ಉಡುಪಿ: ಭಾರೀ ಮಳೆಗೆ ಬೈಂದೂರಿನ ಒತ್ತಿನೆಣೆಯಲ್ಲಿ ಗುಡ್ಡ ಕುಸಿತ
ಗುತ್ತಿಗೆದಾರರಿಂದ ಕಲ್ಲು-ಮಣ್ಣು ತೆರವು; ಸಂಚಾರ ಅಬಾಧಿತ

ಉಡುಪಿ, ಜೂ.16: ಕಳೆದೆರಡು ದಿನಗಳ ಸತತ ಮಳೆಯಿಂದ ಬೈಂದೂರು ತಾಲೂಕು ಪಡುವರಿ ಗ್ರಾಮದ ಒತ್ತಿನೆಣೆಯಲ್ಲಿ ಗುಡ್ಡದ ಒಂದು ಭಾಗ ಇಂದು ಮುಂಜಾನೆ ಕುಸಿದಿದ್ದು, ಆದರೆ ಇದರಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಗಳ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗಲಿಲ್ಲ ಎಂದು ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ತಿಳಿಸಿದ್ದಾರೆ.
ಸುದ್ದಿ ತಿಳಿದು ತಕ್ಷಣ ಕಾರ್ಯಪ್ರವೃತ್ತರಾದ ಗುತ್ತಿಗೆದಾರರಾದ ಐಆರ್ಬಿ ಕಂಪೆನಿ, ಜೆಸಿಬಿ ಬಳಸಿ ಕಲ್ಲು-ಮಣ್ಣುಗಳನ್ನು ತೆರವುಗೊಳಿಸಿದೆ. ಈ ಸಂದರ್ಭ ದಲ್ಲಿ ಸುಮಾರು 20 ನಿಮಿಷಗಳ ಕಾಲ ಮಾತ್ರ ರಾ.ಹೆದ್ದಾರಿಯಲ್ಲಿ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ತಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಹೆದ್ದಾರಿಗೆ ಯಾವುದೇ ಅಪಾಯ ಉಂಟಾಗಿಲ್ಲ ಎಂದವರು ಹೇಳಿದರು.
ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ವೇಳೆ ಇಲ್ಲಿ ಗುಡ್ಡವನ್ನು ಕೊರೆದು ರಸ್ತೆ ನಿರ್ಮಿಸಲಾಗಿತ್ತು. ಕಳೆದೆರಡು ದಿನಗಳಿಂದ ಸುರಿದ ಸತತ ಮಳೆಯಿಂದಾಗಿ ತೇವಗೊಂಡ ಗುಡ್ಡದ ಕೆಲವು ಭಾಗ ಕುಸಿದಿದೆ. ಕಳೆದ ಬಾರಿ ಮಳೆಗಾಲದಲ್ಲೂ ಕೂಡ ಇದೇ ಭಾಗದಲ್ಲಿ ರಸ್ತೆ ಪಕ್ಕದ ಗುಡ್ಡ ಕುಸಿದಿತ್ತು. ಬಳಿಕ ಅಪಾಯಕಾರಿ ಸ್ಥಿತಿಯಲ್ಲಿದ್ದ ಗುಡ್ಡದ ಬುಗಳಿಗೆ ರಿವಿಟ್ಮೆಂಟ್ ನಿರ್ಮಿಸಲಾಗಿತ್ತು.
ಜೇಡಿಮಣ್ಣಿನ ಈ ಗುಡ್ಡದ ಕೆಲವು ಭಾಗ ಮಳೆಗಾಲದಲ್ಲಿ ಕುಸಿಯುತ್ತಾ ಇರುತ್ತದೆ. ನೀರು ಹರಿದು ಹೋಗಲು ಚರಂಡಿ ಹಾಗೂ ಕಾಂಕ್ರೀಟ್ ತಡೆಗೋಡೆ ಕಟ್ಟಿದರೂ ಗುಡ್ಡದ ಮಣ್ಣು ಕುಸಿಯುವುದು ಮುಂದುವರಿದಿದೆ.
ಮಳೆಯಿಂದ ಮನೆಗೆ ಹಾನಿ: ಸತತ ಗಾಳಿ-ಮಳೆಗೆ ಬೈಂದೂರು ತಾಲೂಕು ತಗ್ಗರ್ಸೆ ಗ್ರಾಮದ ನಾರಾಯಣ ಎಂಬವರ ವಾಸ್ತವ್ಯದ ಪಕ್ಕಾ ಮನೆಗೆ ಭಾರೀ ಹಾನಿಯಾಗಿದ್ದು, ಎರಡು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಅದೇ ರೀತಿ ಕಾಪು ತಾಲೂಕಿನ ಕಳತ್ತೂರು ಗ್ರಾಮದ ಅರುಣ ಶೇರಿಗಾರ್ತಿಯವರ ಮನೆ ಗಾಳಿ-ಮಳೆಯಿಂದ ಸಂಪೂರ್ಣ ಹಾನಿಗೊಂಡಿದ್ದು 1.5ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಬೈಂದೂರು ತಾಲೂಕು ಕಂಬದಕೋಣೆಯ ಸಾಧು ಅವರ ಮನೆಗೆ 50,000, ಉಡುಪಿ ತಾಲೂಕು ಹೆರ್ಗಾದ ಮುಕುಂದ ನಾಯಕ್ ಮನೆಗೆ ಹಾಗೂ ಬ್ರಹ್ಮಾವರ ತಾಲೂಕು ಹಾರಾಡಿ ಗ್ರಾಮದ ಫಕೀರ್ ಸಾಹೇಬ್ರ ಮನೆಗಳಿಗೆ ತಲಾ 40,000ರೂ.ನಷ್ಟವಾಗಿದೆ.
ಕಾಪು ತಾಲೂಕು ಎಲ್ಲೂರು ಗ್ರಾಮದ ಸದಾಶಿವ ಶೆಟ್ಟಿ ಮನೆ ಹಾಗೂ ಕುತ್ಯಾರು ಗ್ರಾಮದ ಶ್ರೀಮತಿ ಆಚಾರ್ತಿ ಮನೆಗೆ ತಲಾ 25,000, ಮೂಡುಬೆಟ್ಟು ಗ್ರಾಮದ ಚಂದ್ರ ಪೂಜಾರಿ ಮನೆಗೆ 20,000ರೂ. ಕುತ್ಯಾರಿನ ನಾಗರತ್ನರ ಮನೆಗೆ 15,000ರೂ.ನಷ್ಟವಾಗಿದೆ.
ಉಳಿದಂತೆ ಕುತ್ಯಾರಿನ ಶಾಲಿನಿ, ಅಚ್ಚುತ ಆಚಾರ್ಯ, ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದ ಹೆಲೆನಾ ಡೇಸಾ ಮನೆಗಳಿಗೂ ಗಾಳಿ-ಮಳೆಯಿಂದ ಹಾನಿಯಾದ ಬಗ್ಗೆ ವರದಿಗಳು ಬಂದಿವೆ.











