಡಲೇ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಇಳಿಕೆ ಮಾಡಿ ದೇಶದ ಜನಕ್ಕೆ ಇಂತಹ ಸಂಕಷ್ಟದಿಂದ ಹೊರಬರಲು ನೆರವಾಗಬೇಕು. ಇಲ್ಲವಾದಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಇಂತಹ ಜನವಿರೋಧಿ ನೀತಿಯ ಸರ್ಕಾರವನ್ನು ವಜಾ ಮಾಡಬೇಕೆಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಮಹಾನಗರ ಪಾಲಿಕೆ ಸದಸ್ಯ ಎಚ್.ಸಿ.ಯೋಗೀಶ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ಈ ಟಿ ನಿತಿನ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಎಸ್.ಕುಮಾರೇಶ್, ಪದಾಧಿಕಾರಿಗಳಾದ ಎಂ.ರಾಹುಲ್, ಗಗನ್ ಗೌಡ, ಸಚಿನ್ ,ರಾಹುಲ್, ವೆಂಕಟೇಶ್ ಕಲ್ಲೂರ್, ಸಂತೋಷ, ರಾಕೇಶ್, ನವೀನ್, ನಂದನ್ ,ಚೇತನ್, ವಿನಯ್ ದೇವರಾಜ್ ಇತರರು ಇದ್ದರು.
.jpg)







