ಅನ್ ಲಾಕ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ: ಅಧಿಕಾರಿಗಳಿಗೆ ಡಿಸಿ ಜಗದೀಶ್ ಸೂಚನೆ

ಉಡುಪಿ, ಜೂ.12: ಜಿಲ್ಲೆಯಲ್ಲಿ ಜೂ.14ರಿಂದ ಪ್ರಾರಂಭಗೊಳ್ಳುವ ಲಾಕ್ ಡೌನ್ ಅನ್ಲಾಕ್ ಅವಧಿಯಲ್ಲಿ ಸರಕಾರದ ಮಾರ್ಗಸೂಚಿಯಲ್ಲಿ ತಿಳಿಸಿರುವ ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಿ. ಮಾರ್ಗಸೂಚಿಗಳ ಉಲ್ಲಂಘನೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ತಹಶೀಲ್ದಾರ್ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟ ಸೂಚನೆ ನೀಡಿದ್ದಾರೆ.
ಶನಿವಾರ ಈ ಕುರಿತು ವಿಡಿಯೋ ಸಂವಾದದ ಮೂಲಕ ಎಲ್ಲಾ ಅಧಿಕಾರಿಗಳಿಗೆ ಸೋಮವಾರದಿಂದ ಅನುಷ್ಠಾನಗೊಳ್ಳುವ ಅನ್ ಲಾಕ್ ಪ್ರಕ್ರಿಯೆ ಕುರಿತಂತೆ ಸೂಚನೆಗಳನ್ನು ನೀಡಿದರು.
ಜಿಲ್ಲೆಯಲ್ಲಿ ಕೋವಿಡ್ ನಿರ್ಬಂಧಗಳನ್ನು ಎಲ್ಲಾ ಅಧಿಕಾರಿಗಳು ಮತ್ತು ಗ್ರಾಪಂ ಗಳ ಸಹಕಾರದಿಂದ ಯಶಸ್ವಿಯಾಗಿ ಅನುಷ್ಠಾನ ಮಾಡಿದರ ಫಲವಾಗಿ ಜಿಲ್ಲೆಯಲ್ಲಿ ಸೋಂಕು ಹರಡುವುದು ಗಣನೀಯವಾಗಿ ಕಡಿಮೆಯಾಗಿದೆ. ಇದೇ ಕಾರಣದಿಂದ ಸರಕಾರ ಜಿಲ್ಲೆಯಲ್ಲಿ ಅನ್ಲಾಕ್ ಘೋಷಣೆ ಮಾಡಿದೆ. ಈ ಕುರಿತಂತೆ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಜಿಲ್ಲೆಯ ಪಾಸಿಟಿವಿಟಿ ದರವನ್ನು ಶೂನ್ಯಕ್ಕೆ ಇಳಿಸಬೇಕು ಎಂದವರು ಹೇಳಿದರು.
ಸೋಮವಾರ ಬೆಳಗ್ಗೆ 6:00 ಗಂಟೆಯಿಂದಲೇ ಎಲ್ಲ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಮಾರ್ಗಸೂಚಿಯಲ್ಲಿ ಅನುಮತಿಸಲಾದ ಚಟುವಟಿಕೆಗಳನ್ನು ಹೊರತುಪಡಿಸಿ ಇತರ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ ಎಂಬುದನ್ನು ಖುದ್ದಾಗಿ ಪರಿಶೀಲಿಸಬೇಕು. ಮಾರ್ಗಸೂಚಿಯಲ್ಲಿ ಇಲ್ಲದ ಯಾವುದೇ ಚಟುವಟಿಕೆ ನಡೆಯುತ್ತಿದ್ದಲ್ಲಿ ಅಂತಹ ಅಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಯಾವುದೇ ಸಾರ್ವಜನಿಕ ಸಮಾರಂಭಗಳು, ಸನ್ಮಾನ ಕಾರ್ಯ ಕ್ರಮಗಳು ನಡೆಯದಂತೆ ಅಧಿಕಾರಿಗಳು ಗಮನಹರಿಸಬೇಕು. ಕಾರ್ಯಕ್ರಮಗಳು ನಡೆದಲ್ಲಿ ಸಂಬಂಧಪಟ್ಟ ಆಯೋಜಕರ ವಿರುದ್ಧ ಕ್ರಮ ಕೆಗೊಳ್ಳುವಂತೆ ಸೂಚನೆ ನೀಡಿದರು.
ಮದುವೆಗೆ ಮಾತ್ರ ಅವಕಾಶ: ಅನ್ಲಾಕ್ ಅವಧಿಯಲ್ಲಿ ಮದುವೆಗಳಿಗೆ ಮಾತ್ರ ಅನುಮತಿ ನೀಡಿದ್ದು, ಮದುವೆ ಹೊರತುಪಡಿಸಿ ಇತರ ಯಾವುದೇ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟಪಡಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಕೋವಿಡ್ ನಿಯಂತ್ರಣಕ್ಕೆ ನಿಯೋಜಿಸಲಾದ ಫ್ಲೈಯಿಂಗ್ ಸ್ಕ್ವಾಡ್ಗಳವರು ಭಾಗವಹಿಸಿದ್ದರು.
ಒಂದು ವಾರ 144 ನಿಷೇಧಾಜ್ಞೆ
ಉಡುಪಿ ಜಿಲ್ಲೆಯಲ್ಲಿ ಕೋವಿಡ್-19ರ ಹೊಸ ಪ್ರಕರಣಗಳು ಹಾಗೂ ಪಾಸಿಟಿವ್ ದರ ಕಡಿಮೆಯಾಗುತ್ತಿರುವ ಹಿನ್ನೆಲೆ ಯಲ್ಲಿ, ಸರಕಾರ ಕೆಲವೊಂದು ನಿಯಮಗಳನ್ನು ಸಡಿಲಗೊಳಿಸಿ ಆದೇಶ ಹೊರಡಿಸಿದ್ದು, ಅದರಂತೆ ಕೋವಿಡ್-19 ಸೋಂಕು ಪ್ರಸರಣದ ಸರಪಳಿಯನ್ನು ಮುರಿದು ಜಿಲ್ಲೆಯನ್ನು ಕೊರೋನಾ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಜೂ.14ರ ಬೆಳಗ್ಗೆ 6:00ರಿಂದ ಜೂ.21ರ ಬೆಳಗ್ಗೆ 6:00 ಗಂಟೆಯವರೆಗೆ ಸಿಆರ್ಪಿಸಿ ಸೆಕ್ಷನ್ 144(3)ನ್ನು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಅನ್ವಯವಾಗುವಂತೆ ಹೊರಡಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.
ಮದುವೆಗೆ 40 ಮಂದಿಗೆ ಮಾತ್ರ ಅವಕಾಶ
ಸೂಕ್ತ ಅನುಮತಿಯೊಂದಿಗೆ ಗರಿಷ್ಠ 40 ಮಂದಿ ಮೀರದಂತೆ ಮದುವೆಗಳನ್ನು ಮನೆಗಳಲ್ಲಿ ನಡೆಸಲು ಅನುಮತಿಯಿದ್ದು, ಶವ ಸಂಸ್ಕಾರದಲ್ಲಿ ಗರಿಷ್ಠ 5 ಮಂದಿ ಮಾತ್ರ ಭಾಗವಹಿಸಬಹುದಾಗಿದೆ ಎಂದು ವೀಡಿಯೊ ಸಂದೇಶವೊಂದರಲ್ಲಿ ತಿಳಿಸಿದ ಜಿಲ್ಲಾದಿಕಾರಿ, ಇದನ್ನು ಹೊರತು ಪಡಿಸಿ ಮೆಹಂದಿ, ಗೃಹಪ್ರವೇಶ ಸೇರಿದಂತೆ ಇತರ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿಲ್ಲ ಎಂದು ಹೇಳಿದರು.
ಜಿಲ್ಲೆಯ ಪಾಸಿಟಿವ್ ಪ್ರಮಾಣ ಈಗ ಶೇ.6ಕ್ಕೆ ಇಳಿದಿದೆ. ಇದರಿಂದ ಸರಕಾರ ಲಾಕ್ಡೌನ್ನಲ್ಲಿ ಕೆಲವೊಂದು ವಿನಾಯಿತಿಗಳನ್ನು ನಮಗೆ ನೀಡಿದೆ. ಇವುಗಳಲ್ಲಿ ಮುಖ್ಯವಾದುದು ಅಗತ್ಯ ವಸ್ತುಗಳ ಖರೀದಿಗೆ ಅವಕಾಶದೊಂದಿಗೆ, ಕಟ್ಟಡ ಸಾಮಗ್ರಿಗಳನ್ನು ಮಾರುವ ಅಂಗಡಿಗಳನ್ನು ತೆರೆಯಲು ಸಹ ಅವಕಾಶ ನೀಡಲಾಗಿದೆ. ಇದರಲ್ಲಿ ಹಾರ್ಡ್ವೇರ್, ಗ್ರಾನೈಟ್ ಹಾಗೂ ಇಲೆಕ್ಟ್ರಿಕಲ್ ಅಂಗಡಿಗಳನ್ನು ತೆರೆಯಬಹುದಾಗಿದೆ ಎಂದರು.
ಹೊಟೇಲ್, ರೆಸ್ಟೋರೆಂಟ್, ಬೇಕರಿಗಳಲ್ಲಿ ಪಾರ್ಸೆಲ್ಗೆ ಅವಕಾಶವಿದೆ. ಗೇರುಬೀಜ ಕಾರ್ಖಾನೆ ಸೇರಿದಂತೆ ಎಲ್ಲಾ ಪ್ಯಾಕ್ಟರಿಗಳನ್ನು ಶೇ.50 ಸಿಬ್ಬಂದಿ ಗಳೊಂದಿಗೆ ಮಾತ್ರ ತೆರೆಯಬಹುದು. ಆದರೆ ಗಾರ್ಮೆಂಟ್ ಪ್ಯಾಕ್ಟರಿಗೆ ಶೇ.30ರಷ್ಟು ಸಿಬ್ಬಂದಿಗಳಿಗೆ ಮಾತ್ರ ಅವಕಾಶ ಎಂದರು. ಆಟೋ-ಟ್ಯಾಕ್ಸಿ ಕೇವಲ ಇಬ್ಬರು ಪ್ರಯಾಣಿಕರನ್ನು ಸಾಗಿಸಬಹುದು.
ಅಗತ್ಯವಸ್ತುಗಳ ಖರೀದಿಗೆ ಅಂಗಡಿಗಳು ಬೆಳಗ್ಗೆ 6ರಿಂದ ಅಪರಾಹ್ನ 2:00 ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಅಂಗಡಿಯವರು ಸುರಕ್ಷತಾ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪಾಲಿಸದವರ ಅಂಗಡಿಯನ್ನು ತೆರೆಯಲು ಅವಕಾಶ ನೀಡುವುದಿಲ್ಲ ಎಂದರು.







