ಉಡುಪಿ ಜಿಲ್ಲೆಯಲ್ಲಿ 223 ಮಂದಿಗೆ ಕೊರೋನ ಸೋಂಕು, ನಾಲ್ವರು ಬಲಿ

ಉಡುಪಿ, ಜೂ.13: ರವಿವಾರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ನಾಲ್ವರು ಮೃತಪಟ್ಟಿದ್ದಾರೆ. ದಿನದಲ್ಲಿ 223 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. 345 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿದ್ದು, ಸದ್ಯ 3222 ಮಂದಿ ಸಕ್ರಿಯ ಸೋಂಕಿತರು ಜಿಲ್ಲೆಯಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಇಂದು ಮೃತಪಟ್ಟ ನಾಲ್ವರಲ್ಲಿ ಮೂವರು ಮಹಿಳೆಯರು (75, 76, 71 ವರ್ಷ) ಹಾಗೂ ಒಬ್ಬ ಪುರುಷ (72 ವರ್ಷ) ಸೇರಿದ್ದಾರೆ. ಇವರಲ್ಲಿ ತಲಾ ಇಬ್ಬರು ಕುಂದಾಪುರ ಮತ್ತು ಉಡುಪಿ ತಾಲೂಕಿನವರು. ಈಗ ಸಾಮಾನ್ಯವಾಗಿ ರುವಂತೆ ಎಲ್ಲರೂ ಕೋವಿಡ್ ಗುಣಲಕ್ಷಣದೊಂದಿಗೆ ತೀವ್ರವಾದ ಉಸಿರಾಟ ತೊಂದರೆ ಹಾಗೂ ನ್ಯುಮೋನಿಯಾದಿಂದ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 360ಕ್ಕೇರಿದೆ.
ಶನಿವಾರ ಪಾಸಿಟಿವ್ ಬಂದ 223 ಮಂದಿಯಲ್ಲಿ 103 ಮಂದಿ ಪುರುಷರು ಹಾಗೂ 120 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 105, ಕುಂದಾಪುರ ತಾಲೂಕಿನ 61 ಹಾಗೂ ಕಾರ್ಕಳ ತಾಲೂಕಿನ 51 ಮಂದಿ ಇದ್ದು, ಉಳಿದ ಆರು ಮಂದಿ ಹೊರಜಿಲ್ಲೆಗಳಿಂದ ಚಿಕಿತ್ಸೆಗೆಂದು ಬಂದವರು. ಇವರಲ್ಲಿ 22 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 201 ಮಂದಿ ಹೋಮ್ ಐಸೋೇಷನ್ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ನಿನ್ನೆ ಒಟ್ಟು 345 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 60,695ಕ್ಕೇರಿದೆ. ಶನಿವಾರ ಜಿಲ್ಲೆಯ 6050 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 64,277 ಆಗಿದೆ ಎಂದು ಡಾ.ಉಡುಪ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 6,39,153 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
965 ಮಂದಿಗೆ ಲಸಿಕೆ: ರವಿವಾರ ಜಿಲ್ಲೆಯ ಒಟ್ಟು 965 ಮಂದಿ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಇವರಲ್ಲಿ 861 ಮಂದಿ ಮೊದಲ ಡೋಸ್ ಪಡೆದರೆ, 104 ಮಂದಿ ಎರಡನೇ ಡೋಸ್ ಸ್ವೀಕರಿಸಿದ್ದಾರೆ. 18ರಿಂದ 44ವರ್ಷದೊಳಗಿನ 621 ಮಂದಿ ಮೊದಲ ಡೋಸ್, 45 ವರ್ಷ ಮೇಲಿನ 340 ಮಂದಿ, ನಾಲ್ವರು ಆರೋಗ್ಯ ಕಾರ್ಯಕರ್ತರು ಇಂದು ಲಸಿಕೆ ಸ್ವೀಕರಿಸಿದ್ದವರಲ್ಲಿ ಸೇರಿದ್ದಾರೆ.
ದಾವಣಗೆರೆಯ ಮಹಿಳೆಯಲ್ಲಿ ಕಪ್ಪು ಶಿಲೀಂದ್ರ ಸೋಂಕು
ಮಣಿಪಾಲದ ಕೆಎಂಸಿಯಲ್ಲಿ ಚಿಕಿತ್ಸೆಗೆ ದಾಖಲಾದ ದಾವಣಗೆರೆಯ 45ರ ಹರೆಯದ ಮಹಿಳೆಯಲ್ಲಿ ಕಪ್ಪು ಶಿಲೀಂದ್ರ ಸೋಂಕು ಪತ್ತೆಯಾಗಿದೆ. ಇದೀಗ ಆಕೆ ಅಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಜಿಲ್ಲೆಯಲ್ಲೀಗ 7 ಮಂದಿ ಕಪ್ಪು ಶಿಲೀಂದ್ರ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ. ಇವರಲ್ಲಿ ನಾಲ್ವರು ಮಣಿಪಾಲ ಕೆಎಂಸಿಯಲ್ಲಿ ಹಾಗೂ ಉಳಿದ ಮೂವರು ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಸೋಂಕಿಗೆ ಚಿಕಿತ್ಸೆಯಲ್ಲಿದ್ದಾರೆ ಎಂದು ಡಿಎಚ್ಓ ಡಾ.ಉಡುಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಇಬ್ಬರು ಸೋಂಕಿಗೆ ಬಲಿಯಾದರೆ, 14 ಮಂದಿ ಚಿಕಿತ್ಸೆಯ ಬಳಿಕ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.







