ಹುಟ್ಟೂರು ಪಂಚನಹಳ್ಳಿಯಲ್ಲಿ ನಟ ಸಂಚಾರಿ ವಿಜಯ್ ಅಂತ್ಯಸಂಸ್ಕಾರ
ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ನಮನ

ಚಿಕ್ಕಮಗಳೂರು, ಜೂ.15: ರಂಗಭೂಮಿ ಕಲಾವಿದ, ಕನ್ನಡ ಚಲನ ಚಿತ್ರರಂಗದ ಅಪರೂಪದ ಕಲಾವಿದ, ರಾಷ್ಟ್ರ ಪಶಸ್ತಿ ವಿಜೇತ ನಾಡಿನ ಮೂರನೇ ಸಿನೆಮಾ ನಟ ಸಂಚಾರಿ ವಿಜಯ್(38) ಅವರ ಮೃತದೇಹದ ಅಂತ್ಯಸಂಸ್ಕಾರವನ್ನು ಹುಟ್ಟೂರು ಪಂಚನಹಳ್ಳಿಯಲ್ಲಿ ಸ್ನೇಹಿತ ರಾಘವೇಂದ್ರ ಅವರ ತೋಟದಲ್ಲಿ ನೆರವೇರಿಸಲಾಯಿತು.
ಬೆಂಗಳೂರಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸಂಚಾರಿ ವಿಜಯ್ ಅವರ ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಕಳೆದ ಮೂರು ದಿನಗಳಿಂದ ಅಪೋಲೋ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಆಸ್ಪತ್ರೆಯ ಹೆಲ್ತ್ ಬುಲಿಟಿನ್ನಲ್ಲಿ ವಿಜಯ್ ಅವರ ನಿಧನವನ್ನು ಅಧಿಕೃತವಾಗಿ ಘೋಷಣೆ ಮಾಡಿದ ವೈದ್ಯರು, ಕುಟುಂಬಸ್ಥರ ಇಚ್ಛೆಯಂತೆ ವಿಜಯ್ ಅಂಗಾಂಗ ಕಸಿ ಮಾಡಿದ ಬಳಿಕ ಮೃತ ಶರೀರವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು.
ಕನ್ನಡ ಸಿನೆಮಾ ರಂಗ ಹಾಗೂ ರಂಗಭೂಮಿ ಕಲಾವಿದರು ಹಾಗೂ ಸಾರ್ವಜನಿಕರ ದರ್ಶನದ ಬಳಿಕ ಮೃತದೇಹದ ಅಂತಿಮ ಸಂಸ್ಕಾರವನ್ನು ಹುಟ್ಟೂರಾದ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದರಿಂದ ವಿಜಯ್ ಪಾರ್ಥಿವ ಶರೀರವನ್ನು ಮಂಗಳವಾರ ಮಧ್ಯಾಹ್ನ 2ಕ್ಕೆ ಪಂಚನಹಳ್ಳಿಗೆ ತರಲಾಗಿತ್ತು. ಮಾರ್ಗಮಧ್ಯೆ ಹುಳಿಯಾಲದಲ್ಲಿ ಕೆಲ ಹೊತ್ತು ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಕಡೂರು ಪಟ್ಟಣ ಹಾಗೂ ಪಂಚನಹಳ್ಳಿಯಲ್ಲಿ ಆಂಬುಲೆನ್ಸ್ ನಲ್ಲಿ ವಿಜಯ್ ಮೃತದೇಹದ ಮೆರವಣಿಗೆ ನಡೆಸಲಾಯಿತು.
ವಿಜಯ್ ಹುಟ್ಟೂರು ಪಂಚನಹಳ್ಳಿ ಗ್ರಾಮದ ಸ್ನೇಹಿತ ರಾಘವೇಂದ್ರ ಅವರ ತೆಂಗಿನತೋಟದಲ್ಲಿ ಸಂಚಾರಿ ವಿಜಯ್ ಮೃತದೇಹದ ಅಂತಿಮ ಸಂಸ್ಕಾರ ನೆರವೇರಿಸಲು ನಿರ್ಧರಿಸಿದ್ದರಿಂದ ಅಂತಿಮ ಸಂಸ್ಕಾರಕ್ಕೆ ಮಂಗಳವಾರ ಬೆಳಗ್ಗೆಯಿಂದಲೇ ಸಿದ್ಧತೆಗಳು ನಡೆದಿದ್ದವು. ಸಂಚಾರಿ ವಿಜಯ್ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ್ದರಿಂದ ಕಡೂರು ತಾಲೂಕಿನ ಕುಪ್ಪೂರು ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಶವಸಂಸ್ಕಾರಕ್ಕೆ ಅಗತ್ಯವಿದ್ದ ಎಲ್ಲ ಸಿದ್ಧತೆಗಳನ್ನು ಬೆಳಗ್ಗೆ ಮಾಡಿಕೊಳ್ಳಲಾಗಿತ್ತು. ಮೃತದೇಹವನ್ನು ಹುಟ್ಟೂರಿಗೆ ತರುವ ಸುದ್ದಿ ತಿಳಿದ ಗ್ರಾಮಸ್ಥರು, ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಪಂಚನಹಳ್ಳಿಯತ್ತ ದೌಡಾಯಿಸಿದ್ದರು.
ಕಡೂರು ಪಟ್ಟಣದ ಮೂಲಕ ವಿಜಯ್ ಪಾರ್ಥಿವ ಶರೀರ ಪಂಚನಹಳ್ಳಿ ಗ್ರಾಮದ ರಾಘವೇಂದ್ರ ಅವರ ತೋಟಕ್ಕೆ ಬರುತ್ತಿದ್ದಂತೆ ಸ್ಥಳದಲ್ಲಿದ್ದ ಕುಟುಂಬಸ್ಥರು, ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ತೋಟದ ಆವರಣದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ವಿಜಯ್ ಮೃತದೇಹದ ಅಂತಿಮ ದರ್ಶನಕ್ಕೆ ಕೆಲ ಹೊತ್ತು ಅವಕಾಶ ಕಲ್ಪಿಸಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಪೊಲೀಸರು ಕುಟುಂಬದ ಆಪ್ತರಿಗಷ್ಟೇ ಅಂತಿಮ ದರ್ಶನಕ್ಕೆ ಅವಕಾಶ ನೀಡಿದ್ದರು. ಅಭಿಮಾನಿಗಳು, ವಿವಿಧ ಗ್ರಾಮಗಳ ಜನರು ದೂರದಲ್ಲೇ ವಿಜಯ್ ಪಾರ್ಥಿವ ಶರೀರ ಕಂಡು ಕಣ್ಣೀರಿಡುತ್ತಾ ಹಿಂದಿರುಗುತ್ತಿದ್ದ ದೃಶ್ಯಗಳು ಕಂಡು ಬಂದವು.
ಅಂತಿಮ ದರ್ಶನದ ಬಳಿಕ ಕುಪ್ಪೂರು ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ವಿಜಯ್ ಮೃತದೇಹದ ಅಂತಿಮ ವಿಧಿಯನ್ನು ವೀರಶೈವ ಲಿಂಗಾಯತ ಧರ್ಮದಂತೆ ನೆರವೇರಿಸಲಾಯಿತು. ವಿಜಯ್ ಸಹೋದರರು, ಕುಟುಂಬಸ್ಥರು ಕಡೆ ಕ್ಷಣದ ಪೂಜೆ ಸಲ್ಲಿಸಿದ ಬಳಿಕ ವಿಜಯ್ ಶವವನ್ನು ಶಾಸ್ತ್ರೋಕ್ತವಾಗಿ ಮಣ್ಣಿನಿಂದ ಮುಚ್ಚಲಾಯಿತು.
ಅಂತಿಮ ಸಂಸ್ಕಾರದ ವೇಳೆ ಸಚಿವ ಮಾಧುಸ್ವಾಮಿ, ನಾನು ಅವನಲ್ಲ ಅವಳು ಸಿನೆಮಾ ನಿರ್ದೇಶಕ ಬಿ.ಎಸ್.ಲಿಂಗದೇವರು, ಕಡೂರು ಕ್ಷೇತ್ರದ ಮಾಜಿ ಶಾಸಕ ವೈಎಸ್ವಿ ದತ್ತ, ಹಾಲಿ ಶಾಸಕರಾದ ಬೆಳ್ಳಿಪ್ರಕಾಶ್, ಸಿ.ಟಿ.ರವಿ, ಸಿನೆಮಾ ನಟರಾದ ನಿನಾಸಂ ಸತೀಶ್, ಜಗ್ಗೇಶ್, ಡಾಲಿ ಧನಂಜಯ್, ಸಂಚಾರಿ ಥಿಯೇಟರ್ ನ ಮುಖ್ಯಸ್ಥೆ ಮಂಗಳಾ ಹಾಗೂ ಸಂಚಾರಿ ತಂಡದ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸರಕಾರಿ ಗೌರವದೊಂದಿಗೆ ಅಂತಿಮ ನಮನ: ಶವಸಂಸ್ಕಾರಕ್ಕೂ ಮುನ್ನ ಸಂಚಾರಿ ವಿಜಯ್ ಅವರ ಮೃತದೇಹಕ್ಕೆ ಸರಕಾರಿ ಗೌರವ ಸಲ್ಲಿಸಲಾಯಿತು. ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಎಸ್ಪಿ ಎಂ.ಎಚ್.ಅಕ್ಷಯ್, ಸಚಿವ ಮಾಧುಸ್ವಾಮಿ ಸಮ್ಮುಖದಲ್ಲಿ ಪೊಲೀಸರು ಸ್ಥಳದಲ್ಲಿ ಮೂರು ಸುತ್ತಿನ ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಿದರು.
ಅಭಿಮಾನಿಗಳಿಗೆ ನಿರಾಶೆ: ಕೋವಿಡ್ ಹಿನ್ನೆಲೆಯಲ್ಲಿ ಹೆಚ್ಚು ಜನರು ಸೇರುವುದನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸ್ ಇಲಾಖೆ ಪಂಚನಹಳ್ಳಿಯಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು. ಸ್ಥಳದಲ್ಲಿ ಡಿಸಿ, ಎಸ್ಪಿ ಮೊಕ್ಕಾಂ ಹೂಡಿ ಹೂಡಿದ್ದರು. ಗಣ್ಯರು ಹಾಗೂ ವಿಜಯ್ ಕುಟುಂಬಸ್ಥರು, ಆಪ್ತರಿಗೆ ಮಾತ್ರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ವಿಜಯ್ ಅವರ ಅಂತಿಮ ದರ್ಶನಕ್ಕೆ ದೂರದ ಊರುಗಳಿಂದ ಆಗಮಿಸಿದ್ದ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟದ ಅಂತಿಮ ದರ್ಶನ ಮಾಡಲು ಸಾಧ್ಯವಾಗದೇ ಕಣ್ಣೀರಿಡುತ್ತ ಹಿಂದಿರುಗಿದ್ದರು.
ಸಾವಿನಲ್ಲೂ ಸಾರ್ಥಕತೆ: ಸಂಚಾರಿ ವಿಜಯ್ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಸದಾ ಸಮಾಜಮುಖಿಯಾಗಿ ಚಿಂತಿಸುತ್ತಿದ್ದ ವಿಜಯ್ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಸದಾ ಚಿಂತಿಸುತ್ತಿದ್ದರು. ಈ ಕಾರಣಕ್ಕೆ ವಿಜಯ್ ದೇಹದ ಅಂಗಾಗಗಳ ದಾನಕ್ಕೆ ಕುಟುಂಬದವರು ಚರ್ಚಿಸಿ ತೀರ್ಮಾನಿಸಿದ್ದೆವು. ಅದರಂತೆ ಮಂಗಳವಾರ ಬೆಳಗ್ಗೆ ವಿಜಯ್ ದೇಹದ ಕಣ್ಣು, ಕಿಡ್ನಿ ಸೇರಿದಂತೆ ಕೆಲ ಅಂಗಗಳ ಕಸಿಯನ್ನು ವೈದ್ಯರು ನೆರವೇರಿಸಿದ್ದಾರೆ. ಅಂಗಾಗಗಳನ್ನು ಐವರಿಗೆ ಜೋಡಣೆ ಮಾಡಲಾಗಿದೆ ಎಂದು ತಿಳಿಯಿತು. ವಿಜಯ್ ದೈಹಿಕವಾಗಿ ಇಲ್ಲದಿದ್ದರೂ ಭೌತಿಕವಾಗಿ ನಮ್ಮೊಂದಿಗೆ ಸದಾ ಇರುತ್ತಾನೆಂಬ ಭಾವ ಈಗ ಮೂಡಿದೆ.
- ಸಿದ್ದೇಶ್, ಸಂಚಾರಿ ವಿಜಯ್ ಸಹೋದರಚಲನಚಿತ್ರ ಕ್ಷೇತ್ರದಲ್ಲಿ ರಾಷ್ಟ್ರಪತಿಗಳಿಂದ ರಾಷ್ಟ್ರ ಪ್ರಶಸ್ತಿ ಪಡೆಯುವ ಮೂಲಕ ಕಾಫಿನಾಡಿನ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿದ್ದ ಸಂಚಾರಿ ವಿಜಯ್ ಇನ್ನಿಲ್ಲ ಎಂಬುದನ್ನೂ ಊಹಿಸಲೂ ಸಾಧ್ಯವಾಗುತ್ತಿಲ್ಲ. ಚಿತ್ರರಂಗದಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಸಾಧನೆ ಮಾಡಿದ್ದ ವಿಜಯ್ ಅವರ ಅಗಲಿಕೆ ಕಲಾ ಕ್ಷೇತ್ರ ಹಾಗೂ ಚಿಕ್ಕಮಗಳೂರಿಗೆ ಆದ ನಷ್ಟವಾಗಿದೆ. ಅವರ ಬದುಕು ನಮ್ಮೆಲ್ಲರಿಗೂ ಆದರ್ಶವಾಗಿದೆ.
- ಸಿ.ಟಿ.ರವಿ, ಶಾಸಕ






.jpg)
.jpg)
.jpg)
.jpg)
.jpg)

