ಕೊರೋನ ಬಾಧಿತ ಪ್ರತಿ ಮನೆಗೆ ಉಚಿತ ಕಿಟ್ ವಿತರಣೆ: ರಮಾನಾಥ ರೈ
ಬಂಟ್ವಾಳ ಕಾಂಗ್ರೆಸ್ ನಿಂದ 'ಇಂದಿರಾ ಕ್ಷೇಮ ನಿಧಿ' ಯೋಜನೆಗೆ ಚಾಲನೆ

ಬಂಟ್ವಾಳ, ಜೂ.7: ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಹಿತ ಪಕ್ಷದ ವಿವಿಧ ಘಟಕಗಳ ಸಹಕಾರದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕೊರೋನ ಸೊಂಕು ಬಾಧಿತ ಪ್ರತಿ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ 'ಇಂದಿರಾ ಕ್ಷೇಮ ನಿಧಿ' ಆರಂಭಿಸಲಾಗಿದ್ದು ಈ ಮೂಲಕ ಪ್ರತಿ ಮನೆಗೆ ದಿನಸಿ ಸಾಮಾಗ್ರಿಗಳ ಕಿಟ್ ವಿತರಿಸಲಾಗುತ್ತದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ಸೋಮವಾರ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇದೊಂದು ಶಾಶ್ವತವಾದ ಯೋಜನೆಯಾಗಿದೆ. ಕೋವಿಡ್ ಸೊಂಕು ಬಾಧಿತರಿಗೆ ನೆರವಾಗುವ ನಿಟ್ಟಿನಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ತರಲಾಗಿದೆ ಎಂದು ತಿಳಿಸಿದರು.
ಕೊರೋನ ಸಂಕಷ್ಟದ ಕಾಲಘಟ್ಟದಲ್ಲಿ ಯಾರೊಬ್ಬರು ಕೂಡ ಹಸಿವಿನಿಂದ ಬಳಲಬಾರದು ಎಂಬ ಕಾರಣಕ್ಕೆ ಆಹಾರ ಒದಗಿಸುವ ಕೆಲಸವನ್ನು ಬಂಟ್ವಾಳ ತಾಲೂಕು ಸಹಿತ ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದಿಂದ ನಿರಂತರವಾಗಿ ನಡೆಸಲಾಗುತ್ತಿದೆ ಎಂದ ಅವರು, ಕೊರೋನದಿಂದಾಗಿ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಜನರಿಗೆ ಅಗತ್ಯ ನೆರವು ನೀಡುವುದರ ಜೊತೆಯಲ್ಲಿ ಕಾಲಕಾಲಕ್ಕೆ ಸರಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿದೆ ಎಂದು ರಮಾನಾಥ ರೈ ಹೇಳಿದರು.
ಕೊರೋನ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸರಕಾರ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದ ಅವರು, ಕೊರೋನ ನಿಗ್ರಹಕ್ಕೆ ಕಾಂಗ್ರೆಸ್ ಪಕ್ಷ ಅಗತ್ಯ ನೆರವನ್ನು ನೀಡುತ್ತಿದ್ದು ದ.ಕ. ಜಿಲ್ಲೆಯ ಪ್ರತೀ ಬ್ಲಾಕ್ ನಲ್ಲೂ ಅಂಬ್ಯುಲೆನ್ಸ್ ಅನ್ನು ಪಕ್ಷದ ವತಿಯಿಂದ ಒದಗಿಸಲಾಗಿದೆ. ಮಂಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲೂ ಸಹಾಯವಾಣಿ ಕೇಂದ್ರ ತೆರೆದು ದಿನದ 24 ಗಂಟೆಯ ಕೆಲಸ ಮಾಡುತ್ತಿದೆ. ಜನರಿಗೆ ಅಗತ್ಯವಾದ ಬೆಡ್, ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ ಮಾತ್ರವಲ್ಲ ಜಾತಿ, ಮತ, ಭೇದವಿಲ್ಲದೆ ಶವ ಸಂಸ್ಕಾರವನ್ನು ನಡೆದಲಾಗಿದೆಯದೆ. ಪ್ಲಾಸ್ಮಾ ನೀಡಿಕೆಯಲ್ಲೂ ಶ್ರಮ ವಹಿಸಿದೆ ಎಂದರು.
ಕರ್ನಾಟಕದ ಎಲ್ಲಾ ಕಾಂಗ್ರೆಸ್ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಸಹಿತ ಒಟ್ಟು 100 ಕೋಟಿ ರೂ. ಅನುದಾನವನ್ನು ಕೊರೋನ ಲಸಿಕೆಗೆ ಬಳಸಲು ಅನುಮತಿಗಾಗಿ ಸರಕಾರಕ್ಕೆ ಮನವಿ ಮಾಡಿದ್ದರೂ ಈ ಕುರಿತು ಸರಕಾರ ಇದುವರೆಗೂ ಮಂಜೂರಾತಿ ನೀಡಿಲ್ಲ ಎಂದವರು ಆರೋಪಿಸಿದರು.
ಆರಂಭಿಕ ಹಂತದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಕೈಗೊಂಡ ತಪ್ಪು ನಿರ್ಧಾರಗಳಿಂದ ಕೊರೋನ ಸೋಂಕು ಉಲ್ಭಣಗೊಂಡಿದೆ ಎಂದ ಅವರು, ಕೊರೋನ ನಿಗ್ರಹದ ಪ್ರತೀ ಹಂತದಲ್ಲೂ ಸರಕಾರ ಎಡವಿದೆ. ಕೊರೋನಾ ರೋಗಿಗಳಿಗೆ ಆಮ್ಲಜನಕ ಸಿಗದೇ ಇದ್ದಾಗ ಜನರಿಗೆ ಆಕ್ಸಿಜನ್ ಒದಗಿಸಲು ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಬೇಕಾಯಿತು. ಇದು ದುರ್ದೈವದ ಸಂಗತಿ ಎಂದರು.
ಕೊರೋನ ಸಂಕಷ್ಟದ ಕಾಲದಲ್ಲಿಯೂ ಇಂಧನ ಬೆಲೆ ಏರಿಕೆ ಮಾಡಲಾಗುತ್ತಿದೆ. ಇದರಿಂದ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಿದೆ. ಇಂತಹಾ ಸ್ಥಿತಿಯಲ್ಲಿ ಮಾಧ್ಯಮಗಳು, ಜನರು ಕೂಡ ಕಾಂಗ್ರೆಸ್ ಪಕ್ಷದ ಹೋರಾಟದಲ್ಲಿ ಧ್ವನಿಯಾಗಬೇಕಿದೆ ಎಂದವರು ಹೇಳಿದರು.
ಗುತ್ತಿಗೆದಾರರ ಹೆಸರಲ್ಲಿ ಕಾರ್ಯಕರ್ತರ ಕೆಲಸ
ಗುತ್ತಿಗೆದಾರರ ಹೆಸರಿನಲ್ಲಿ ಟೆಂಡರ್ ಪಡೆದು ಅದನ್ನು ಪಕ್ಷದ ಕಾರ್ಯಕರ್ತರು ನಿರ್ವಹಿಸುವ ಘಟನೆಗಳು ಬಂಟ್ವಾಳ ಕ್ಷೇತ್ರದಲ್ಲಿ ಕಂಡು ಬರುತ್ತಿದೆ. ತನ್ನ ಅವಧಿಯಲ್ಲಿ ಇಂತಹಾ ಕೆಲಸವನ್ನು ತಾನು ಮಾಡಿಲ್ಲ ಎಂದರು.
ಕಾಂಗ್ರೆಸ್ ಸರಕಾರವಿದ್ದಾಗ ಕೊಡಿಸಲಾದ ಬಿಪಿಎಲ್ ಕಾರ್ಡ್ ಗಳನ್ನು ಈಗ ರಾಜ್ಯ ಸರಕಾರ ರದ್ದು ಮಾಡುತ್ತಿದೆ. ಅದನ್ನು ವಾಪಾಸು ಕೊಡಿಸುವ ನಿಟ್ಟಿನಲ್ಲಿ ಸರಕಾರ ಕ್ರಮಕೈಗೊಳ್ಳಬೇಕು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಆಶ್ರಯ ಸಹಿತ ವಿವಿಧ ಯೋಜನೆಯಲ್ಲಿ ಒಂದೇ ಒಂದು ಮನೆ ಕೊಟ್ಟಿಲ್ಲ. ಮನೆಗಳನ್ನು ನೀಡಿದ ದಾಖಲೆಗಳಿದ್ದರೆ ನಾನು ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಅವರು ಸವಾಲೆಸೆದರು.
ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಅವರು "ಇಂದಿರಾ ಕ್ಷೇಮ ನಿಧಿ" ಯೋಜನೆಗೆ ಚಾಲನೆ ನೀಡಿ ಮಾತನಾಡಿ, ತಜ್ಞರ ಪ್ರಕಾರ ಕೊರೋನದಿಂದ ಮುಕ್ತವಾಗಲು ಲಸಿಕೆ ಪಡೆಯುವುದರಿಂದ ಸಾಧ್ಯ. ಕೊರೋನ ಸಾಂಕ್ರಾಮಿಕ ರೋಗವನ್ನು ನಡುವೆ ಗ್ರಹಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
ಬಂಟ್ವಾಳ ಪುರಸಭಾ ಅಧ್ಯಕ್ಷ ಮುಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ, ಜಿಪಂ ಸದಸ್ಯರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್.ಮುಹಮ್ಮದ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಎಪಿಎಂಸಿ ಮಾಜಿ ಅಧ್ಯಕ್ಷ ಪದ್ಮನಾಭ ರೈ, ಭೂ ಬ್ಯಾಂಕ್ ನ ಅಧ್ಯಕ್ಷ ಸುದರ್ಶನ ಜೈನ್, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೋಹರ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಆಧ್ಯಕ್ಷ ಇಬ್ರಾಹೀಂ ನವಾಝಾ, ಪುರಸಭಾ ಸದಸ್ಯರಾದ ಗಂಗಾಧರ ಪೂಜಾರಿ, ಜನಾರ್ಧನ ಚೆಂಡ್ತಿಮಾರ್, ಸಿದ್ದೀಕ್ ಹಾಗೂ ವೆಂಕಪ್ಪ ಪೂಜಾರಿ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.
ಬಂಟ್ಚಾಳ ಬ್ಲಾಕ್ ಆಧ್ಯಕ್ಷ ಬೇಬಿ ಕುಂದರ್ ಸ್ವಾಗತಿಸಿದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ವಂದಿಸಿದರು.






.jpeg)

.jpeg)

