ಕುಕ್ಕೋಟೋದ್ಯಮದ ಮೇಲೆ ಕೊರೋನ ಕರಿನೆರಳು: ವ್ಯವಹಾರವಿಲ್ಲದೇ ದಿನಕ್ಕೆ ಲಕ್ಷಾಂತರ ರೂ. ನಷ್ಟ
ಮಾರಾಟಕ್ಕೆ ಸಮಯದ ಅವಧಿ ವಿಸ್ತರಣೆಗೆ ಮನವಿ

ಶಿವಮೊಗ್ಗ, ಜೂ.5: ರಾಜ್ಯದಲ್ಲಿ ಕೊರೋನ ವೈರಸ್ ಪರಿಣಾಮ ಕುಕ್ಕೋಟೋದ್ಯಮದ ಮೇಲೆಯೂ ಬಿದ್ದಿದೆ. ಕಳೆದ ವರ್ಷದ ಲಾಕ್ಡೌನ್ ಆಘಾತದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಕುಕ್ಕೋಟೋದ್ಯಮ ಮತ್ತೆ ಸಂಕಷ್ಟಕ್ಕೆ ಒಳಗಾಗಿದೆ. ಖರೀದಿ ಅವಧಿ ಸೀಮಿತವಾಗಿರುವುದರಿಂದ ವ್ಯಾಪಾರವೂ ಇಲ್ಲದೇ ಮಾರಾಟವೂ ಇಲ್ಲದೇ ದಿನಕ್ಕೆ ಲಕ್ಷಾಂತರ ರೂ ನಷ್ಟು ಉಂಟಾಗುತ್ತಿದೆ.
2020ರ ಮಾರ್ಚ್ ನಲ್ಲಿ ರಾಜ್ಯ ಸರ್ಕಾರದಿಂದ ಏಕಾಏಕಿ ಲಾಕ್ಡೌನ್ ಘೋಷಣೆ ಮಾಡಲಾಯಿತು. ಈ ವೇಳೆ ಕೋಳಿ ಮೇಲಿನ ವದಂತಿ, ಹಕ್ಕಿ ಜರದ ಭೀತಿ, ಮಾರಾಟಕ್ಕೆ ಅವಕಾಶವೇ ಇಲ್ಲದ ಕಾರಣ ಕೋಳಿ ಸಾಕಣೆದಾರ ರೈತರು ಲಕ್ಷಾಂತರ ಕೋಳಿಗಳನ್ನು ಜೀವಂತ ಹೂತು ಕೋಟಿ ಕೋಟಿ ನಷ್ಟ ಮಾಡಿಕೊಂಡರು. ಇಂತಹ ಕಹಿ ಘಟನೆಯಿಂದ ಹೊರಬರುವ ಮುನ್ನವೇ ಮತ್ತೆ ಲಾಕ್ಡೌನ್ ಪರಿಣಾಮ ಕಾಡುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬೆಳಗ್ಗೆ 10 ಗಂಟೆವರೆಗೂ ಕೋಳಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಸಂಪೂರ್ಣ ಲಾಕ್ಡೌನ್ ಇರುವ ಕಡೆ ಅದೂ ಇಲ್ಲ. ಈ ಅವಧಿಯಲ್ಲಿ ಸರದಿ ಸಾಲಿನಲ್ಲಿ ನಿಂತು ಖರೀದಿ ಮಾಡುವ ಹಾಗೂ ಕಷ್ಟದ ಸಮಯದಲ್ಲಿ ಹಣ ಖರ್ಚು ಮಾಡಲು ಜನ ಹಿಂದು ಮುಂದು ನೋಡುತ್ತಿದ್ದಾರೆ. ಇದರಿಂದ ಒಟ್ಟಾರೆ ಕೋಳಿ ಮಾರಾಟ, ಸೇವನೆಯಲ್ಲಿ ಶೇ.60ರಷ್ಟು ಕುಸಿತ ಕಂಡಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಪ್ರತಿದಿನ 8ರಿಂದ 10 ಲಕ್ಷ ಕೋಳಿ ಮಾರಾಟವಾಗುತಿತ್ತು. ರವಿವಾರದಂದು ಈ ಪ್ರಮಾಣ ದುಪ್ಪಟ್ಟು ಇರುತಿತ್ತು. ಈಗ ಪ್ರತಿದಿನ 4ರಿಂದ 5 ಲಕ್ಷ ಕೋಳಿಗಳು ಮಾರಾಟವಾಗುವುದು ಕಷ್ಟವಿದೆ. ಬರೀ ಬೆಂಗಳೂರು ಒಂದರಲ್ಲಿ ಪ್ರತಿದಿನ ಪ್ರತಿದಿನ ಅಂದಾಜು 16 ಲಕ್ಷ ಕೆಜಿ ಕೋಳಿ ಮಾರಾಟವಾಗುತಿತ್ತು. ಈಗ ಆ ಪ್ರಮಾಣ 8 ಲಕ್ಷಕ್ಕೆ ಕುಸಿದಿದೆ. ಇದರ ನೇರ ಪರಿಣಾಮ ಕೋಳಿ ಉತ್ಪಾದಕರು ಹಾಗೂ ಚಿಕನ್ ಶಾಪ್ ಮೇಲೆ ಉಂಟಾಗುತ್ತಿದೆ.
ರೈತರಿಗಿಲ್ಲ ಬೆಲೆ
ಒಂದು ಕೆ.ಜಿ ಕೋಳಿ ಉತ್ಪಾದನೆಗೆ (40ರಿಂದ 45 ದಿನ) ಮರಿ, ಆಹಾರ, ಸಿಬ್ಬಂದಿ ಖರ್ಚು ಸೇರಿ 90 ರೂ. ಆಗುತ್ತದೆ. ಪ್ರಸಕ್ತ ಹೋಲ್ಮಾರಾಟ ಬೆಲೆ ಪ್ರತಿ ಕೆ.ಜಿಗೆ 40ರಿಂದ 45 ರೂ. ಇದೆ. ಆದರೆ ಇದರ ಲಾಭ ಗ್ರಾಹಕರಿಗೆ ಸಿಗುತ್ತಿಲ್ಲ. ಚಿಕನ್ ಶಾಪ್ಗಳಲ್ಲಿ ಕೆ.ಜಿ 180, 200 ರೂ.ವರೆಗೂ ಇದೆ. ಕಟಾವಿಗೆ ಬಂದ ಕೋಳಿಯನ್ನು ಹೆಚ್ಚೆಂದರೆ ಒಂದು ವಾರ ಇಟ್ಟುಕೊಳ್ಳಬಹುದು ಆಮೇಲೆ ಅದು ಆಹಾರವನ್ನು ದುಪ್ಪಟ್ಟು ಸೇವಿಸುತ್ತದೆ. ತೂಕ ಕೂಡ ಹೆಚ್ಚಾಗುವುದಿಲ್ಲ. ಇದೇ ಕಾರಣಕ್ಕೆ ಕೇಳಿದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಮಾರಾಟ ಪ್ರಮಾಣ ಕುಸಿದಿರುವುದರಿಂದ ಲಕ್ಷ ಲಕ್ಷ ಕೋಳಿಗಳು ಫಾರಂನಲ್ಲೇ ಇವೆ. ಇದೇ ಪರಿಸ್ಥಿತಿ ಮುಂದುವರಿದರೆ ಕೋಳಿಯನ್ನು ಮತ್ತೆ ಜೀವಂತ ಹೂತರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಸಮಯ ವಿಸ್ತರಣೆಗೆ ಮನವಿ
ಈಗಿರುವ ಮೂರು ಗಂಟೆ ಮಾರಾಟ ಅವಧಿಯಲ್ಲಿ ಹೆಚ್ಚು ಕೋಳಿಗಳು ಮಾರಾಟ ಆಗುತ್ತಿಲ್ಲ. ಹೆಚ್ಚು ಜನ ಸೇರುವ ಭಯದಿಂದ ಗ್ರಾಹಕರು ಅಂಗಡಿಗಳತ್ತ ಸುಳಿಯುತ್ತಿಲ್ಲ. ಹೀಗಾಗಿ ಈಗಿರುವ ಮಾರಾಟ ಅವಧಿಯನ್ನು ಮಧ್ಯಾಹ್ನ 2 ಗಂಟೆವರೆಗೂ ವಿಸ್ತರಿಸಿದರೆ ಮಾರಾಟ ಪ್ರಮಾಣ ಶೇ.70ಕ್ಕೆ ಹೆಚ್ಚಾಗಬಹುದು. ಇದರಿಂದ ಕೋಳಿ ಸಾಕಣೆದಾರರು ಹಾಗೂ ಚಿಕನ್ ಅಂಗಡಿಗಳಿಗೂ ನಷ್ಟ ಆಗುವುದಿಲ್ಲ ಎನ್ನುತ್ತಾರೆ ನಂದೀಶ್ ಫೌಲ್ಟ್ರಿ ಮಾಲಕ ದಿನೇಶ ಪಟೇಲ್. ಸರಕಾರಕ್ಕೆ ಪೌಲ್ಟ್ರಿ ಫಾರ್ಮಸ್ಸ್ ಆಸೋಸಿಯೇಷನ್ನಿಂದ ಸಮಯ ವಿಸ್ತರಣೆಗೆ ಮನವಿ ಮಾಡಲಾಗಿದೆ. ಸರಕಾರ ಆದಷ್ಟು ಬೇಗ ಮನವಿ ಪರಿಗಣಿಸುವಂತೆ ಅವರು ಒತ್ತಾಯಿಸಿದ್ದಾರೆ.
ದುಪ್ಪಟ್ಟಾಗಲಿದೆ ಬೆಲೆ
ಈಗಿರುವ ಕೋಳಿಗಳು ಮಾರಾಟ ಆಗದ ಪರಿಣಾಮ ಹೊಸದಾಗಿ ಮರಿ ಬಿಡಲು ಹಿಂದೇಟು ಹಾಕುತ್ತಿದ್ದಾರೆ. ಮರಿಗಳು ಮಾರಾಟ ಆಗುತ್ತಿಲ್ಲ. ಹೊಸದಾಗಿ ಮರಿ ಬಿಡಲು ಹಣ ಇಲ್ಲ. ಬ್ಯಾಂಕ್ನಲ್ಲಿ ಹಳೇ ಸಾಲವೇ ತೀರಿಲ್ಲ. 10 ಸಾವಿರ ಕೋಳಿ ಸಾಕಲು 20ರಿಂದ 23 ಲಕ್ಷ ಬೇಕು. ಪ್ರತಿಯೊಬ್ಬರು ಲಾಸ್ನಲ್ಲಿ ಇದ್ದಾರೆ. ಈಗ ಮರಿ ಬಿಡದಿದ್ದರೆ ಮುಂದೆ ಕೋಳಿ ಸಿಗುವುದಿಲ್ಲ. ಆಗ ಕಳೆದ ಬಾರಿಯಂತೆ ಪ್ರತಿ ಕೆ.ಜಿಗೆ 200ರಿಂದ 250 ರೂ. ಸಿಗಬಹುದು ಎನ್ನುತ್ತಾರೆ ಸಾಕಣೆದಾರರು.
ಸರಕಾರದಿಂದ ನಮಗೆ ಪರಿಹಾರ ಬೇಕಿಲ್ಲ. ಈಗಿರುವ ಮಾರಾಟ ಅವಧಿಯನ್ನು ಮಧ್ಯಾಹ್ನ 2 ಗಂಟೆವರೆಗೂ ವಿಸ್ತರಣೆ ಮಾಡಲಿ. ಇದರಿಂದ ಮಾರಾಟ ಹೆಚ್ಚಾಗಿ ಸಾಕಣೆದಾರರಿಗೂ, ಮಾರಾಟಗಾರರಿಗೂ ನಷ್ಟ ಕಡಿಮೆಯಾಗಲಿದೆ. ಕಳೆದ ಬಾರಿ ಲಾಕ್ಡೌನ್ ಕೋಟ್ಯಂತರ ರೂ. ನಷ್ಟ ಅನುಭವಿಸಿದ್ದೇವೆ. ಸರಕಾರ ಎಚ್ಚೆತ್ತು ತಕ್ಷಣ ಪರಿಹಾರ ಸೂಚಿಸಲಿ.
- ದಿನೇಶ್ ಪಟೇಲ್, ಕೋಳಿ ಸಾಕಣೆದಾರರು







