ತಂಬಾಕು ಮುಕ್ತ ಜಿಲ್ಲೆಯಾಗಿಸಲು ಕೈ ಜೋಡಿಸಿ: ಉಡುಪಿ ಡಿಸಿ
ಉಡುಪಿ, ಜೂ.12: ತಂಬಾಕು ಉತ್ಪನ್ನಗಳ ಸೇವನೆಯಿಂದ ಪ್ರತಿ ವರ್ಷ 8 ಮಿಲಿಯನ್ ಜನರು ಸಾವನ್ನಪ್ಪುತಿದ್ದಾರೆ. ನೇರವಾಗಿ ತಂಬಾಕು ಉತ್ಪನ್ನಗಳ ಸೇವನೆಯಿಂದಲೇ 7 ಮಿಲಿಯನ್ ಜನರು ಸಾವಿಗೀಡಾಗುತ್ತಾರೆ. ಭಾತದಲ್ಲಿ ಪ್ರತಿದಿನ 3,500 ಸಾವುಗಳು ತಂಬಾಕು ಉತ್ಪನ್ನಗಳ ಬಳಕೆಯಿಂದ ಸಂಭವಿಸುತ್ತಿದೆ.
ಭಾರತದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ 26.7 ಕೋಟಿ (ಶೇ.28.6) ಜನರು ತಂಬಾಕು ಉತ್ಪನ್ನಗಳ ಬಳಕೆ ಮಾಡುತಿದ್ದಾರೆ. 1.2 ಮಿಲಿಯ ಜನರು ಪರೋಕ್ಷ ಧೂಮಪಾನಕ್ಕೆ ತುತ್ತಾಗುತ್ತಾರೆ. ವಿಶ್ವದಾದ್ಯಂತ ಪ್ರತಿ ವರ್ಷ 9 ಮಿಲಿಯ ಜನರು ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ರಕ್ತನಾಳದ ಕಾಯಿಲೆ, ಮಧುಮೇಹ, ದೀರ್ಘಕಾಲದ ಶ್ವಾಶಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ, ಪಾರ್ಶ್ವವಾಯು, ಬಂಜೆತನ, ಕುರುಡುತನ, ಕ್ಷಯ ಮತ್ತು ಬಾಯಿ ಕ್ಯಾನ್ಸರ್ ಇತ್ಯಾದಿ ಅಪಾಯಕಾರಿ ಕಾಯಿಲೆಳಿಗೆ ತುತ್ತಾಗಿ ಸಾವಿಗೀಡಾಗುತಿದ್ದಾರೆ.
ತಂಬಾಕು ಉತ್ಪನ್ನಗಳನ್ನು ಅಗಿಯುವುದು ಮತ್ತು ಉಗುಳುವುದರಿಂದ ಕೋವಿಡ್-19 ಸೋಂಕು ಇತರರಿಗೆ ಹರಡುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮನ್ನು ಮತ್ತು ಇತರರನ್ನು ಕೋವಿಡ್-19ರಿಂದ ರಕ್ಷಿಸಲು ಧೂಮಪಾನದಿಂದ ದೂರವಿರಿ. ಧೂಮಪಾನವು ನಿಮ್ಮ ಶ್ವಾಸಕೋಶ ಮತ್ತು ಇತರೆ ಅಂಗಗಳನ್ನು ಹಾನಿಗೊಳಿಸಿ, ಕೋವಿಡ್-19 ಕಾರಣದಿಂದಾಗಿ ಹೆಚ್ಚಿನ ಅಪಾಯನ್ನುಂಟು ಮಾಡಬಹುದು. ಧೂಮಪಾನ ಮಾಡುವಾಗ ನಿಮ್ಮ ಕೈಯಿಂದ ಬಾಯಿಗೆ ಕೋವಿಡ್-19 ಸೋಂಕು ಹರಡುವ ಅಪಾಯ ಹೆಚ್ಚಾಗಿರುತ್ತದೆ.
ಈ ವರ್ಷದ ವಿಶ್ವ ತಂಬಾಕು ರಹಿತ ದಿನದ ಘೋಷ ವಾಕ್ಯ ‘ತ್ಯಜಿಸಲು ಸಿದ್ದರಾಗಿ’ ಎಂಬುದಾಗಿದೆ. ಅದರಂತೆ ಸಾರ್ವಜನಿಕರು ತಂಬಾಕು ಬಿಡಲು ದೃಢ ನಿರ್ಧಾರ ಮಾಡಬೇಕಾಗಿದ್ದು ಜಿಲ್ಲೆಯನ್ನು ತಂಬಾಕು ಮುಕ್ತ ಜಿಲ್ಲೆಯಾಗಿ ಪರಿವರ್ತಿಸುವಲ್ಲಿ ಕೈ ಜೋಡಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯ ತಂಬಾಕು ನಿಯಂತ್ರಣ ಕೋಶ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಹಯೋಗದೊಂದಿಗೆ 2014ರಲ್ಲಿ ಉಡುಪಿ ಜಿಲ್ಲೆಯನ್ನು ಕೋಟ್ಪಾ -2003 ಕಾಯ್ದೆಯ ಉನ್ನತ ಅನುಷ್ಠಾನ ಜಿಲ್ಲೆ ಎಂದು ಘೋಷಿಸಲಾಗಿತ್ತು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪೊಲೀಸ್, ಆರೋಗ್ಯ, ಶಿಕ್ಷಣ, ಅಬಕಾರಿ, ನಗರಸಭೆ ಹಾಗೂ ಕಂದಾಯ ಇಲಾಖೆಗಳನ್ನೊಳಗೊಂಡ ತಂಬಾಕು ನಿಯಂತ್ರಣ ಸಮಿತಿ ರಚನೆಯಾಗಿದ್ದು, ಇದು ಜಿಲ್ಲೆಯಲ್ಲಿ ಕೋಟ್ಪಾ-2003 ದಾಳಿಯನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ 2017ರಿಂದ ಇಲ್ಲಿಯವರೆಗೆ ಸುಮಾರು 6,284 ಪ್ರಕರಣಗಳನ್ನು ದಾಖಲಿಸಿಕೊಂಡು, 8,79,995ರೂ. ದಂಡ ವಸೂಲು ಮಾಡಿದೆ. ಇದರೊಂದಿಗೆ ಜನರಲ್ಲಿ ಅರಿವು ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ಸಹ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ನಿರಂತರವಾಗಿ ಮಾಡುತ್ತಿದೆ.
ಜಿಲ್ಲೆಯ ಜನತೆಗೆ ತಂಬಾಕು ವ್ಯಸನದಿಂದ ಹೊರಬರಲು ಉಡುಪಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ (ಕೊಠಡಿ ಸಂಖ್ಯೆ:22) ತಂಬಾಕು ವ್ಯಸನ ಮುಕ್ತ ಕೇಂದ್ರದ ವ್ಯವಸ್ಥೆ ಇದ್ದು, ಸಾರ್ವಜಿನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾದಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.







