ಉಡುಪಿ : ಶಾಸಕರ ನೇತೃತ್ವದ ಹಡಿಲು ಭೂಮಿ ಕೃಷಿ ಕಾರ್ಯಕ್ರಮದಲ್ಲಿ ಜನಸ್ತೋಮ !
► ಉನ್ನತ ಅಧಿಕಾರಿಗಳೇ ಭಾಗಿ ► ಕೊರೋನ ಸೋಂಕು ಹರಡುವ ಭೀತಿ

ಉಡುಪಿ, ಜೂ.12: ಉಡುಪಿ ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಕೇದಾರೋತ್ಥಾನ ಟ್ರಸ್ಟ್ ಹಮ್ಮಿಕೊಳ್ಳುತ್ತಿರುವ ಹಡಿಲು ಭೂಮಿ ಕೃಷಿ ಆಂದೋಲನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಯಾವುದೇ ಸುರಕ್ಷಿತ ಅಂತರ ಇಲ್ಲದೆ ಸೇರುವ ಮೂಲಕ ಕೋವಿಡ್-19 ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ದೂರುಗಳು ಕೇಳಿ ಬರುತ್ತಿವೆ.
ಜನಸ್ತೋಮ ಸೇರುವ ಇಂತಹ ಕಾರ್ಯಕ್ರಮದಲ್ಲಿ ಉನ್ನತಾಧಿಕಾರಿಗಳು, ಜಿಪಂ ಸಿಇಓಗಳೇ ಭಾಗವಹಿಸುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಸುಮಾರು 2000 ಎಕರೆ ಹಡಿಲು ಭೂಮಿಯಲ್ಲಿ ಕೃಷಿ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ಜೂ.5ರಂದು ಕಡೆಕಾರು ಗ್ರಾಪಂ ವ್ಯಾಪ್ತಿಯ ಕುತ್ಪಾಡಿ ಸಸಿತೋಟ ಎಂಬಲ್ಲಿ ಚಾಲನೆ ನೀಡಲಾಗಿತ್ತು.
ಈ ಕಾರ್ಯಕ್ರಮದಲ್ಲೂ ನೂರಾರು ಮಂದಿ ಸಾರ್ವ ಜನಿಕರು ಭಾಗವಹಿಸಿದ್ದರು. ನಂತರ ಜೂ.9ರಂದು ಅಂಬಲಪಾಡಿಯಲ್ಲಿ ಕೂಡ ಇದೇ ರೀತಿ ನೂರಾರು ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಲಾಗಿತ್ತು. ಜೂ.11ರಂದು ಕಡೆಕಾರ್ ಗ್ರಾಪಂ ವ್ಯಾಪ್ತಿಯ ಆಯುರ್ವೇದಿಕ್ ಆಸ್ಪತ್ರೆಯ ಹಿಂಬದಿ ಬಳಿ ನಡೆದ ಕಾರ್ಯ ಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರೇ ಚಾಲನೆ ನೀಡಿದ್ದರು.
ಇಂದು ಕೆಮ್ಮಣ್ಣು ಗ್ರಾಪಂ ವ್ಯಾಪ್ತಿಯ ಪಡುತೋನ್ಸೆ ಯಾಳಕೆರೆ ಮನೆ ಬಳಿ 15 ಎಕರೆ ಹಡಿಲು ಕೃಷಿ ಭೂಮಿಯ ನಾಟಿ ಕಾರ್ಯಕ್ಕೆ ಚಾಲನೆ ನೀಡ ಲಾಯಿತು. ಇದರಲ್ಲಿ 200ಕ್ಕೂ ಅಧಿಕ ಮಂದಿ ಯಾವುದೇ ಸುರಕ್ಷಿತ ಅಂತರ ಇಲ್ಲದೇ ಒಟ್ಟಾಗಿ ಸೇರಿರುವುದು ಬಹಳಷ್ಟು ವಿವಾದಕ್ಕೆ ಕಾರಣವಾಗಿದೆ.
ಜನಸ್ತೋಮದ ಮಧ್ಯೆ ಸೋದೆ ಮಠದ ವಿಶ್ವವಲ್ಲಭ ಶ್ರೀ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್ ಅವರೊಂದಿಗೆ ಶಾಸಕ ಕೆ. ರಘು ಪತಿ ಭಟ್ ಕೋಣಗಳಿಗೆ ಪೂಜೆ ಮಾಡಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು. ಬಳಿಕ ಇವರೆಲ್ಲರು ಸ್ಥಳೀಯರೊಂದಿಗೆ ಗದ್ದೆಗಳಿದು ನೇಜಿ ನೆಟ್ಟರು.
ಗ್ರಾಮೀಣ ಪ್ರದೇಶದಲ್ಲಿ ವ್ಯಾಪಾಕವಾಗಿ ಹರಡಿದ್ದ ಕೊರೋನ ಸೋಂಕು ಇದೀಗ ನಿಯಂತ್ರಣಕ್ಕೆ ಬರುತ್ತಿರುವಾಗಲೇ ಈ ರೀತಿ ನೂರಾರು ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸುತ್ತಿರುವ ಬಗ್ಗೆ ಟೀಕೆಗಳು ಕೇಳಿಬರುತ್ತಿವೆ. ಇಂತಹ ಕಾರ್ಯಕ್ರಮಗಳಿಂದ ಸ್ಥಳೀಯವಾಗಿ ಕೊರೋನ ಸೋಂಕು ಹರಡುವ ಭೀತಿ ಕೂಡ ಎದುರಾಗಿದೆ. ಕ್ರಮ ತೆಗೆದುಕೊಳ್ಳಬೇಕಾದ ಅಧಿಕಾರಿಗಳೇ ಇದರಲ್ಲಿ ಭಾಗ ವಹಿಸುತ್ತಿರುವ ಬಗ್ಗೆಯೂ ಆರೋಪಗಳು ವ್ಯಕ್ತವಾಗುತ್ತಿದೆ.
''ಶಾಸಕರ ಜೊತೆ ಮಾತನಾಡಿದ್ದೇನೆ. ಹಡಿಲು ಕೃಷಿಭೂಮಿಗೆ ಚಾಲನೆ ನೀಡುವಾಗ ಜನ ಸೇರಿಸಿ, ಕಾರ್ಯಕ್ರಮ ಮಾಡಲು ಅವಕಾಶ ಮಾಡಿ ಕೊಡಬೇಡಿ. ಲಾಕ್ ಡೌನ್ ಸಮಯದಲ್ಲಿ ಕೃಷಿ ಚಟುವಟಿಕೆಗೆ ಯಾವುದೇ ನಿರ್ಬಂಧ ಇಲ್ಲ. ಕೊರೋನ ಮಾರ್ಗಸೂಚಿ ಅನುಸರಿಸಿ ಕೃಷಿ ಚಟುವಟಿಕೆ ಮಾಡಲು ಶಾಸಕರ ಜೊತೆ ಸಮಾಲೋಚನೆ ಮಾಡಲಾಗಿದೆ''.
-ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ









